ಮೈಸೂರಿನ ಎಟಿಎಂಗಳಲ್ಲಿ ನಗದು ಇಲ್ಲದಕ್ಕೂ, ಎಲೆಕ್ಷನ್ ಗೂ ಏನು ಸಂಬಂಧ?
ಮೈಸೂರು, ಫೆಬ್ರವರಿ 7 : ಮೈಸೂರಿನ ಬಹುತೇಕ ಎಟಿಎಂ ಕೇಂದ್ರಗಳಲ್ಲಿ ಕಾಣಸಿಗುತ್ತಿರುವ ಬೋರ್ಡ್: 'ನೋ ಕ್ಯಾಶ್' ! ಹೌದು, ನಗರದ ಬಹುತೇಕ ಎಟಿಎಂಗಳು ನಗದು ಕೊರತೆಯಿಂದ ನಲುಗುತ್ತಿವೆ. ಎಟಿಎಂಗಳ ಮುಂದೆ ಹಣ ಇಲ್ಲ ಎಂಬ ಫಲಕ ಹಾಕಲಾಗಿದ್ದು, ಗ್ರಾಹಕರು ಪರದಾಡುತ್ತಿದ್ದಾರೆ.
ಈ ಪರಿಸ್ಥಿತಿ ಕಂಡು ಬರುತ್ತಿರುವುದು ನಿನ್ನೆ - ಮೊನ್ನೆಯಿಂದಲ್ಲ. ಕಳೆದ ತಿಂಗಳಿನಿಂದ ಈಚೆಗೆ ಸಾರ್ವಜನಿಕರು ಎದುರಿಸುತ್ತಿರುವ ಪಾಡು ಇದು. ಹಣಕ್ಕಾಗಿ ಎಟಿಎಂಗಳನ್ನು ಹುಡುಕುತ್ತಾ ಬೀದಿ- ಬೀದಿ ಸುತ್ತುವ ಪರಿಸ್ಥಿತಿ ಗ್ರಾಹಕರಿಗೆ ಒದಗಿದೆ. ಇಷ್ಟೆಲ್ಲಾ ಅಲೆಯುವ ಬದಲು ನೇರ ಬ್ಯಾಂಕಿಗೆ ಹೋದರೆ ಹಣ ಇಷ್ಟೊತ್ತಿಗೆ ಕೈ ಸೇರುತ್ತಿತ್ತು ಎಂದು ಅಲ್ಲಿಗೆ ಹೋದರೆ ಅಲ್ಲೂ ಉದ್ದನೆ ಸಾಲು ಕಂಡು ಗ್ರಾಹಕರು ಹೈರಾಣಾಗುತ್ತಿದ್ದಾರೆ.
ಎಟಿಎಂಗಳಿಗೆ ಬೆಳಗ್ಗೆ ಹಣ ತುಂಬಿದ ಒಂದೆರಡು ಗಂಟೆಗಳ ಒಳಗೆ ಹೋದರಷ್ಟೇ ನಗದು ಸಿಗುತ್ತಿದೆ. ಇದಕ್ಕೆ ಕಾರಣ ಏನು ಅಂದರೆ, ಭಾರತೀಯ ರಿಸರ್ವ್ ಬ್ಯಾಂಕ್ ಈಗಾಗಲೇ ಬ್ಯಾಂಕ್ ಗಳಿಗೆ ಮಾರ್ಚ್ 31ರ ವರೆಗೆ ನಗದು ಪ್ರಮಾಣ ಕಡಿಮೆ ನೀಡುವುದಾಗಿ ತಿಳಿಸಿದ್ದು, ಇದರಿಂದ ಬ್ಯಾಂಕ್ ಗಳು ಬೇಡಿಕೆ ಸಲ್ಲಿಸಿದಷ್ಟು ಪ್ರಮಾಣದಲ್ಲಿ ನಗದು ಬರುತ್ತಿಲ್ಲ.
ಇದರ ಜೊತೆಗೆ ಬ್ಯಾಂಕ್ ಗಳಿಂದ ಈ ಹಿಂದೆ ಹಣ ಪಡೆದವರು ಸಹ ಹಿಂತಿರುಗಿಸಿಲ್ಲ. ಇದರಿಂದಲೂ ಹಣದ ಕೊರತೆ ಎದುರಾಗಿದೆ.
2 ಸಾವಿರ ರುಪಾಯಿ ನೋಟು ಸಿಗ್ತಿಲ್ಲ
ವಿಧಾನಸಭಾ ಚುನಾವಣೆ ಇನ್ನೇನು ಕಣ್ಣೆದುರು ಇದ್ದು, ಆ ಹಿನ್ನೆಲೆಯಲ್ಲಿ ಈ ರೀತಿ ನಗದು ಕೊರತೆ ಕಂಡುಬರುತ್ತಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಆರ್ ಬಿಐನಿಂದ 2 ಸಾವಿರ ಮುಖಬೆಲೆಯ ನೋಟುಗಳು ಸಹ ಬರುತ್ತಿಲ್ಲ. ನಗರದಲ್ಲಿ ಕೊರತೆ 2 ಸಾವಿರ ಮುಖಬೆಲೆಯ ನೋಟುಗಳು ಹೆಚ್ಚಾಗಿ ಸಿಗುತ್ತಿಲ್ಲ. ಕಳೆದ ಮೂರು ತಿಂಗಳಿಂದ ಗಣನೀಯವಾಗಿ ಕುಸಿತ ಕಂಡಿದೆ ಎಂದು ಬ್ಯಾಂಕ್ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
40 ಲಕ್ಷ ನಗದು ಸಂಗ್ರಹ ಸಾಮರ್ಥ್ಯ, 10-15 ಲಕ್ಷ ಮಾತ್ರ ಭರ್ತಿ
ಮೈಸೂರಿನ 13 ಕರೆನ್ಸಿ ಚೆಸ್ಟ್ ಗಳಿಗೂ ಆರ್ ಬಿಐನಿಂದ ನೇರವಾಗಿ ಹಣ ಬರುತ್ತದೆ. ಇದಾದ ಬಳಿಕ ಬ್ಯಾಂಕ್ ಗಳಿಗೂ ಇದು ಸೇರುತ್ತದೆ. 15 ದಿನಗಳಿಂದ ಅಗತ್ಯಕ್ಕೆ ತಕ್ಕಷ್ಟು ಹಣವನ್ನು ಆರ್ಬಿಐ ಪೂರೈಕೆ ಮಾಡುತ್ತಿಲ್ಲ. ಎಟಿಎಂಗಳಿಗೆ ನಿತ್ಯ 15 ಕೋಟಿ ರುಪಾಯಿ ಅಗತ್ಯವಿದೆ. ಪ್ರತಿ ಎಟಿಎಂ ಯಂತ್ರಕ್ಕೆ 40 ಲಕ್ಷ ನಗದು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ನಗದು ಕೊರತೆ ಇರುವುದರಿಂದ 10-15 ಲಕ್ಷವನ್ನು ಮಾತ್ರ ಭರ್ತಿ ಮಾಡಲಾಗುತ್ತಿದೆ. ಆದರೆ ಇದು ಮಧ್ಯಾಹ್ನದ ಹೊತ್ತಿಗೆ ಖಾಲಿಯಾಗುತ್ತಿದೆ.
ಆರ್ ಬಿಐ ಸಂಪೂರ್ಣ ಹಣ ಪೂರೈಕೆ ನಿಲ್ಲಿಸಿದೆ
ಹಣ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಬ್ಯಾಂಕ್ ಅಧಿಕಾರಿಗಳು, ಎರಡು ಸಾವಿರ ನೋಟು ಚಲಾವಣೆ ಬಹುತೇಕ ಕಡಿಮೆಯಾಗಿದೆ. ಜಿಲ್ಲೆಯ ಬಹುತೇಕ ಎಟಿಎಂಗಳಲ್ಲಿ ನಗದು ಇಲ್ಲ ಎಂಬ ಫಲಕ ಹಾಕಲಾಗಿದೆ. 15 ದಿನಗಳಿಂದ ಆರ್ ಬಿಐ ಸಂಪೂರ್ಣ ಹಣ ಪೂರೈಕೆ ನಿಲ್ಲಿಸಿದೆ ಎಂದು ಸಹ ತಿಳಿಸಿದ್ದಾರೆ.
ಗ್ರಾಹಕರ ಅಸಮಾಧಾನ
ಗ್ರಾಹಕರು ಕೇಳಿದಷ್ಟು ಹಣ ಬ್ಯಾಂಕ್ಗಳಲ್ಲಿ ಲಭ್ಯವಾಗದ ಕಾರಣ ಅಸಮಾಧಾನಗೊಂಡ ಸಾರ್ವಜನಿಕರು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕರಿಗೆ ದೂರು ನೀಡುತ್ತಿದ್ದು, ತಕ್ಷಣವೇ ಇದಕ್ಕೊಂದು ಪರಿಹಾರ ದೊರಕಬೇಕಿದೆ.