ಮೈಸೂರಿನ ಕಮಿಷನರ್ ಕಚೇರಿ ಉದ್ಘಾಟನೆಗೆ ದೂರುದಾರರ ಆಕ್ಷೇಪ
ಮೈಸೂರು, ನವೆಂಬರ್ 21: ಸಾರ್ವಜನಿಕ ಉದ್ಯಾನದ ಜಾಗದಲ್ಲಿ ನಗರ ಪೊಲೀಸ್ ಕಮಿಷನರ್ ಕಚೇರಿ ನಿರ್ಮಾಣಕ್ಕೆ ಈ ಹಿಂದೆ ರಾಜ್ಯ ಹೈಕೋರ್ಟ್ ನಿಂದ ತಡೆಯಾಜ್ಞೆ ನೀಡಿದ್ದರೂ ಸಿಎಂ ಯಡಿಯೂರಪ್ಪ ಅವರಿಂದ ಉದ್ಘಾಟನೆಗೆ ದಿನಾಂಕ ನಿಗದಿ ಮಾಡಿರುವುದು ಸರಿಯಲ್ಲ ಎಂದು ದೂರುದಾರ ಅಶೋಕ್ ಕುಮಾರ್ ಆರೋಪಿಸಿದ್ದಾರೆ.
ನಗರದ ನಜರ್ಬಾದ್ನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪೊಲೀಸ್ ಕಮಿಷನರ್ ಕಚೇರಿ ಉದ್ಯಾನವನಕ್ಕೆ ಸೇರಿದ ಜಾಗದಲ್ಲಿದ್ದು, ಯಾವುದೇ ಅನುಮತಿ ಪಡೆಯದೇ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿ ನಜರ್ ಬಾದ್ ನಿವಾಸಿ ಅಶೋಕ್ ಕುಮಾರ್ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ಮೈಸೂರು; ಯಡಿಯೂರಪ್ಪ ಅವರಿಂದ ನಗರ ಪೊಲೀಸ್ ಆಯುಕ್ತರ ಕಚೇರಿ ಉದ್ಘಾಟನೆ
ವಿಚಾರಣೆ ನಡೆಸಿದ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಈ ತಡೆಯಾಜ್ಞೆ ಲೆಕ್ಕಿಸದೆ ಪೊಲೀಸ್ ಕಮಿಷನರ್ ಕಚೇರಿ ನಿರ್ಮಾಣವಾಗಿದೆ. ಇದನ್ನು ಸಿದ್ದರಾಮಯ್ಯ ಸಿಎಂ ಆಗಿದ್ದ ಕಾಲದಲ್ಲಿ ಉದ್ಘಾಟನೆ ಮಾಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆಗ ದೂರುದಾರ ಅಶೋಕ್ ಕುಮಾರ್ ಪ್ರತಿಕಾ ಹೇಳಿಕೆ ನೀಡಿದ್ದರು. ಇದನ್ನು ಗಮನಿಸಿದ ಸಿದ್ದರಾಮಯ್ಯ ಕೋರ್ಟ್ನ ತಡೆಯಾಜ್ಞೆಯ ಉಲ್ಲಂಘನೆ ಆಗುತ್ತದೆ ಎಂದು ಉದ್ಘಾಟನೆಗೆ ಬರಲಿಲ್ಲ. ಆದರೆ, ಮಂಗಳವಾರ ನ.24ರಂದು ಸಿಎಂ ಯಡಿಯೂರಪ್ಪ ಈ ಕಟ್ಟಡ ಉದ್ಘಾಟನೆ ಮಾಡುತ್ತಾರೆ ಎಂದು ದಿನಾಂಕ ನಿಗದಿ ಮಾಡಲಾಗಿದೆ.
ತಡೆಯಾಜ್ಞೆ ಇದ್ದರೂ ಯಡಿಯೂರಪ್ಪ ಈ ನೂತನ ಪೊಲೀಸ್ ಕಮಿಷನರ್ ಕಚೇರಿ ಉದ್ಘಾಟನೆಗೆ ಬರುತ್ತಿರುವುದು ಸರಿಯಲ್ಲ. ಇದು ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಅಶೋಕ್ ಕುಮಾರ್ ಹೇಳಿದ್ದಾರೆ.