ಹಳೇ ಮೈಸೂರಿಗೆ ಸಿಗದ ಪ್ರಾತಿನಿಧ್ಯ: ಪಕ್ಷದ ಮೇಲೆ ಬೀರುತ್ತಾ?
ಮೈಸೂರು, ಜನವರಿ 16: ಮೈಸೂರು, ಚಾಮರಾಜನಗರ, ಹಾಸನ, ಕೊಡಗು ಸೇರಿದಂತೆ ಹಳೇ ಮೈಸೂರು ವ್ಯಾಪ್ತಿಯಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬರುತ್ತಿದ್ದರೂ, ಪ್ರಾತಿನಿಧ್ಯ ನೀಡದಿರುವುದು ಶಾಸಕರು ಸೇರಿದಂತೆ ಕಾರ್ಯಕರ್ತರಲ್ಲಿ ನಿರಾಸೆಯನ್ನುಂಟು ಮಾಡಿದೆ.
ಮೈಸೂರಿನಲ್ಲಿ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್, ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಅವರಲ್ಲಿ ಯಾರಿಗಾದರೂ ಒಬ್ಬರಿಗೆ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆಯನ್ನು ಕೆಲವರು ಮಾಡಿದ್ದರು. ಕೊಡಗು ಒಂದೂವರೆ ದಶಕದಿಂದಲೂ ಬಿಜೆಪಿಯ ಭದ್ರಕೋಟೆಯಾಗಿಯೇ ಉಳಿದುಕೊಂಡು ಬಂದಿದ್ದು, ಇದರ ಹಿಂದೆ ಬಿಜೆಪಿ ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಅಪ್ಪಚ್ಚು ರಂಜನ್ ಅವರ ಶ್ರಮವಿರುವುದನ್ನು ಅಲ್ಲಗಳೆಯುವಂತಿಲ್ಲ. ಹಿಂದೊಮ್ಮೆ ಬಿಜೆಪಿ ಆಡಳಿತವಿದ್ದ ಕಾಲದಲ್ಲಿ ಅಪ್ಪಚ್ಚುರಂಜನ್ ಸಚಿವರಾಗಿದ್ದರೆ, ಕೆ.ಜಿ.ಬೋಪಯ್ಯ ವಿಧಾನಸಭಾ ಅಧ್ಯಕ್ಷರಾಗಿದ್ದರು.
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ನಿರಾಸೆ
ಇನ್ನು ಮೈಸೂರಿನಲ್ಲಿ ಎಸ್.ಎ.ರಾಮದಾಸ್ ಅವರು ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಸಚಿವ ಸ್ಥಾನದ ಆಕಾಂಕ್ಷಿಗಳಾಗಿಯೇ ಕಾಯುತ್ತಿದ್ದರು. ಆದರೆ ಇದೀಗ ಅವರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಮಂಡ್ಯದ ಡಾ.ನಾರಾಯಣಗೌಡ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಆದರೆ ಅವರು ಮಂಡ್ಯದಿಂದ ಆಚೆಗೆ ಬರುವುದು ಕಷ್ಟವೇ. ಸಂಕ್ರಾಂತಿ ವೇಳೆಗೆ ಸಚಿವ ಸ್ಥಾನದ ವಿಸ್ತರಣೆಯಾಗಿ ಒಂದಷ್ಟು ಮಂದಿಗೆ ಸಿಹಿ ಸಿಕ್ಕಿದ್ದರೂ, ಹೆಚ್ಚಿನವರಿಗೆ ಕಹಿಯೇ ದೊರೆತಂತಾಗಿದೆ. ವಲಸಿಗರಿಂದಾಗಿ ಬಿಜೆಪಿ ಆಡಳಿತಕ್ಕೆ ಬರುವಂತಾಗಿದ್ದರೂ ಬಿಜೆಪಿಯ ಮೂಲ ಶಾಸಕರೇ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದರು.
ಯೋಗೇಶ್ವರ್ಗೆ ಮಂತ್ರಿ ಸ್ಥಾನ ಸಮರ್ಥಿಸಿಕೊಂಡ ಸಂಸದ ಶ್ರೀನಿವಾಸ ಪ್ರಸಾದ್
ಮೂಲ ಬಿಜೆಪಿಗರ ಕೆರಳಿಸಿದ ಸಂಪುಟ ವಿಸ್ತರಣೆ
ಇದುವರೆಗೆ ಇಂದು, ನಾಳೆ ಎಂದು ಮುಂದೂಡುತ್ತಲೇ ಇದ್ದ ಸಂಪುಟ ವಿಸ್ತರಣೆ ಕೊನೆಗೂ ಆಗಿದ್ದು, ಸಚಿವ ಸ್ಥಾನ ವಂಚಿತರು ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರ ರಚನೆಗೆ ಕಾರಣರಾದವರಿಗೆ ಮಂತ್ರಿ ಸ್ಥಾನ ನೀಡುತ್ತೇನೆ ಎಂದು ಯಡಿಯೂರಪ್ಪ ಅವರು ನೀಡಿದ್ದ ಮಾತಿನಂತೆ 17 ಶಾಸಕರಲ್ಲಿ ವಿಶ್ವನಾಥ್, ಮಹೇಶ್ ಕುಮಟಳ್ಳಿ, ಮುನಿರತ್ನ ಅವರನ್ನು ಹೊರತುಪಡಿಸಿ ಉಳಿದ 14 ಮಂದಿಗೆ ಸಚಿವ ಸ್ಥಾನವನ್ನು ಈಗಾಗಲೇ ನೀಡಲಾಗಿದ್ದು, ಇದು ಮೂಲ ಬಿಜೆಪಿಗರನ್ನು ಕೆರಳಿಸಿದೆ. ಅಷ್ಟೇ ಅಲ್ಲದೆ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಮೈಸೂರು ಭಾಗದ ಶಾಸಕರಿಗೂ ತೀವ್ರ ನಿರಾಸೆಯಾಗಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಹಿರಿಯ ಶಾಸಕರಿಗೆ ಸಿಗದ ಸಚಿವ ಸ್ಥಾನ
ಹಳೇ ಮೈಸೂರು ಭಾಗದ ಮೈಸೂರು, ಚಾಮರಾಜನಗರ, ಹಾಸನ ಹಾಗೂ ಕೊಡಗು ಜಿಲ್ಲೆಗೆ ಸಂಪುಟ ವಿಸ್ತರಣೆಯಲ್ಲಿ ಪ್ರಾಶಸ್ತ್ಯ ನೀಡಿಲ್ಲ. ಮೈಸೂರಿನ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್, ಕೊಡಗು ಜಿಲ್ಲೆಯ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್ ಹಿರಿಯ ಶಾಸಕರಾದರೆ, ಮೈಸೂರಿನ ಚಾಮರಾಜ ಕ್ಷೇತ್ರದ ಎಲ್.ನಾಗೇಂದ್ರ, ನಂಜನಗೂಡಿನ ಬಿ.ಹರ್ಷವರ್ಧನ, ಗುಂಡ್ಲುಪೇಟೆಯ ಸಿ.ಎಸ್.ನಿರಂಜನಕುಮಾರ್ ಮೊದಲ ಬಾರಿ ಗೆದ್ದವರಾಗಿದ್ದಾರೆ. ಇನ್ನು ಹಾಸನದ ಪ್ರೀತಂಗೌಡ ಹಾಗೂ ಗುಂಡ್ಲುಪೇಟೆಯ ನಿರಂಜನ್ಕುಮಾರ್ ಅವರನ್ನು ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ರಾಮದಾಸ್, ಕೆ.ಜಿ.ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಅವರಲ್ಲಿ ಯಾರಾದರೊಬ್ಬರಿಗೆ ಸಚಿವ ಸ್ಥಾನ ನೀಡುವ ನಿರೀಕ್ಷೆಯಿತ್ತು. ಆದರೆ ಇವರಾರಿಗೂ ಸಂಪುಟದಲ್ಲಿ ಸ್ಥಾನ ದೊರೆತಿಲ್ಲ. ಜತೆಗೆ ಸಚಿವ ಸ್ಥಾನ ಪಡೆದು ಜಿಲ್ಲೆಯ ಉಸ್ತುವಾರಿ ಕನಸು ಕಾಣುತ್ತಿದ್ದ ಎಚ್.ವಿಶ್ವನಾಥ್ ಅವರ ಕನಸು ನುಚ್ಚುನೂರಾಗಿದ್ದು, ಅವರು ರೊಚ್ಚಿಗೇಳುವಂತೆ ಮಾಡಿದೆ.
ಹಿಂದಿನ ಸರ್ಕಾರಗಳಲ್ಲಿ ಪ್ರಾತಿನಿಧ್ಯ ಸಿಕ್ಕಿತ್ತು
ಹಾಗೆ ನೋಡಿದರೆ ಕಾಂಗ್ರೆಸ್ ಈ ಹಿಂದೆ ಅಧಿಕಾರ ಹಿಡಿದಾಗಲೆಲ್ಲ ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡುವ ಮೂಲಕ ಪ್ರಾತಿನಿಧ್ಯ ನೀಡಲಾಗಿತ್ತು. ಇನ್ನು ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿಯೂ ಮೈಸೂರಿನ ಎಚ್.ಸಿ.ಮಹದೇವಪ್ಪ, ವಿ.ಶ್ರೀನಿವಾಸಪ್ರಸಾದ್, ಗುಂಡ್ಲುಪೇಟೆಯ ಮಹದೇವಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲೂ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಪುಟ್ಟರಂಗಶೆಟ್ಟಿ ಮೈಸೂರು ಭಾಗದ ಸಚಿವರಾಗಿದ್ದರು. ಆದರೆ, ಯಡಿಯೂರಪ್ಪ ಅವರ ಸರ್ಕಾರದಲ್ಲಿ ಒಬ್ಬನೇ ಒಬ್ಬ ಸಚಿವನು ಇಲ್ಲದಂತಾಗಿದೆ. ಇದು ಈ ವ್ಯಾಪ್ತಿಯ ಶಾಸಕರು ಮಾತ್ರವಲ್ಲದೆ, ಪಕ್ಷದ ಮುಖಂಡರು, ಕಾರ್ಯಕರ್ತರಿಗೂ ಬೇಸರ ತಂದಿದೆ.
ಪಕ್ಷದ ಮೇಲೆ ಪ್ರಭಾವ ಬೀರುತ್ತಾ?
ಹಳೇ ಮೈಸೂರಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪ್ರಾಬಲ್ಯ ಹೊಂದಿದ್ದವು. ಇತ್ತೀಚೆಗಿನ ವರ್ಷಗಳಲ್ಲಿ ನಿಧಾನವಾಗಿ ಬಿಜೆಪಿ ಇಲ್ಲಿ ತನ್ನ ಖಾತೆ ತೆರೆಯುವ ಮೂಲಕ ಪಕ್ಷ ಸಂಘಟನೆ ಗೊಳ್ಳುತ್ತಿದೆ. ಈ ವೇಳೆಯಲ್ಲಿ ಸಚಿವ ಸ್ಥಾನವನ್ನು ಈ ವ್ಯಾಪ್ತಿಯ ಶಾಸಕರೊಬ್ಬರಿಗೆ ನೀಡಿದ್ದರೆ ಅನುಕೂಲವಾಗುತ್ತಿತ್ತು ಎನ್ನುವುದು ಕಾರ್ಯಕರ್ತರ ಅಭಿಪ್ರಾಯವಾಗಿದೆ. ಕೆಲವು ಶಾಸಕರು ಬಹಿರಂಗವಾಗಿ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದರೆ, ಮತ್ತೆ ಕೆಲವರು ಮೌನವಾಗಿದ್ದಾರೆ. ಇದೆಲ್ಲವೂ ಮುಂದಿನ ದಿನಗಳಲ್ಲಿ ಪಕ್ಷದ ಮೇಲೆ ಪ್ರಭಾವ ಬೀರುತ್ತಾ ಎಂಬುವುದೇ ಸದ್ಯದ ಪ್ರಶ್ನೆಯಾಗಿದೆ.