ಮೈಸೂರಿನಲ್ಲಿ ಲಾಕ್ಡೌನ್ ಮುಂದುವರಿಕೆ ಯಾಕೆ ಅನಿವಾರ್ಯ?
ಮೈಸೂರು, ಏಪ್ರಿಲ್ 08: ಮೈಸೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಜಿಲ್ಲೆಯಾದ್ಯಂತ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮವನ್ನೂ ತೆಗೆದುಕೊಳ್ಳಲಾಗಿದೆ. ಆದರೆ ಇನ್ನೂ ಜನ ಎಚ್ಚೆತ್ತಂತೆ ಕಾಣುತ್ತಿಲ್ಲ.
Recommended Video
ದೇಶಕ್ಕೆಲ್ಲ ಒಂದು ಕಾನೂನಾದರೆ, ಮೈಸೂರಿನ ನರಸಿಂಹರಾಜ ಕ್ಷೇತ್ರಕ್ಕೇ ಮತ್ತೊಂದು ಕಾನೂನಾ ಎಂಬ ಪ್ರಶ್ನೆ ಮೂಡುತ್ತಿದೆ. ಮೈಸೂರಿನ ಮಂಡಿ ಮೊಹಲ್ಲಾ, ನಜರ್ಬಾದ್, ಕಲ್ಯಾಣಗಿರಿ, ಉದಯಗಿರಿಯಲ್ಲಿ ಜನ ಸಂಚಾರ ಮಾಮೂಲಿನಂತೆಯೇ ಸಾಗಿದೆ. ಲಾಕ್ ಡೌನ್ ಗೆ ತಲೆಕೆಡಿಸಿಕೊಳ್ಳದೇ ಜನ ಕಾರು, ಬೈಕ್ಗಳಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದಾರೆ.
ನಂಜನಗೂಡು ಜುಬಿಲಿಯಂಟ್ ಕಾರ್ಖಾನೆ ಕುರಿತು ಡಿಸಿ ಹೇಳುತ್ತಿರುವುದೇನು?
ರಸ್ತೆಗೆ ಬರಬೇಡಿ ಎಂದು ಪೊಲೀಸ್ ಅಧಿಕಾರಿಗಳು ಎಷ್ಟೇ ಮನವಿ ಮಾಡಿದರೂ ಜನ ಅದಕ್ಕೆ ಸ್ಪಂದಿಸಿದಂತೆ ಕಾಣುತ್ತಿಲ್ಲ. ಕಟ್ಟುನಿಟ್ಟಿನ ಕ್ರಮ ವಹಿಸುವಲ್ಲಿ ನಗರದ ಪೊಲೀಸರು ಹೈರಾಣಾಗಿದ್ದಾರೆ. ಮೈಸೂರು ನಗರ ಕೇಂದ್ರದಲ್ಲಿ ಮಾತ್ರ ಎಲ್ಲ ಕಾನೂನುಗಳು ಜಾರಿಯಾಗಿವೆ. ಆದರೆ ಜನ ಹೀಗೆ ಆರಾಮಾಗಿ ಓಡಾಡುತ್ತಿರುವುದನ್ನು ನೋಡಿದರೆ ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯ ಬಡಾವಣೆಗಳಿಗೆ ಯಾವುದೇ ನಿಯಮ ಅನ್ವಯಿಸುತ್ತಿಲ್ಲ ಎಂಬುದು ತಿಳಿಯುತ್ತಿದೆ.
ಉದಯಗಿರಿ ಪೊಲೀಸ್ ಠಾಣೆ ಮುಂಭಾಗದ ರಸ್ತೆಯಲ್ಲೇ ಜನ ಕಿಕ್ಕಿರಿದಿರುತ್ತಾರೆ. ಸಾಮಾಜಿಕ ಅಂತರವೂ ಇಲ್ಲಿ ಮಂಗ ಮಾಯವಾಗಿದೆ. ಈ ಬಗ್ಗೆ ನಿಗಾ ವಹಿಸುವವರು ಯಾರೂ ಇಲ್ಲವಾ ಎಂಬ ಪ್ರಶ್ನೆಯೂ ಮೂಡುತ್ತದೆ. ಮೈಸೂರಿನಲ್ಲಿ ಲಾಕ್ಡೌನ್ ಮುಂದುವರಿಕೆ ಅನಿವಾರ್ಯವೂ ಅನಿಸಿಬಿಡುತ್ತದೆ.