ದಸರಾ ಗಜಪಡೆ ಜತೆ ಈ ಬಾರಿ ಮಾವುತರ ಕುಟುಂಬಕ್ಕಿಲ್ಲ ಅವಕಾಶ
ಮೈಸೂರು, ಸೆಪ್ಟೆಂಬರ್ 23: ಕೊರೊನಾ ಸೋಂಕು ಈ ವರ್ಷ ಎಲ್ಲರ ಸಂತೋಷ, ಸಂಭ್ರಮವನ್ನು ಕಸಿದುಕೊಂಡಿದೆ. ಪ್ರತೀ ವರ್ಷವೂ ವಿಜೃಂಭಣೆಯಿಂದ ನಡೆಯುತ್ತಿದ್ದ ದಸರಾ ಮಹೋತ್ಸವವನ್ನು ಕೂಡ ಸರ್ಕಾರ ಈ ಬಾರಿ ಸರಳವಾಗಿ ನಡೆಸಲು ನಿರ್ಧರಿಸಿದ್ದು, ಅದರಂತೆ ಸೂಚನೆಗಳನ್ನು ನೀಡಿದೆ.
ಪ್ರತೀ ಬಾರಿಯೂ ದಸರಾಗೆ ಮೈಸೂರಿಗೆ ಬಂದು ಸಂಭ್ರಮಿಸುತ್ತಿದ್ದ 15 ಆನೆಗಳ ಮಾವುತ ಕುಟುಂಬದ ಕನಸನ್ನೂ ಚೂರು ಮಾಡಿದೆ. ಕಾರಣವಿಷ್ಟೇ... ಈ ಬಾರಿ ಸರ್ಕಾರ ದಸರಾ ಉತ್ಸವಕ್ಕೆ ಕೇವಲ ಐದು ಆನೆಗಳನ್ನು ನಿಗದಿಪಡಿಸಿದೆ. ಅಷ್ಟೇ ಅಲ್ಲ, ಮಾವುತ ಮತ್ತು ಕಾವಾಡಿಗಳಿಗೆ ಮಾತ್ರ ಆಹ್ವಾನ ನೀಡಿದ್ದು, ಅವರ ಕುಟುಂಬದವರಿಗೆ ನಿರ್ಬಂಧ ವಿಧಿಸಿದೆ.
ದಸರಾ ಎಂದರೆ ಮಾವುತ, ಕಾವಾಡಿಗಳ ಕುಟುಂಬಕ್ಕೆ ಸಂಭ್ರಮ
ದಸರಾ ಬಂತೆಂದರೆ ಮಾವುತರು ಮತ್ತು ಕಾವಾಡಿಗಳ ಮಕ್ಕಳಲ್ಲಿ ಎಲ್ಲಿಲ್ಲದ ಸಂಭ್ರಮ ಮನೆ ಮಾಡುತ್ತಿತ್ತು. ಅವರಿಗಾಗಿಯೇ ಅರಮನೆಯ ಬಳಿ ಟೆಂಟ್ ಶಾಲೆ, ಟೆಂಟ್ ಗ್ರಂಥಾಲಯಗಳೆಲ್ಲ ರೂಪುಗೊಳ್ಳುತ್ತಿತ್ತು. ಮಕ್ಕಳು ಸಂತಸದಿಂದ ಅಕ್ಷರವನ್ನು ಕಲಿತು ಜ್ಞಾನ ಬೆಳೆಸಿಕೊಳ್ಳಲು ಮುಂದಾಗುತ್ತಿದ್ದರು. ಬಣ್ಣದ ಬಟ್ಟೆಗಳನ್ನು ತೊಟ್ಟು ನಲಿದಾಡುತ್ತಿದ್ದರು. ದಸರಾ ಪ್ರಯುಕ್ತ ನಡೆಯುವ ವಿವಿಧ ಕಾರ್ಯಕ್ರಮಗಳನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದರು. ಈ ಕುಟುಂಬಗಳಿಗೆ ಮೂರು ಹೊತ್ತೂ ಉತ್ತಮ ಊಟ ನೀಡಲಾಗುತಿತ್ತು.
ಈ ಬಾರಿ ಮೈಸೂರು ದಸರಾ ಸಂಭ್ರಮ ಬರೀ ನೆನಪಷ್ಟೆ
ದಸರಾಗೆ 2 ತಿಂಗಳ ಮುನ್ನವೇ ಆಗಮಿಸುತ್ತಿದ್ದ ಕುಟುಂಬ
ದಸರಾ ಆಚರಣೆಗೆ ಎರಡು ತಿಂಗಳು ಮೊದಲೇ ಬಂದು ಅರಮನೆಯ ಅಂಗಳದಲ್ಲಿ ಬೀಡುಬಿಡುತ್ತಿದ್ದರು. ಅವರನ್ನು ಪ್ರತ್ಯೇಕ ವಾಹನದಲ್ಲಿ ಕರೆತಂದು ಅವರಿಗಾಗಿಯೇ ಟೆಂಟ್ ನಿರ್ಮಿಸಿ ದಸರಾ ಮುಗಿಯುವವರೆಗೂ ಮಾವುತರು ಮತ್ತು ಕಾವಾಡಿಗಳ ಕುಟುಂಬವನ್ನು ದಸರಾ ಮಹೋತ್ಸವ ಸಮಿತಿ, ಅರಣ್ಯ ಇಲಾಖೆ ಚೆನ್ನಾಗಿಯೇ ನೋಡಿಕೊಳ್ಳುತ್ತಿತ್ತು. ಎರಡು ತಿಂಗಳ ಕಾಲ ಅರಮನೆ ನಗರಿಯಲ್ಲಿದ್ದು ದಸರಾ ಸಂಭ್ರಮವನ್ನು ಕಣ್ತುಂಬಿಕೊಂಡು ಮತ್ತೆ ಭಾರವಾದ ಮನಸ್ಸುಗಳನ್ನು ಹೊತ್ತು ಕಾಡಿನ ಕಡೆ ಹೆಜ್ಜೆ ಹಾಕುತ್ತಿದ್ದರು.
ಈ ಬಾರಿ ಅವರ ಸಂಭ್ರಮಕ್ಕಿಲ್ಲ ದಾರಿ
ಆದರೆ ಈ ಬಾರಿ ದಸರಾ ಸಂಭ್ರಮವನ್ನು ಅವರು ಕಣ್ತುಂಬಿಕೊಳ್ಳಲಾರರು. ಕೊರೊನಾ ಕಾರಣದಿಂದಾಗಿ ಸರ್ಕಾರ ಸರಳ ದಸರಾ ಆಚರಿಸುತ್ತಿದೆ. ಕೇವಲ ಐದು ಆನೆಗಳಿಗಷ್ಟೇ ಅವಕಾಶ ಕಲ್ಪಿಸಲಾಗಿದೆ. ಅರಮನೆ ಆವರಣದಲ್ಲಿ ಮಾತ್ರವೇ ತಾಲೀಮು, ಜಂಬೂ ಸವಾರಿ ನಡೆಸಲು ನಿರ್ಧರಿಸಲಾಗಿದೆ. ಈ ಕುರಿತು ಡಿಸಿಎಫ್ ಅಲೆಕ್ಸಾಂಡರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಮಾವುತರು, ಕಾವಾಡಿಗಳ ಕುಟುಂಬದವರು ಬಾರದಂತೆ ಸೂಚನೆ ನೀಡಲಾಗಿರುವುದಾಗಿ ತಿಳಿಸಿದ್ದಾರೆ.
ಮೈಸೂರು ದಸರಾಗೆ ಐದು ಆನೆಗಳ ಆಯ್ಕೆ ಅಂತಿಮ
ದಸರಾ ರೂಪು ರೇಷೆಯಲ್ಲಿ ಮಾರ್ಪಾಡು
ಮಾವುತರು, ಕಾವಾಡಿಗಳು ಸಾರ್ವಜನಿಕರ ಸಂಪರ್ಕದಲ್ಲಿರದಂತೆ ಎಚ್ಚರ ವಹಿಸಲು ನಿರ್ದೇಶನ ನೀಡಲಾಗಿದೆ. ಕೊರೊನಾ ಕಾರಣದಿಂದಾಗಿ ದಸರಾ ಮಹೋತ್ಸವದ ರೂಪುರೇಷೆಯಲ್ಲಿ ಹಲವು ಮಾರ್ಪಾಡುಗಳನ್ನು ಮಾಡಿಕೊಳ್ಳಲಾಗಿದ್ದು, ಅವರು ಇಲ್ಲಿಂದ ಕಾಡಿನಲ್ಲಿರುವ ತಮ್ಮ ಕುಟುಂಬಕ್ಕೆ ಸೋಂಕನ್ನು ಕೊಂಡೊಯ್ಯಬಾರದೆಂಬ ಕಾರಣಕ್ಕಾಗಿ ಮಾವುತರು, ಕಾವಾಡಿಗಳ ಕುಟುಂಬದವರಿಗೆ ನಿರ್ಬಂಧ ವಿಧಿಸಲಾಗಿದೆ ಎಂದಿದ್ದಾರೆ. ಕೊರೊನಾ ಮಾವುತ ಕುಟುಂಬಗಳನ್ನು ನಿರಾಶೆಯ ಮಡಿಲಿಗೆ ನೂಕಿದೆ.