ನಂಜನಗೂಡು ನೋಟ : ಮೂರನೇ ಸ್ಥಾನ ಪಡೆದ ನೋಟಾ!
ನಂಜನಗೂಡು, ಏಪ್ರಿಲ್ 13 : ನಂಜನಗೂಡು ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಭರ್ಜರಿ ಸ್ಪರ್ಧೆ ನಡೆಯುತ್ತದೆಂದು ನಿರೀಕ್ಷಿಸಲಾಗಿತ್ತು. ಇಬ್ಬರ ಹೋರಾಟದಲ್ಲಿ ಮೂರನೇ ಅತೀಹೆಚ್ಚು ಮತ ಗಳಿಸಿದ 'ಅಭ್ಯರ್ಥಿ' ಯಾರು ಗೊತ್ತಾ?
ಗ್ಯಾಲರಿ: ಕಾಂಗ್ರೆಸ್ಸಿನ ಡಬ್ಬಲ್ ಧಮಾಕ, 2 ಕ್ಷೇತ್ರಗಳು ಕೈವಶ
ನೋಟಾ! ಅಂದ್ರೆ None Of The Above! ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ನಲ್ಲಿರುವ ಕಟ್ಟಕಡೆಯ ಈ ಬಟನ್ ಒತ್ತಿದವರಿಗೆ ಗೆದ್ದಿರುವ ಕಳಲೆ ಕೇಶವಮೂರ್ತಿಯಾಗಲಿ, ಸೋತಿರುವ ವಿ ಶ್ರೀನಿವಾಸ್ ಪ್ರಸಾದ್ ಅಗಲಿ ಅರ್ಹ ಅಭ್ಯರ್ಥಿ ಅಂತ ಅನ್ನಿಸಿಯೇ ಇಲ್ಲ.[ಫಲಿತಾಂಶ : ನೆಗೆದುಬಿದ್ದ ಗುಪ್ತಚರ ಇಲಾಖೆಯ ವರದಿ]
ಎಲ್ಲರ ನಿರೀಕ್ಷೆಯನ್ನು ಮೀರಿ, ಕಳೆದೆರಡು ಬಾರಿ ಸೋತಿದ್ದ ಕಳಲೆ ಕೇಶವಮೂರ್ತಿ 86,212 ಮತಗಳನ್ನು ಗಳಿಸಿದ್ದರೆ, ಅಪಾರ ನಿರೀಕ್ಷೆಯ ಮೂಟೆ ಹೊರಲಾರದೆ ಸೋತು ಸುಣ್ಣವಾಗಿರುವ ಬಿಜೆಪಿಯ ವಿ ಶ್ರೀನಿವಾಸ್ ಪ್ರಸಾದ್ ಅವರು ಗಳಿಸಿದ್ದು 64,878 ಮತಗಳು. ಇವರಿಬ್ಬರ ನಂತರ ಅತಿಹೆಚ್ಚು ಮತಗಳೆಂದರೆ 1665 ಮತಗಳು ಬಂದಿದ್ದು ನೋಟಾಗೆ.
2014ರ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಭಾರತದಲ್ಲಿ ನೋಟಾ ಆಯ್ಕೆಯನ್ನು ಅಳವಡಿಸಿದ ಮೇಲೆ, ಯಾವುದೇ ಅಭ್ಯರ್ಥಿಗೆ ಮತ ಹಾಕಲು ಇಷ್ಟಪಡದ ಮತದಾರರು ತಮ್ಮ ಅತ್ಯಮೂಲ್ಯವಾದ ಮತಗಳನ್ನು 'ನೋಟಾ'ಗೆ ನೀಡಲು ಆರಂಭಿಸಿದ್ದಾರೆ.[ಎರಡು ಬಾರಿ ಸೋತು ಗೆದ್ದ ಕಳಲೆ ಕೇಶವಮೂರ್ತಿ ಯಾರು?]
ಈ ಬಾರಿ ನಂಜನಗೂಡಿನಲ್ಲಿ ಕಣಕ್ಕಿಳಿದಿದ್ದು 12 ಅಭ್ಯರ್ಥಿಗಳು, ನೋಟಾ ಸೇರಿ. ಕಾಂಗ್ರೆಸ್ಸಿನ ಕಳಲೆ ಕೇಶವಮೂರ್ತಿ ಮತ್ತು ಬಿಜೆಪಿಯ ವಿ ಶ್ರೀನಿವಾಸ್ ಪ್ರಸಾದ್ ಮೊದಲೆರಡು ಪ್ರಮುಖ ಅಭ್ಯರ್ಥಿಗಳಾಗಿದ್ದರೆ, ಹಲವಾರು ಸ್ವತಂತ್ರ ಅಭ್ಯರ್ಥಿಗಳು ಈ ಘಟಾನುಘಟಿಗಳ ನಡುವೆ ತಮ್ಮ ಅದೃಷ್ಟ ಪರೀಕ್ಷೆಗಾಗಿ ಕಣಕ್ಕೆ ಇಳಿದಿದ್ದರು.
ಅವರ ಹೆಸರುಗಳು ಹೀಗಿವೆ ನೋಡಿ : ಎಂ. ಪ್ರದೀಪ್ ಕುಮಾರ್ (703), ಆನಂದ ಜಿ (254), ಡಿ ಈಶ್ವರ್ ಸ್ವಾಭಿಮಾನಿ (198), ಗುರುಲಿಂಗಯ್ಯ (176), ಡಿಕೆ ತುಳಸಪ್ಪ (268), ಆರ್ ಪ್ರಸನ್ನ ಗೋಲೂರು (383), ಬಿಎಸ್ ಮಹದೇವಸ್ವಾಮಿ (274), ಎಚ್ ಪಿ ಶೇಷಣ್ಣ (678) ಮತ್ತು ಸುಬ್ಬಯ್ಯ (626). ಇವರ್ಯಾರೂ ನೋಟಾಗಿಂತ ಹೆಚ್ಚು ಮತ ಗಳಿಸಲು ಕೂಡ ವಿಫಲರಾಗಿದ್ದಾರೆ.
ಈ ಚುನಾವಣೆಯಲ್ಲಿ ನಂಜನಗೂಡಿನಲ್ಲಿ ಒಟ್ಟಾರೆ ಬಿದ್ದಿರುವ ಮತಗಳು 156,315 ಮತಗಳು. ಯಾವ ಮತಗಳೂ ತಿರಸ್ಕೃತವಾಗದಿರುವುದು ನಿಜಕ್ಕೂ ಅಚ್ಚರಿಯ ಸಂಗತಿ.