ಮೈಮುಲ್ ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ: ಅಧ್ಯಕ್ಷ ಸಿದ್ದೇಗೌಡ
ಮೈಸೂರು, ಜೂನ್ 2: ಮೈಸೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ (ಮೈಮುಲ್) ನೇಮಕಾತಿ ವಿಚಾರದಲ್ಲಿ ಯಾವುದೇ ರೀತಿಯ ನಿಯಮ ನಿಬಂಧನೆಯನ್ನು ಉಲ್ಲಂಘಿಸಿಲ್ಲ. ನೇಮಕಾತಿ ಸಂಬಂಧ ಈಗಾಗಲೇ ಸರ್ಕಾರದಿಂದ ತನಿಖೆಯಾಗುತ್ತಿದೆ. ತನಿಖೆಯ ನಂತರ ಸರ್ಕಾರ ಏನು ತೀರ್ಮಾನ ತೆಗೆದುಕೊಂಡರೂ ನಾನು ಅದಕ್ಕೆ ಬದ್ಧ ಎಂದು ಮೈಮುಲ್ ಅಧ್ಯಕ್ಷ ಸಿದ್ದೇಗೌಡ ಹೇಳಿದರು.
Recommended Video
ಇತ್ತೀಚಿಗೆ ಶಾಸಕ ಸಾ.ರಾ ಮಹೇಶ್ ಮೈಮುಲ್ ನಲ್ಲಿ ಅಕ್ರಮ ನೇಮಕಾತಿ ನಡೆದಿದೆ ಎಂದು ಆರೋಪಿಸಿದ್ದರಲ್ಲದದೆ ಅದಕ್ಕೆ ಸಂಬಂಧಿಸಿದ ಆಡಿಯೋ ಕೂಡ ಬಿಡುಗಡೆ ಮಾಡಿದ್ದರು. ಮೈಮುಲ್ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ, ನೊಂದ ಅಭ್ಯರ್ಥಿಗಳಿಗೆ ನ್ಯಾಯ ಸಿಗದಿದ್ದರೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಮೆಗಾಡೈರಿ ಮುಂಭಾಗ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದ್ದರು.
ಮೈಮುಲ್ ನೌಕರರ ನೇಮಕಾತಿಯಲ್ಲಿ ಭಾರೀ ಅವ್ಯವಹಾರ; ಸಾ.ರಾ. ಮಹೇಶ್ ಆರೋಪ
ಈ ಕುರಿತು ಇಂದು ಮೈಸೂರಿನ ಬಂಡೀಪಾಳ್ಯ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದೇಗೌಡ, ಪ್ರತಿಭಟನೆ ಮಾಡುವುದು ಅವರ ಹಕ್ಕು. ನಾನು ಅದನ್ನು ಬೇಡ ಎನ್ನಲು ಆಗುವುದಿಲ್ಲ ಎಂದರು.
ಮೈಸೂರು ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸದ್ಯದಲ್ಲೇ ಎಲ್ಲ ನಿರ್ದೇಶಕರೊಂದಿಗೆ ಸಭೆ ನಡೆಸಲಿದ್ದೇವೆ. ಚರ್ಚಿತ ವಿಷಯವನ್ನು ಪಕ್ಷದ ಹೈಕಮಾಂಡ್ ಗೆ ತಿಳಿಸುತ್ತೇವೆ. ಅವರ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ ಎಂದು ಹೇಳಿದರು.
ಎಪಿಎಂಸಿ ಅಧ್ಯಕ್ಷ ಪ್ರಭುಸ್ವಾಮಿ ಮಾತನಾಡಿ, ಅಧಿಕಾರ ಅಂದರೆ ಎಲ್ಲರಿಗೂ ಆಸೆ ಇರುತ್ತದೆ. ಹಾಗೆಯೇ ಈ ಬಾರಿಯೂ ಎಪಿಎಂಸಿ ಅಧ್ಯಕ್ಷನಾಗುವ ಆಸೆ ಇದೆ. ಆದರೆ, ನಮ್ಮ ಪಕ್ಷಕ್ಕೆ ವಿರುದ್ಧವಾಗಿ ನಾನು ನಡೆದುಕೊಳ್ಳುವುದಿಲ್ಲ. ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ಸ್ಪಷ್ಟಪಡಿಸಿದರು.