ಮೈಸೂರಿನ ವಸ್ತು ಪ್ರದರ್ಶನ ಪ್ರಾಧಿಕಾರ ದಸರೆ ಬಳಿಕ ಕೇಳೋರೇ ಇಲ್ಲ
ಮೈಸೂರು, ಏ. 20 : ದಸರಾ ಎಂದರೆ ಸಾಕು ಅರಮನೆಯ ವೈಭವದ ಜೊತೆಗೆ 100 ದಿನಗಳ ಕಾಲ ನಡೆಯುವ ವೈಭವದ ವಸ್ತು ಪ್ರದರ್ಶನಕ್ಕೆ ಹೆಚ್ಚು ಜನರು ಮಾರು ಹೋಗುತ್ತಾರೆ. ಆದರೆ ದಸರಾ ವಸ್ತುಪ್ರದರ್ಶನ ಆಯೋಜನೆ ಹೊರತುಪಡಿಸಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ನೌಕರರಿಗೆ ಉಳಿದ ಅವಧಿಯಲ್ಲಿ ಕೆಲಸ ಇಲ್ಲದಂತಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ದಸರಾ ವಸ್ತುಪ್ರದರ್ಶನ ಆಯೋಜನೆ ಬಳಿಕ ಪ್ರಾಧಿಕಾರ ವತಿಯಿಂದ ಮತ್ತೊಂದು ಕಾರ್ಯಕ್ರಮ ನಡೆಯುತ್ತಿಲ್ಲ ಎಂಬುದು ಸಾರ್ವಜನಿಕರ ದೂರು. ಉಳಿದ 9 ತಿಂಗಳು ಖಾಲಿ ಬಿದ್ದಿರುತ್ತದೆ. ಹಿಂದೆ ಬೇಸಿಗೆ ಮೇಳ, ಆಹಾರ ಮೇಳ ಆಯೋಜಿಸಲಾಗುತ್ತಿತ್ತು.
ಈಗ ಅದೂ ಸ್ಥಗಿತಗೊಂಡಿದೆ. ಪ್ರಾಧಿಕಾರದಲ್ಲಿ 19 ನೌಕರರು ಹಾಗೂ 10 ಭದ್ರತಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ತಿಂಗಳಿಗೆ ಸುಮಾರು 6 ಲಕ್ಷ ವೇತನ ನೀಡಲಾಗುತ್ತಿದೆ. ವಿದ್ಯುತ್, ನೀರಿನ ಶುಲ್ಕ, ಸ್ವಚ್ಛತೆ, ಉದ್ಯಾನ ಹಾಗೂ ಕಟ್ಟಡಗಳ ನಿರ್ವಹಣೆಗೆಂದು ಪ್ರತಿ ತಿಂಗಳು 12 ಲಕ್ಷಕ್ಕೂ ಅಧಿಕ ಹಣ ವ್ಯಯಿಸಲಾಗುತ್ತಿದೆ.
ಪ್ರಭಾರ ಸಿಇಒ, ಸಹಾಯಕ ಕಾರ್ಯ ಪಾಲಕ ಎಂಜಿನಿಯರ್, ಮ್ಯಾನೇಜರ್, ಜೂನಿಯರ್ ಎಂಜಿನಿಯರ್ (3 ಮಂದಿ), ಲೆಕ್ಕಾಧಿಕಾರಿ, ಕ್ಯಾಷಿಯರ್, 'ಡಿ' ದರ್ಜೆ ನೌಕರರು (10 ಮಂದಿ), ಭದ್ರತಾ ಸಿಬ್ಬಂದಿ (10 ಮಂದಿ-ಗುತ್ತಿಗೆ) ಪ್ರಾಧಿಕಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಏಪ್ರಿಲ್-ಮೇನಲ್ಲಿ ಬೇಸಿಗೆ ವಸ್ತುಪ್ರದರ್ಶನ ಆಯೋಜನೆಗೆ ಪ್ರಯತ್ನ ನಡೆಸಿದ್ದೇವೆ. ಆದರೆ, ಹಲವು ಕಾರಣಗಳಿಂದ ಅದು ಸಾಧ್ಯವಾಗಿಲ್ಲ.
ದಸರಾ ವಸ್ತು ಪ್ರದರ್ಶನದ ಟೆಂಡರ್ ಕಥೆ ಅಧೋಗತಿ !
ಹಿಂದೆ ಟೆಂಡರ್ ಆಹ್ವಾನಿಸಿದಾಗ ಗುತ್ತಿಗೆದಾರರು ಮುಂದೆ ಬರಲಿಲ್ಲ. ಪ್ರಾಧಿಕಾರದ ನಿರ್ವಹಣೆಯೇ ಕಷ್ಟಕರವಾಗಿ ಪರಿಣಮಿಸಿದೆ. ಏನಾದರೂ ಕೆಲಸ ಇದ್ದೇ ಇರುತ್ತದೆ. ದಸರಾ ವಸ್ತುಪ್ರದರ್ಶನಕ್ಕೆ ಸಿದ್ಧರಾಗಲು ಎರಡು ತಿಂಗಳು ಬೇಕಾಗುತ್ತದೆ. ದಸರೆ ವೇಳೆ ನೌಕರರಿಗೆ ರಜೆ ಕೂಡ ಸಿಗುವುದಿಲ್ಲ ಎಂದು ಪ್ರಾಧಿಕಾರದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.
ಕಳೆದ ಬಾರಿ ದಸರಾ ವಸ್ತುಪ್ರದರ್ಶನದಿಂದಲೇ ಪ್ರಾದಿಕಾರಕ್ಕೆ 6.99 ಕೋಟಿ ಲಭಿಸಿದೆ. ಅಲ್ಲದೇ, ಪಾರ್ಕಿಂಗ್, ಶುಲ್ಕ ಸಂಗ್ರಹಣೆ ನಿರ್ವಹಣೆಯನ್ನು ಜಾಗತಿಕೆ ಟೆಂಡರ್ದಾರರಿಗೆ ವಹಿಸಿರುವುದರಿಂದ ಪ್ರಾಧಿಕಾರದ ನೌಕರರ ಕೆಲಸ ಮತ್ತಷ್ಟು ಕಡಿಮೆ ಆಗಿದೆ. ಅಪರೂಪಕ್ಕೊಮ್ಮೆ ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ಪ್ರದರ್ಶನಗಳು, ಖಾಸಗಿ ಕಾರ್ಯಕ್ರಮಗಳು ನಡೆಯುತ್ತವೆ.
ದಸರಾ ವಸ್ತು ಪ್ರದರ್ಶನ: ಈ ಬಾರಿ ಪ್ರಾಧಿಕಾರವೇ ನಿರ್ವಹಿಸಲಿದೆಯಾ?
ಉಳಿದಂತೆ 80 ಎಕರೆ ಪ್ರದೇಶದಲ್ಲಿ ಇರುವ ಹಲವಾರು ಕಟ್ಟಡಗಳು, ಸೌಲಭ್ಯಗಳು ನಿರುಪಯುಕ್ತವಾಗಿವೆ. ಮಕ್ಕಳ ಉದ್ಯಾನವನ್ನು ಸಿಂಗಾರ ಮಾಡಿದ್ದರೂ ಬಳಕೆಗೆ ಸಿಗುತ್ತಿಲ್ಲ. ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸಮಗ್ರ ನೀಲನಕ್ಷೆ ರೂಪಿಸಿ ಹಂತ ಹಂತವಾಗಿ ಅಭಿವೃದ್ಧಿಪಡಿಸುವ ಯೋಜನೆ ಆರಕ್ಕೇರುತ್ತಲೇ ಇಲ್ಲ. ವರ್ಷಪೂರ್ತಿ ವಸ್ತುಪ್ರದರ್ಶನ ಏರ್ಪ ಡಿಸುವ ಯೋಜನೆಯೂ ಕಾರ್ಯಗತಗೊಂಡಿಲ್ಲ.
ನಗರದಲ್ಲಿ ಬೇರೆ ಬೇರೆ ಕಡೆ ವಸ್ತುಪ್ರದರ್ಶನ ಆಯೋಜಿಸಲಾಗುತ್ತಿದೆ. ಅದರ ಬದಲು ಪ್ರಾಧಿಕಾರದ ಆವರಣದಲ್ಲೇ ನಡೆಸಲು ಕ್ರಮಕೈಗೊಳ್ಳುವಂತೆ ಪ್ರವಾಸೋದ್ಯಮ ಇಲಾಖೆಗೆ ಹಿಂದಿನ ಜಿಲ್ಲಾಧಿಕಾರಿ ಡಿ.ರಂದೀಪ್ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ. ಉತ್ತರ ಭಾರತದಲ್ಲಿರುವ 'ಗಂಗಾ-ಬ್ರಹ್ಮಪುತ್ರ ಆರ್ಟ್ ಗ್ಯಾಲರಿ' ಮಾದರಿಯಲ್ಲಿ ಇಲ್ಲೂ ಕಾವೇರಿ ಆರ್ಟ್ ಗ್ಯಾಲರಿ ಕನ್ನಡ ಕಾರಂಜಿ ಆರಂಭಿಸಲಾಗಿದೆ.
ಮೈಸೂರು ಅರಸರು ಚಾಮುಂಡೇಶ್ವರಿಯನ್ನೇಕೆ ಪೂಜಿಸುತ್ತಾರೆ ?
ಆದರೆ, ಅದಿನ್ನೂ ತೆರೆದಿಲ್ಲ. ಸುಮಾರು 3.5 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ಪ್ರಾಧಿಕಾರದ ವೆಬ್ಸೈಟ್ ಕೂಡ ಸರಿಯಾಗಿ ಪರಿಷ್ಕೃತಗೊಳ್ಳುತ್ತಿಲ್ಲ. ಒಂದಿಷ್ಟು ಹಳೆಯ ಛಾಯಾಚಿತ್ರಗಳನ್ನು ಬಿಟ್ಟರೆ ಮತ್ತಾವುದೇ ಹೊಸ ಮಾಹಿತಿ ಇಲ್ಲ.