"ಸರಳ ದಸರಾ ಆಚರಣೆಗೆ ಇಷ್ಟೊಂದು ಖರ್ಚು, ವೆಚ್ಚವೇಕೆ?"
ಮೈಸೂರು, ಅಕ್ಟೋಬರ್ 7: ಕೊರೊನಾ ಸೋಂಕಿನ ಕಾರಣದಿಂದಾಗಿ ಪ್ರಸ್ತುತ ವರ್ಷ, ರಾಜ್ಯ ಸರ್ಕಾರ ಸಾಂಸ್ಕೃತಿಕ ನಗರಿಯಲ್ಲಿ ಸರಳವಾಗಿ ದಸರಾ ಆಚರಿಸಬೇಕೆಂದು ಆದೇಶ ಹೊರಡಿಸಿದೆ. ಈ ಬಾರಿ ಕೇವಲ ಎರಡು ಸಾವಿರ ಮಂದಿಗೆ ಪ್ರವೇಶ ಎಂದು ತಿಳಿಸಿದೆ.
ಆದರೆ ಸರಳ ದಸರಾ ಆಚರಣೆಗಾಗಿ 10 ಕೋಟಿ ಬಿಡುಗಡೆ ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಈ ಕುರಿತು ಮಾತನಾಡಿದ ಸಮಾಜ ಸೇವಕ ಜಿ.ಪಿ. ಹರೀಶ್ ಅವರು, "ಜನಸಾಮಾನ್ಯರ ತೆರಿಗೆ ಹಣದಿಂದ ವೆಚ್ಚ ಮಾಡಲಾಗುತ್ತಿದ್ದು, ಜನತೆಗೆ ಭಾರೀ ಹೊರೆಯಾಗಲಿದೆ. ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿರುವ ಆ ಎರಡು ಸಾವಿರ ಜನರ ಹೆಸರನ್ನು ಪಟ್ಟಿ ಮಾಡಿ ಅವರ ಹತ್ತಿರ ಈ ಹಣ ವಸೂಲಿ ಮಾಡಿ ದಸರಾ ಆಚರಿಸಲಿ" ಎಂದಿದ್ದಾರೆ.
"ಸೋಂಕಿನಿಂದ ಬಳಲುತ್ತಿರುವವರಿಗೆ ವಿನಿಯೋಗಿಸಿ"
ಇಡೀ ದೇಶ ಕೊರೊನಾದಿಂದ ಸಂಕಷ್ಟಕ್ಕೀಡಾಗಿದ್ದು, ಸಾವಿನ ಪ್ರಮಾಣವೂ ಹೆಚ್ಚಿದೆ. ಅದೇ 10 ಕೋಟಿ ರೂ. ಹಣವನ್ನು ಕೊರೊನಾದಿಂದ ನರಳುತ್ತಿರುವವರಿಗೆ ವಿನಿಯೋಗಿಸಿದ್ದರೆ, ಸಂಕಷ್ಟದಲ್ಲಿರುವವರಿಗೆ ತುಂಬಾ ಸಹಾಯವಾದರೂ ಆಗುತ್ತಿತ್ತು ಎಂದರು.
ಮೈಸೂರು ದಸರಾ ಆಚರಣೆ ಬಗ್ಗೆ ವಿಶ್ವನಾಥ್ ತೀವ್ರ ಆಕ್ಷೇಪ
"ಜನರು ಅಲಂಕಾರ ನೋಡಲು ಬರದೇ ಇರುತ್ತಾರೆಯೇ?"
ಈಗಾಗಲೇ ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ದೀಪಾಲಂಕಾರ ಕಾರ್ಯ ಭರದಿಂದ ಸಾಗುತ್ತಿದೆ. ದಸರಾದ ಪ್ರಮುಖ ಆಕರ್ಷಣೆ ದೀಪಾಲಂಕಾರ. ಹೀಗೆ ವಿಜೃಂಭಣೆಯಿಂದ ದೀಪಾಲಂಕಾರ ಮಾಡಿದರೆ ಸಾಮಾನ್ಯವಾಗಿ ಜನರು ಅಲಂಕಾರವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇದರಿಂದ ಕೊರೊನಾ ನಿಯಂತ್ರಿಸಲು ಸಾಧ್ಯವೇ? ಈಗಾಗಲೇ ನಗರದಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಮಕ್ಕಳಿಗೆ ಶಾಲಾ, ಕಾಲೇಜು ರಜೆ ಇರುವುದರಿಂದ ಪ್ರವಾಸಿಗರು ಕೊರೊನಾ ನಿರ್ಲಕ್ಷಿಸಿ, ನಗರದತ್ತ ಬರುತ್ತಿದ್ದಾರೆ. ಜನದಟ್ಟಣೆಯಾಗಿ ಮತ್ತಷ್ಟು ಸೋಂಕು ತಗುಲಿದರೆ ಮುಂದೆ ಸೋಂಕಿನ ಪ್ರಮಾಣ ಮಿತಿ ಮೀರುವ ದಿನ ದೂರವಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಟೀಕೆ ಮಾಡಲಾಗುತ್ತಿದೆ.
"ದಸರಾದಿಂದ ಅನಾಹುತವಾದರೆ ಕೇಸ್ ದಾಖಲಿಸುತ್ತೇವೆ"
ಈ ಮಧ್ಯೆ ದಸರಾ ಆಚರಣೆಯಿಂದ ಅನಾಹುತ ಉಂಟಾದರೆ ನಿಮ್ಮ ಮೇಲೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತೇವೆ ಎಂದು ಸರ್ಕಾರಕ್ಕೆ ಮೈಸೂರು ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಭಾನುಮೋಹನ್ ಪತ್ರದ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಅರ್ಥಪೂರ್ಣವಾದ ಸರಳ ದಸರಾ ಆಚರಣೆ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್
ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿರುವ ಭಾನುಮೋಹನ್, ನಾಡಹಬ್ಬ ದಸರಾ ಅರಮನೆಯವರಿಗೆ ಸೀಮಿತವಾಗಿರಲಿ. ಇದರಲ್ಲಿ ಸರ್ಕಾರ ಮೂಗು ತೂರಿಸುವುದು ಸರಿಯಲ್ಲ. ದಸರಾ ಆಚರಣೆಯಿಂದ ಅನಾಹುತ ಉಂಟಾದರೆ ನಿಮ್ಮ ಮೇಲೆ ನ್ಯಾಯಾಲಯದಲ್ಲಿ ಕೇಸ್ ದಾಖಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣ
ಮೈಸೂರಿನಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ನಾಡಹಬ್ಬ ದಸರಾವನ್ನು ಅರಮನೆಯವರೇ ಸಾಂಪ್ರದಾಯಿಕವಾಗಿ ಆಚರಿಸಿಕೊಳ್ಳಲಿ. ಸದ್ಯ ಈ ಆಚರಣೆಗೆ ಯಾವ ಸಚಿವರು ಹಾಗೂ ಸಾರ್ವಜನಿಕರು ಆಗಮಿಸುವುದು ಬೇಡ. ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಜನ ಸೇರಿಸಿ ದಸರಾ ಆಚರಣೆ ಮಾಡುವುದು ಸೂಕ್ತವಲ್ಲ ಎಂದು ಭಾನುಮೋಹನ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಹಾಗೆಯೇ ಒಂದು ವೇಳೆ ಸರ್ಕಾರ ತಮ್ಮ ನಿಲುವಿಗೆ ಬದ್ಧವಾಗಿ ಜನರನ್ನು ಸೇರಿಸಿ ಆಚರಣೆ ಮಾಡಿದರೆ ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಜವಾಬ್ದಾರರಾಗಬೇಕಾಗುತ್ತದೆ ಎಂದೂ ತಿಳಿಸಿದ್ದಾರೆ.