ಬೇರೆ ಶಾಸಕರನ್ನು ಕರೆತಂದು ಸರ್ಕಾರ ಉಳಿಸುವ ಅಗತ್ಯವಿಲ್ಲ: ಕಟೀಲ್
ಮೈಸೂರು, ಜೂ 1: ನಮ್ಮ ರಾಜ್ಯ ಸರ್ಕಾರ ಸುಭದ್ರವಾಗಿದ್ದು, ಹೊರಗಿನಿಂದ ಶಾಸಕರನ್ನು ಕರೆದುಕೊಂಡು ಬಂದು ಸರ್ಕಾರ ಉಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಟೀಲ್, ನಮ್ಮ ಬಿಜೆಪಿ ನಾಯಕರು ಪ್ರತ್ಯೇಕ ಸಭೆ ಮಾಡಿಲ್ಲ. ನಾನು ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ್ದೇನೆ. ಎಲ್ಲರೂ ಅಭಿವೃದ್ಧಿ ದೃಷ್ಟಿಯಿಂದ ಸಭೆ ಸೇರಿದ್ದೇವೆ ಅಂತ ಹೇಳಿದ್ದಾರೆ. ಊಟಕ್ಕೆ ಒಟ್ಟಿಗೆ ಸೇರಿದ್ದಾರೆ ಅಷ್ಟೆ ಎಂದರು.
ಮೈಸೂರು: ಚಿಲ್ಲರೆ ರಾಜಕಾರಣ ಮಾಡಬೇಡಿ ಎಂದ ಬಿಜೆಪಿ ರಾಜ್ಯಾಧ್ಯಕ್ಷ
ಬಿಜೆಪಿ ಪ್ರತ್ಯೇಕ ನಾಯಕರನ್ನು ಪರೋಕ್ಷವಾಗಿ ಸಮಾಧಾನ ಮಾಡುತ್ತಿದ್ದೇವೆ ಎಂದರಾದರೂ ಪಕ್ಷದಲ್ಲಿ ಭಿನ್ನಮತ ಇರುವುದನ್ನು ನಿರಾಕರಿಸಿದರು. ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಒಂದಾಗಿದ್ದಾರೆ. ಆ ನಾಯಕರು ಯಾವುದೇ ಬೇಡಿಕೆ ಇಟ್ಟಿಲ್ಲ. ಅವರು ಯಾವುದೇ ರೀತಿ ಬ್ಲಾಕ್ಮೇಲ್ ಮಾಡುತ್ತಿಲ್ಲ. ಇದನ್ನೇ ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ತಿಳಿಸಿದರು.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಮ್ಮ ಪ್ರಶ್ನಾತೀತ ನಾಯಕ. ಯಡಿಯೂರಪ್ಪ ವಿರುದ್ಧ ಯಾರಿಗೂ ಯಾವುದೇ ಅಸಮಾಧಾನ ಇಲ್ಲ. ರಾಜ್ಯದಲ್ಲಿ ಉತ್ತಮ ಆಡಳಿತ ಇದೆ. ಬಿಎಸ್ವೈ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ಪ್ರಶಂಸಿದರು.
ರಮೇಶ್ ಜಾರಕಿಹೊಳಿಯ ಆ ಹೇಳಿಕೆ ಅಷ್ಟು ಪರಿಣಾಮ ಬೀರಿತಾ?
ಯಡಿಯೂರಪ್ಪನವರಿಂದ ಕುಟುಂಬದ ರಾಜಕಾರಣ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ನಳಿನ್ ಕುಮಾರ್ ಕಟೀಲ್, ಅಪ್ಪ ಮುಖ್ಯಮಂತ್ರಿ ಆದ ತಕ್ಷಣ ಅವರ ಮಕ್ಕಳು ಸಾರ್ವಜನಿಕ ಜೀವನದಲ್ಲಿ ಇರಬಾರದು ಅಂತೇನಿಲ್ಲ ಎಂದರು.
ಯಡಿಯೂರಪ್ಪನವರ ಮಗ ಜನರಿಂದ ಆಯ್ಕೆಯಾಗಿದ್ದಾರೆ. ಮತ್ತೊಬ್ಬ ಮಗ ಪಕ್ಷದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಯಡಿಯೂರಪ್ಪನವರ ಕುಟುಂಬದಲ್ಲಿ ರಾಜಕಾರಣ ಇಲ್ಲ. ಬಿಜೆಪಿಯಲ್ಲಿ ಅಧಿಕಾರಕ್ಕಾಗಿ ಯಾರು ಕುಟುಂಬ ರಾಜಕಾರಣ ಮಾಡಲ್ಲ ಎಂದು ಸಮರ್ಥಿಸಿಕೊಂಡರು.
ಬಿಜೆಪಿ ನಾಯಕರ ಪ್ರತ್ಯೇಕ ಸಭೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕ ಎಸ್.ಎ ರಾಮದಾಸ್, ನಾನು ಟೀ ಕುಡಿಯಲು ಅಲ್ಲಿಗೆ ಹೋಗಿದ್ದೆ. ನಾನು ಯಾವುದೇ ಪ್ರತ್ಯೇಕ ಸಭೆಯಲ್ಲಿ ಭಾಗಿಯಾಗಿಲ್ಲ. ನಾನು ಉಮೇಶ್ ಕತ್ತಿ ಭೇಟಿ ಮಾಡಲು ಹೋಗಿದ್ದೆ. ಅದೇ ಕಟ್ಟಡದ ಮೇಲೆ ಮುರುಗೇಶ್ ನಿರಾಣಿ ಕಚೇರಿ ಇತ್ತು. ಅಲ್ಲಿ ಕೆಲವರು ಪೋಟೋ ತೆಗೆದರು. ಅದು ಈ ಸಂದರ್ಭದಲ್ಲಿ ಹೇಗೆ ಹೊರಗೆ ಬಂತು ಗೊತ್ತಿಲ್ಲ ಎಂದು ಪಕ್ಷ ಅಸಮಾಧಾನಿತರ ಸಭೆಯಲ್ಲಿ ಭಾಗಿಯಾಗಿದ್ದರ ಕುರಿತು ಸ್ಪಷ್ಟನೆ ನೀಡಿದರು.