ಬಿಸಿಯೂಟದ ಸಾಮಗ್ರಿಯಲ್ಲೇ ಮೈಸೂರಿನ ಶಾಲೆಯಲ್ಲಿ ಭರ್ಜರಿ ಬಾಡೂಟ
ಮೈಸೂರು, ಜುಲೈ 6: ಸರಕಾರಿ ಜಾಗದಲ್ಲಿ ಗೋಮಾಂಸ ತಿಂದ ಪ್ರಕರಣ ಮಾಸುವ ಮುನ್ನವೇ ಮೈಸೂರಿನಲ್ಲಿ ಮತ್ತೊಂದು ಮಾಂಸದೂಟದ ಪ್ರಕರಣ ನಡೆದಿದೆ. ಸರಕಾರಿ ಅನುದಾನಿತ ಶಾಲೆಯಲ್ಲಿ ಶಿಕ್ಷಕರು ಮಾಂಸದೂಟ ಮಾಡಿದ್ದಾರೆ.
ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ಸೇಂಟ್ ಮೇರಿಸ್ ಶಾಲೆಯಲ್ಲಿ ಬುಧವಾರ ಮಧ್ಯಾಹ್ನ ಶಿಕ್ಷಕರು ಶಾಲೆ ಕಚೇರಿಯ ಒಳಗೆ ಕುಳಿತು ಮಾಂಸದೂಟ ಸವಿದಿದ್ದಾರೆ. ಬಿಸಿಯೂಟಕ್ಕೆ ಸರಕಾರ ನೀಡುವ ಸಾಮಗ್ರಿಗಳನ್ನು ಬಳಸಿ, ಬಿಸಿ ಊಟ ತಯಾರಿಸುವ ಸಿಬ್ಬಂದಿಯಿಂದಲೇ ಈ ಮಾಂಸದೂಟ ತಯಾರಿಸಲಾಗಿದೆ.
ಶಾಲೆಯ ಸಿಬ್ಬಂದಿಯೊಬ್ಬರ ವರ್ಗಾವಣೆ ಹಾಗೂ ಇಬ್ಬರು ನೂತನ ಶಿಕ್ಷಕರ ಆಗಮನದ ಅಂಗವಾಗಿ ಈ ಮಾಂಸದೂಟ ವ್ಯವಸ್ಥೆ ಮಾಡಿಸಲಾಗಿದೆ. ಸರಕಾರಿ ಕಚೇರಿ, ಸರ್ಕಾರಿ ಅನುದಾನಿತ ಕಚೇರಿಗಳಲ್ಲಿ ಮಾಂಸದೂಟ ಸೇವಿಸುವಂತಿಲ್ಲ. ಇಂತಹದರಲ್ಲಿ ಹೀಗೆ ಬಿಸಿ ಊಟದ ಸಾಮಗ್ರಿಗಳನ್ನು ಬಳಸಿ ಮಾಂಸದೂಟ ಮಾಡಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.
ಒಟ್ಟಾರೆ ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರು ಇಂಥ ಕಾರಣಗಳಿಗೆ ಸುದ್ದಿ ಆಗುತ್ತಿರುವುದನ್ನು ಗಮನಿಸಿದರೆ, ಜಿಲ್ಲಾಡಳಿತವು ಹಿಡಿತ ಕಳೆದುಕೊಂಡಿದೆಯೇ ಎಂಬ ಅನುಮಾನ ಮೂಡುತ್ತದೆ.