ದೇವೇಗೌಡರ ಕುಟುಂಬಕ್ಕೆ 9ರ ಕಂಟಕ ಎಂದಿದ್ದೆ: ಮಾಜಿ ಸಚಿವ ಎ ಮಂಜು
ಮೈಸೂರು, ಜುಲೈ 24: "ನಿಂಬೆಹಣ್ಣು, ಬರಿಗಾಲಿನ ಪೂಜೆ ಯಾವುದೂ ರೇವಣ್ಣ ಅವರಿಗೆ ಫಲ ಕೊಡಲಿಲ್ಲ. ದೇವೇಗೌಡರ ಕುಟುಂಬಕ್ಕೆ 9ರ ಕಂಟಕವಿದೆ" ಎಂದು ಮಾಜಿ ಸಚಿವ ಎ. ಮಂಜು ವ್ಯಂಗ್ಯವಾಡಿದ್ದಾರೆ.
Live Updates ನಾಳೆ ರಾಜ್ಯಪಾಲರ ಭೇಟಿ: ಸರ್ಕಾರ ರಚನೆಗೆ ಯಡಿಯೂರಪ್ಪ ಹಕ್ಕು ಮಂಡನೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರೇವಣ್ಣ ಬರಿಗಾಲಿನಲ್ಲಿ ನಡೆದರೆ, ನಿಂಬೆಹಣ್ಣು ಹಿಡ್ಕೊಂಡ್ ಹೋದ್ರೆ ತಮ್ಮ ಕುಟುಂಬಕ್ಕೆ ಒಳ್ಳೇದಾಗುತ್ತೆ ಅಂದುಕೊಂಡರು. ಆದರೆ ಅದಾಗಲಿಲ್ಲ. ದೇವೇಗೌಡರ ಕುಟುಂಬಕ್ಕೆ 9ರ ಕಂಟಕ ಇದೆ ಎಂದು ಮುಂಚಿತವಾಗೇ ಹೇಳಿದ್ದೆ. 1999, 2009, 2019 ಅವರಿಗೆ ಆಗೋದಿಲ್ಲ ಎಂದಿದ್ದೆ. ಮಂಗಳವಾರ ಸದನ ಮುಂದೂಡಿದರೆ ಒಳ್ಳೆಯದಾಗುತ್ತದೆ ಎಂದು ರೇವಣ್ಣ ಸದನ ಮುಂದೂಡಲು ಮುಂದಾದರು. ಆದರೆ ಅವರ ನಿಂಬೆಹಣ್ಣಿಗೆ ತಕ್ಕ ಉತ್ತರ ದೊರೆತಿದೆ" ಎಂದರು.
"ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯಕ್ಕೆ, ಯಡಿಯೂರಪ್ಪ ಹಾಗೂ ಮೋದಿ ಅವರಿಗೆ ಒಳ್ಳೆದಾಗಲಿ ಎಂದು ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿದ್ದೇನೆ. ಕಳೆದ ಹದಿನೈದು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಬೆಳವಣಿಗೆಗೆ ತೆರೆ ಬಿದ್ದಿದೆ. ಮೈತ್ರಿ ಸರ್ಕಾರವನ್ನು ಯಾರೂ ಬೀಳಿಸಿಲ್ಲ, ಅವರೇ ಬೀಳಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ ಸುಭಿಕ್ಷವಾಗಿ ಸಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ" ಎಂದು ತಿಳಿಸಿದರು.