ಮಾಸ್ಕ್ ಇಲ್ಲದಿದ್ದರೆ ಮೈಸೂರಿನ ಈ ಹೋಟೆಲ್ನಲ್ಲಿ ಪಾರ್ಸಲ್ ಸಿಗಲ್ಲ
ಮೈಸೂರು, ಮೇ 06: ಈಗಾಗಲೇ ಲಾಕ್ ಡೌನ್ ಸಡಿಲಗೊಂಡಿದ್ದು, ನಗರದ ಕೆಲವು ಹೋಟೆಲ್ಗಳಲ್ಲಿ ಪಾರ್ಸಲ್ ಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಆದರೆ ಕೊರೊನಾ ವೈರಸ್ನ ಭೀತಿ ಹಾಗೇ ಇರುವುದರಿಂದ ಸಾರ್ವಜನಿಕರು ಒಂದಷ್ಟು ಅಗತ್ಯ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ.
ಈ ಸಂಬಂಧ ನಗರದ ಚಾಮುಂಡಿಪುರ ವೃತ್ತದಲ್ಲಿರುವ ಅಪೂರ್ವ ಹೋಟೆಲ್ ಮಾಲೀಕರು ತಮ್ಮ ಹೋಟೆಲ್ ಗೆ ಆಗಮಿಸುವ ಗ್ರಾಹಕರತ್ತ ನಿಗಾ ವಹಿಸಿದ್ದು, ಮಾಸ್ಕ್ ಧರಿಸಿ ಬಂದವರಿಗೆ ಮಾತ್ರ ಪಾರ್ಸಲ್ ನೀಡುತ್ತಿದ್ದಾರೆ. ಹೋಟೆಲ್ಗೆ ಬರುವ ಎಲ್ಲ ಗ್ರಾಹಕರಿಗೆ ಸ್ಕ್ಯಾನಿಂಗ್ ತಪಾಸಣೆ ಹಾಗೂ ಸ್ಯಾನಿಟೈಸರ್ ನೀಡಿ ಒಳಗೆ ಬಿಡಲಾಗುತ್ತಿದೆ.
ಮಾಸ್ಕ್ ಧರಿಸುವುದು ಕಡ್ಡಾಯ; ದಂಡದ ಮೊತ್ತ ಇಳಿಸಿದ ಬಿಬಿಎಂಪಿ
ಈ ಕುರಿತಂತೆ ಮಾತನಾಡಿದ ಹೋಟೆಲ್ ಮಾಲೀಕ ಅಪೂರ್ವ ಸುರೇಶ್ ಅವರು, "ಗ್ರಾಹಕರು ಮಾಸ್ಕ್ ಕಡ್ಡಾಯವಾಗಿ ಧರಿಸಿ ಬಂದರೆ ಮಾತ್ರ ಊಟ ತಿಂಡಿ ಪಾರ್ಸೆಲ್ ನೀಡಲಾಗುವುದು. ಮಾಸ್ಕ್ ಧರಿಸಿ ಕಡ್ಡಾಯವಾಗಿ ಬರಬೇಕೆಂದು ಗ್ರಾಹಕರಿಗೆ ಮನವಿ ಮಾಡಿಕೊಳ್ಳಲಾಗುತ್ತಿದೆ. ಕೊರೊನಾ ಸೋಂಕು ತಡೆಯಲು ಅಂತರ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ನಮ್ಮ ಹೋಟೆಲ್ ನ ಎಲ್ಲ ಸಿಬ್ಬಂದಿ ಕೈಗೆ ಮತ್ತು ಮುಖಕ್ಕೆ ಗವಸುಗಳನ್ನು ಹಾಕಿಕೊಳ್ಳಬೇಕು. ಹೋಟೆಲ್ ಸ್ವಚ್ಛತೆ ಕಾಪಾಡಬೇಕು ಎಂದು ಸಿಬ್ಬಂದಿ ವರ್ಗದವರಿಗೆ ಈಗಾಗಲೇ ಸೂಚಿಸಲಾಗಿದೆ. ಅದರಂತೆ ನಮ್ಮ ಹೋಟೆಲ್ ಎಲ್ಲ ಸಿಬ್ಬಂದಿ ಮಾಸ್ಕ್ ಮತ್ತು ಗವಸುಗಳನ್ನು ಹಾಕಿ ಕೆಲಸ ಮಾಡುತ್ತಿದ್ದು, ಇದನ್ನು ಪಾಲಿಸದೆ ಇದ್ದರೆ ಇಷ್ಟು ದಿನದ ನಮ್ಮೆಲ್ಲರ ಶ್ರಮ ವ್ಯರ್ಥವಾಗುತ್ತದೆ" ಎಂದು ಹೇಳಿದ್ದಾರೆ.