ರಾಜ್ಯದಲ್ಲಿ ಈವರೆಗೆ ಒಂದೇ ಒಂದು ಕೊರೊನಾ ಪ್ರಕರಣ ಇಲ್ಲ; ಡಾ.ಸುಧಾಕರ್
ಮೈಸೂರು, ಮಾರ್ಚ್ 7: "ರಾಜ್ಯದಲ್ಲಿ ಈವರೆಗೆ ಒಂದೇ ಒಂದು ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಹಿಡಿದು ನಗರ ಪ್ರದೇಶದ ಎಲ್ಲ ಸ್ಥಳದಲ್ಲೂ ಮುನ್ನಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ" ಎಂದು ಮಾಹಿತಿ ನೀಡಿದರು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್.
"ರಾಜ್ಯ ಸರ್ಕಾರದಿಂದ ಟಾಸ್ಕ್ ಫೋರ್ಸ್ ರಚಿಸಿ ಕೊರೊನಾ ಪ್ರಕರಣಗಳ ಮೇಲೆ ನಿಗಾ ವಹಿಸಲಾಗಿದೆ. ನಮ್ಮ ಸರ್ಕಾರದ ಮುಂಜಾಗ್ರತಾ ಕ್ರಮದಿಂದಾಗಿ ಕರ್ನಾಟಕಕ್ಕೆ ಕೊರೊನಾ ಬಂದಿಲ್ಲ. ಲಕ್ಷಾಂತರ ಜನ ನಿತ್ಯ ರಾಜ್ಯದಿಂದ ಓಡಾಟ ಮಾಡುತ್ತಿದ್ದರೂ ಒಂದೇ ಒಂದು ಪ್ರಕರಣ ಪತ್ತೆಯಾಗಿಲ್ಲ. ಕೊರೊನಾ ಪತ್ತೆಗಾಗಿ ಹೊಸ ಯಂತ್ರಗಳನ್ನು ಜಿಲ್ಲಾ ಕೇಂದ್ರಗಳಿಗೆ ಕಳುಹಿಸಿಕೊಡುತ್ತಿದ್ದೇವೆ" ಎಂದು ತಿಳಿಸಿದರು.
ಕೊರೊನಾ ಎಫೆಕ್ಟ್; ರಾಮನಗರದಲ್ಲಿ 28 ವಿದೇಶಿ ಪ್ರಜೆಗಳ ಮೇಲೆ ನಿಗಾ
ಇದೇ ಸಂದರ್ಭ ರಾಜ್ಯ ಬಜೆಟ್ ಕುರಿತ ಪ್ರಶ್ನೆಗೂ ಪ್ರತಿಕ್ರಿಯಿಸಿ, "ರಾಜ್ಯ ಬಜೆಟ್ ಬಗ್ಗೆ ಯಾರಿಗೂ ಅಸಮಾಧಾನ ಇಲ್ಲ. ಆರ್ಥಿಕ ಹಿಂಜರಿತದ ನಡುವೆಯೇ ಉತ್ತಮ ಬಜೆಟ್ ನೀಡಲಾಗಿದೆ. ಎಲ್ಲ ಭಾಗಗಳಿಗೂ ಅವಶ್ಯಕತೆಗೆ ತಕ್ಕ ಅನುದಾನ ನೀಡಿದ್ದಾರೆ. ಇದು ಅಭಿವೃದ್ಧಿ ದೃಷ್ಟಿಯಿಂದ ಪೂರಕವಾದ ಬಜೆಟ್ ಆಗಿದೆ" ಎಂದು ಹೇಳಿಕೆ ನೀಡಿದರು.