ವೈಭವದ ಕ್ರಿಸ್ಮಸ್ ಸ್ವಾಗತಕ್ಕೆ ತರಹೇವಾರಿ ಗೋದಲಿಯ ಮೆರಗು
ಮೈಸೂರು, ಡಿಸೆಂಬರ್ 24 : ಮೈಸೂರು ನೆಲದ ಕಂಪೇ ಹಾಗೆ. ಯಾವುದೇ ಮತವಿರಲಿ, ಪಂಥವಿರಲಿ ಎಲ್ಲದಕ್ಕೂ ಎಲ್ಲರಿಗೂ ಇಂಬು ನೀಡುವ ಗುಣ ಈ ಮಣ್ಣಿಗಿದೆ. ನವರಾತ್ರಿಯಲ್ಲಿ ಗೊಂಬೆಗಳ ಅಲಂಕಾರ, ಈದ್ ನಲ್ಲಿ ಮಸೀದಿಗಳ ಸಿಂಗಾರ, ಡಿಸೆಂಬರ್ ನಲ್ಲಿ ಗೋದಲಿಗಳ ನಿರ್ಮಾಣ. ಹೀಗೆ ಎಲ್ಲ ಆಚಾರಗಳಿಗೂ ಅದರದೇ ಆದ ವೈಶಷ್ಟ್ಯ ನೀಡುವುದು ಇಲ್ಲಿನ ಗುಣಗಾರಿಕೆ.
ಸದ್ಯ ಇಲ್ಲಿ ಹೇಳಹೊರಟಿರುವುದು ಗೋದಲಿಗಳ ಬಗ್ಗೆ. ಕ್ರಿಸ್ಮಸ್ ಹತ್ತಿರವಾಗುತ್ತಿದ್ದಂತೆ ಕ್ರೈಸ್ತರ ಮನೆಗಳಲ್ಲಿ ಸಡಗರ ಮನೆ ಮಾಡಿದೆ. ಹಬ್ಬಕ್ಕಾಗಿ ತರಾತುರಿಯ ತಯಾರಿ ನಡೆದಿದೆ. ನಗರದ ಪ್ರತಿಯೊಂದು ಚರ್ಚು, ಶಾಲೆ, ಕಾಲೇಜು, ವಾಣಿಜ್ಯ ಮಳಿಗೆಗಳು, ಕ್ರೈಸ್ತರ ಮನೆಗಳಲ್ಲೂ ಗೋದಲಿ ನಿರ್ಮಿಸುವುದೇ ಸೊಗಸು.
ಮಂಗಳೂರಲ್ಲಿ ಕ್ರಿಸ್ಮಸ್ ಶಾಪಿಂಗ್, ಕುಸ್ವಾರ್ ತಯಾರಿಕೆ ಜೋರು
ನವರಾತ್ರಿ ಉತ್ಸವದಲ್ಲಿ ಹಿಂದೂಗಳು ಮನೆಯಲ್ಲಿ ಗೊಂಬೆಗಳ ಅಲಂಕಾರ ಮಾಡುವ ರೀತಿಯೇ ಕ್ರೈಸ್ತರು ಗೋದಲಿ ನಿರ್ಮಿಸುತ್ತಾರೆ.
ಏಸು ಸ್ವಾಮಿ ಹುಟ್ಟಿದ್ದು ಕೊಟ್ಟಿಗೆ (ಗೋದಲಿ)ಯಲ್ಲಿ. ಅದರ ಸ್ಮರಣೆಗಾಗಿ ಕ್ರಿಸ್ಮಸ್ ದಿನದಂದು ಗೋದಲಿ ನಿರ್ಮಿಸುವುದು ವಾಡಿಕೆ. ದೈವಾಂಶಿಯಾದ ಏಸುವೇ ಆ ಗೋದಲಿಯಲ್ಲಿ ಮತ್ತೆ ಅವತರಿಸುತ್ತಾರೆ ಎಂಬ ನಂಬಿಕೆ ಇದಕ್ಕೆ ಮೂಲ ಪ್ರೇರಣೆ.
ಕ್ರೈಸ್ತರು ಗೋದಲಿ ಮಾಡುವಂತೆಯೇ ಹಿಂದೂಗಳು ಗಣೇಶ ಚತುರ್ಥಿಯಲ್ಲಿ ಗಣಪತಿ ಮೂರ್ತಿಯ ಮಂಟಪಗಳನ್ನು ಮಾಡುತ್ತಾರೆ. ಪಕ್ಕದ ಮಹಾರಾಷ್ಟ್ರಕ್ಕೆ ಹೋದರೆ ಛತ್ರಪತಿ ಶಿವಾಜಿ ಅಲ್ಲಿ ಆರಾಧ್ಯ ವ್ಯಕ್ತಿ. ಶಿವಾಜಿ ಜಯಂತಿ ದಿನ ಪ್ರತಿಯೊಬ್ಬ ಮರಾಠಿಗ ತಮ್ಮ ಮನೆಯ ಮುಂದೆ ಶಿವಾಜಿಯ ಕೋಟೆ ಮಾದರಿಗಳನ್ನು ನಿರ್ಮಾಣ ಮಾಡಿ, ಗೌರವ ಸಲ್ಲಿಸುವುದು ರೂಢಿ.
ಬಾಲಕೃಷ್ಣನನ್ನು ಪೂಜಿಸುವ ಸಂಪ್ರದಾಯ
ಅತ್ತ ಉತ್ತರದ ಗುಜರಾತ್, ಮಧ್ಯಪ್ರದೇಶಗಳಲ್ಲಿ ಕೃಷ್ಣಾವತಾರಕ್ಕೆ ಪ್ರಾಧಾನ್ಯತೆ. ಕೃಷ್ಣ ಹುಟ್ಟಿದ್ದು ಜೈಲಿನಲ್ಲಿ. ಹಾಗಾಗಿ, ಮನೆ- ಮಂದಿರಗಳಲ್ಲಿ ಜಗುಲಿ ಕಟ್ಟಿಕೊಂಡು ಅದನ್ನೇ ಬಂಧಿಖಾನೆಯಾಗಿ ಮಾಡಿ, ಬಾಲಕೃಷ್ಣನನ್ನು ಇಟ್ಟು ಪೂಜಿಸುವ ಸಂಪ್ರದಾಯ ಅಲ್ಲಿದೆ.
ಧರ್ಮ ಸಾಮರಸ್ಯ ಬಿತ್ತುತ್ತಲೇ ಬಂದಿದೆ
ಈ ಎಲ್ಲದರಲ್ಲೂ ಸಾಮಾನ್ಯ ಹೋಲಿಕೆಗಳಿವೆ. ಪ್ರಕೃತಿ ಸಹಜವಾದ ಆಕಾರದ ಗೊಂಬೆಗಳು, ಹಸು- ಕರು- ಜಾನುವಾರುಗಳ ಮೂರ್ತಿಗಳು, ಸೂರ್ಯ, ಚಂದ್ರ- ನಕ್ಷತ್ರಾದಿಯಾಗಿ ನಭೋಮಂಡಲದ ಅಚ್ಚರಿಗಳು, ಹಸಿರು- ಹಣ್ಣು- ಹೂ... ಎಲ್ಲವೂ ಎಲ್ಲ ಆಕೃತಿಗಳಲ್ಲೂ ಸಾಮಾನ್ಯ. ಅಂದರೆ; ಧರ್ಮದ ಆಕೃತಿ ಬೇರೆಬೇರೆಯಾದರೂ ಬಳಕೆಯಾಗುವ ಪ್ರಕೃತಿ ಒಂದೇ ಎಂಬ ಸಂದೇಶ ಇಲ್ಲಿ ವೇದ್ಯವಾಗುತ್ತದೆ. ಸ್ವತಃ ಧರ್ಮಕ್ಕೇ ಅರಿವಿಲ್ಲದಂತೆ ಧರ್ಮ ಸಾಮರಸ್ಯವನ್ನು ಬಿತ್ತುತ್ತಲೇ ಬಂದಿದೆ.
ಮಂಗಳೂರಲ್ಲಿ ಕಳೆಕಟ್ಟಿದ ಕ್ರಿಸ್ ಮಸ್ ಸಂಭ್ರಮ, ಅದ್ಧೂರಿ ಸಿದ್ಧತೆ
ಗೋದಲಿಗಳ ನಿರ್ಮಾಣ ಹೇಗೆ ?
ಗೋದಲಿಗಳನ್ನು ಇಟ್ಟು ಏಸುಕ್ರಿಸ್ತನ ಹುಟ್ಟನ್ನು ಆಚರಿಸುವ ಪರಿ ಹಿಂದಿನಿಂದಲೂ ಇದೆ. ಮೇರಿ, ಜೋಸೆಫ್, ಬಾಲ ಏಸು, ಮೂರು ದೇವತೆಗಳು, ನಕ್ಷತ್ರ, ಕುರಿ, ಹಸು, ಕೊಟ್ಟಿಗೆ ಹೀಗೆ ಏಸು ಜನನವಾದ ಚಿತ್ರಣವನ್ನು ಕಟ್ಟಿಕೊಡುವ ಗೊಂಬೆಗಳನ್ನು ಕೂರಿಸುವುದು ಸಂಪ್ರದಾಯ. ಏಸುವಿನ ಹುಟ್ಟು ಪ್ರತಿ ಮನೆಯಲ್ಲೂ ಅಲ್ಲ, ಮನಸಿನಲ್ಲೂ ಆಗಲಿ ಎಂಬ ಆಶಯ ಈ ಸಂಪ್ರದಾಯಕ್ಕಿದೆ.
ನಗರದಲ್ಲಿ ಗೋದಲಿ ಮಾಡಲು ಸಮಯವಿರದೆ ಖರೀದಿಗೆ ಮುಂದಾಗುವವರೂ ಇದ್ದಾರೆ. ಹಳ್ಳಿಗಳಲ್ಲಿ ಸಹಜವಾಗಿಯೇ ಹುಲ್ಲು, ಗರಿಕೆ, ಸಸ್ಯಗಳನ್ನು ಬಳಸುತ್ತಾರೆ. ಆದರೆ, ನಗರದಲ್ಲಿ ಕೃತಕ ವಾತಾವರಣದ ಗೋದಲಿಗಳನ್ನು ನಿರ್ಮಿಸುವುದು ಸಾಮಾನ್ಯ.
ಮಣ್ಣಿನ ಗೊಂಬೆಗಳು ಮಾಯವಾಗಿವೆ
ಗೋದಲಿಗೆ ಬೇಕಾಗುವ ಗೊಂಬೆಗಳು ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಿ ಹೆಚ್ಚಾಗಿ ಸಿಗುತ್ತವೆ. ತಮಿಳುನಾಡು, ಮದ್ರಾಸ್, ಥಾಯ್ಲೆಂಡ್, ಚೀನಾದಲ್ಲಿ ತಯಾರಾದ ಗೊಂಬೆಗಳೂ ಇಲ್ಲಿ ಲಭ್ಯ. ಪ್ಲಾಸ್ಟರ್ ಆಫ್ ಪ್ಯಾರಿಸ್, ಫೈಬರ್, ಟೆರಕೋಟಾ ವಸ್ತುಗಳು ಬಂದ ಮೇಲೆ ಮಣ್ಣಿನ ಗೊಂಬೆಗಳು ಮಾಯವಾಗಿವೆ.
ಪ್ಲಾಸ್ಟಿಕ್, ನಾರಿನ ರೆಡಿಮೇಡ್ ಹುಲ್ಲು ಬಂದಾಗಿಂದ ನೈಸರ್ಗಿಕ ಹುಲ್ಲು ಬಳಸುವುದೂ ನಿಂತಿದೆ. ಡಿಸೆಂಬರ್ 24ರ ಮಧ್ಯರಾತ್ರಿ 12ಕ್ಕೆ ಏಸು ಜನಿಸಿದರು. ಈ ಮಹೋನ್ನತ ಘಳಿಗೆ ಸಂಭವಿಸಿ 2018 ವರ್ಷಗಳಾಗಿವೆ. ಆದರೂ ಆ ದಿನದ ಭಕ್ತಿ, ಅಚ್ಚರಿ, ಅಯಸ್ಕಾಂತೀಯ ಸೆಳೆತ ಕಡಿಮೆಯಾಗಿಲ್ಲ, ಸಾಮರಸ್ಯ ಹಸಿವು ಇಂಗಿಲ್ಲ. ನಮ್ಮೆಲ್ಲರ ಹೃದಯದಲ್ಲಿ ಏಸು ಮತ್ತೆ ಹುಟ್ಟಲಿ ಎಂಬ ಸಂದೇಶ ಸ್ತಬ್ಧವಾಗಿಲ್ಲ.