ಲೋಕಲ್ ವಾರ್ ಗೆ ಸಜ್ಜಾದ ಸಾಂಸ್ಕೃತಿಕ ನಗರಿ ಮೈಸೂರು
ಮೈಸೂರು, ಆಗಸ್ಟ್. 10 : ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ನಡೆಯಲಿರುವ ಮತ್ತೊಂದು ಮಿನಿ ಸಮರಕ್ಕೆ ಅಧಿಸೂಚನೆ ಹೊರಬಿದ್ದಿದ್ದು, ಮೈಸೂರು ಮಹಾನಗರ ಪಾಲಿಕೆಯ 65 ವಾರ್ಡ್ ಗೆ ಇಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಟಿ. ಯೋಗೀಶ್ ತಿಳಿಸಿದರು.
ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಚುನಾವಣೆಗೆ ಸಜ್ಜಾಗಿದೆ. ಡಿಸಿ ಅಭಿರಾಂ ಜಿ.ಶಂಕರ್ ಅವರು ಅಧಿಸೂಚನೆ ಹೊರಡಿಸಲಿದ್ದು, ಆಯಾ ತಾಲೂಕಿನಲ್ಲಿ ಸಹಾಯಕ ಚುನಾವಣಾಧಿಕಾರಿಗಳಾಗಿರುವ ತಹಸೀಲ್ದಾರ್ ನಾಮಪತ್ರಗಳನ್ನು ಸ್ವೀಕರಿಸಲಿದ್ದಾರೆ.
ಲೋಕಲ್ ಫೈಟ್'ಗೆ ಸಿದ್ಧಗೊಳ್ಳುತ್ತಿದೆ ಉತ್ತರ ಕನ್ನಡ : ಅಭ್ಯರ್ಥಿ ಆಯ್ಕೆಗೆ ತಾಲೀಮು
ಆ.29ರಂದು ರಾಜ್ಯಾದ್ಯಂತ 105 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ. ಜಿಲ್ಲೆಯ ಪಿರಿಯಾಪಟ್ಟಣ, ಎಚ್.ಡಿ.ಕೋಟೆ, ತಿ.ನರಸೀಪುರ ಪುರಸಭೆಗಳ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗವು ದಿನಾಂಕ ಪ್ರಕಟಿಸಿದ್ದು, ಈಗಾಗಲೇ ನೀತಿ ಸಂಹಿತೆ ಜಾರಿಗೆ ಬಂದಿದೆ ಎಂದರು.
ಈ ಹಿನ್ನೆಲೆಯಲ್ಲಿ ಇದೇ 18ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಆ.20 ಕಡೆಯ ದಿನವಾಗಿದೆ. ಮೈಸೂರು ಮಹಾನಗರ ಪಾಲಿಕೆಗೆ ಆಗಸ್ಟ್ 13 ರಿಂದ 20ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, 21 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. 23ರಂದು ನಾಮಪತ್ರ ಹಿಂಪಡೆಯಬಹುದಾಗಿದೆ.
ಹಾಗೆಯೇ ಪುರಸಭೆ ಹಾಗೂ ಮಹಾನಗರ ಪಾಲಿಕೆಯ ಮತ ಎಣಿಕೆ ಇದೇ ಸೆ.3ರಂದು ನಡೆಯಲಿದೆ ಎಂದರು.
ಉಡುಪಿ ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜು
ತಾಲೂಕಿನ ತಿ. ನರಸೀಪುರ ಪುರಸಭೆ 23, ಪಿರಿಯಾಪಟ್ಟಣ ಪುರಸಭೆ 23, ಎಚ್.ಡಿ. ಕೋಟೆ ಪುರಸಭೆಯಲ್ಲಿ 23 ಸದಸ್ಯರಿದ್ದು, ಒಟ್ಟು 69 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಜಿಲ್ಲೆಯ 3 ಪುರಸಭೆಯ 69(ತಲಾ 23ವಾರ್ಡ್) ವಾರ್ಡ್ ಗಳಿಂದ 29943 ಪುರುಷರು, 30711 ಮಹಿಳೆಯರು ಸೇರಿದಂತೆ ಒಟ್ಟು 60,654 ಮತ ಚಲಾಯಿಸಲಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತಿದೆ.
ಅಭ್ಯರ್ಥಿಗಳು ಚುನಾವಣಾ ವೆಚ್ಚದ ವಿವರವನ್ನು ನಾಮಪತ್ರ ಸಲ್ಲಿಸಿದ ದಿನಾಂಕದಿಂದ ಫಲಿತಾಂಶ ಘೋಷಣೆಯಾಗುವ ದಿನಾಂಕದವರೆಗೆ ನಗರಸಭೆ 2 ಲಕ್ಷ ರೂ., ಪುರಸಭೆ 1.5 ಲಕ್ಷ ರೂ., ಪಟ್ಟಣ ಪಂಚಾಯಿತಿ 1 ಲಕ್ಷ ರೂ. ಗರಿಷ್ಟ ಮಿತಿಗೆ ಒಳಪಟ್ಟು ಚುನಾವಣಾ ವೆಚ್ಚಗಳನ್ನು ಮಾಡಬಹುದಾಗಿರುತ್ತದೆ ಎಂದು ತಿಳಿಸಿದ್ದಾರೆ.