ಜೆಡಿಎಸ್ ಪಕ್ಷ ಸಂಘಟನೆಗೆ ನಿಖಿಲ್ ಕುಮಾರಸ್ವಾಮಿ ಪಣ?
ಮೈಸೂರು, ಜೂನ್ 27: ಜೆಡಿಎಸ್ ಪಕ್ಷದ ಸಂಘಟನೆಗಾಗಿ ನಿಖಿಲ್ ಕುಮಾರಸ್ವಾಮಿ ಕಾರ್ಯೋನ್ಮುಖರಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪಾದಯಾತ್ರೆ ಮಾಡಲಿದ್ದಾರೆ ಎಂಬ ಸುದ್ದಿಯೊಂದು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ.
ಆಂಧ್ರಪ್ರದೇಶದಲ್ಲಿ ಜಗನ್ ಪಾದಯಾತ್ರೆ ಮಾಡುವ ಮೂಲಕ ಯಾವ ರೀತಿ ಪಕ್ಷ ಸಂಘಟನೆ ಮಾಡಿ ಅಧಿಕಾರಕ್ಕೆ ಬಂದರೋ ಅದೇ ರೀತಿ ನಿಖಿಲ್ ಕುಮಾರಸ್ವಾಮಿ ಕೂಡ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಎನ್ನಲಾಗುತ್ತಿದೆ.
ಆಂಧ್ರಪ್ರದೇಶ ಸಿಎಂ ಜಗನ್ ಭೇಟಿಯಾದ ನಿಖಿಲ್ ಕುಮಾರಸ್ವಾಮಿ
ಈ ಬಾರಿಯ ಲೋಕಸಭಾ ಚುನಾವಣೆ ಜೆಡಿಎಸ್ ಗೆ ಸಾಕಷ್ಟು ಪಾಠಗಳನ್ನು ಕಲಿಸಿದೆ. ಮಾಜಿ ಪ್ರಧಾನಿ ಪ್ರಭಾವಿ ನಾಯಕ ದೇವೇಗೌಡರೇ ಸೋತಿದ್ದಾರೆ ಎಂಬುದು ಪಕ್ಷ ಸಂಘಟನೆಯಾಗಿಲ್ಲ ಎಂಬುದನ್ನು ಸಾರಿ ಹೇಳುವಂತಿದೆ. ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿದ್ದರೂ ಕೆಲವೇ ಕೆಲವು ಜಿಲ್ಲೆಗಳಲ್ಲಿ ಮಾತ್ರ ಪ್ರಾಬಲ್ಯ ಹೊಂದಿದೆ. ಉಳಿದಂತೆ ಕೆಲವು ಜಿಲ್ಲೆಗಳಲ್ಲಿ ಖಾತೆಯನ್ನೇ ತೆರೆದಿಲ್ಲ. ಹೀಗಾಗಿ ತಳಮಟ್ಟದಿಂದಲೇ ಪಕ್ಷವನ್ನು ಬೆಳೆಸುವುದು ಅನಿವಾರ್ಯವಾಗಿದೆ.
ಕಾಂಗ್ರೆಸ್ ಬೆಂಬಲದಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರದಲ್ಲಿರುವಾಗಲೇ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಸಂಸದನನ್ನಾಗಿ ಮಾಡುವ ಪ್ರಯತ್ನ ಮಾಡಿದರು. ಆದರೆ ಅಂದುಕೊಂಡಿದ್ದು ಆಗಲೇ ಇಲ್ಲ. ಇದು ಕುಮಾರಸ್ವಾಮಿ ಅವರನ್ನು ನಿರಾಸರನ್ನಾಗಿ ಮಾಡಿರುವುದಂತು ನಿಜ. ಆದರೆ ಕೆಲವು ವಿಶ್ವಾಸನೀಯ ಮೂಲಗಳು ಹೇಳುವ ಪ್ರಕಾರ ಎಲ್ಲಿ ಸೋಲಾಗಿದೆಯೋ ಅಲ್ಲಿಂದಲೇ ರಾಜಕೀಯ ಭವಿಷ್ಯವನ್ನು ಆರಂಭಿಸುವುದು ನಿಖಿಲ್ ಕುಮಾರಸ್ವಾಮಿ ಅವರ ಶಪಥವಾಗಿದೆ. ಇದಕ್ಕಾಗಿ ಈಗಾಗಲೇ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವುದು ಕಂಡುಬರುತ್ತಿದೆ.
ಇದಕ್ಕೆ ಪೂರಕವೆಂಬಂತೆ ಮಂಡ್ಯ ನಗರದಿಂದ ಒಂದು ಕಿ.ಮೀ. ದೂರದಲ್ಲಿ ತೋಟ ಖರೀದಿ ಮಾಡಿದ್ದಾರೆ. ಅಲ್ಲಿ ಮನೆ ನಿರ್ಮಿಸುವ ಕಾರ್ಯ ಆರಂಭಿಸಿದ್ದು, ಮನೆ ಪೂರ್ಣಗೊಂಡ ಬಳಿಕ ಆ ಮನೆಗೆ 'ನಿಮ್ಮ ಮನೆ' ಎಂದು ಹೆಸರಿಡುವ ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ. ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳಲು ಇನ್ನೂ ಸುಮಾರು 15ಕ್ಕೂ ಹೆಚ್ಚು ದಿನಗಳು ಬೇಕಾಗಬಹುದು ಎಂದು ಹೇಳಲಾಗುತ್ತಿದೆ.
ನಾನು ಕುಡಿಯುವುದು ಬಿಟ್ಟು 8 ವರ್ಷ ಆಯಿತು ಎಂದ ನಿಖಿಲ್ ಕುಮಾರಸ್ವಾಮಿ
ಮುಂದಿನ ದಿನಗಳಲ್ಲಿ ಜೆಡಿಎಸ್ ನ ಪ್ರಬಲ ನಾಯಕನಾಗಿ ಬೆಳೆಯಬೇಕಾದರೆ ಈಗಿನಿಂದಲೇ ಪಕ್ಷವನ್ನು ಬೆಳೆಸಬೇಕು ಮತ್ತು ಆ ಮೂಲಕ ಗುರುತಿಸಿಕೊಳ್ಳುವುದು ನಿಖಿಲ್ ಗೆ ಅನಿವಾರ್ಯವಾಗಿದೆ. ಹೀಗಾಗಿ ಕಠಿಣ ನಿರ್ಧಾರಕ್ಕೆ ಬಂದಿರುವ ನಿಖಿಲ್ ಕುಮಾರಸ್ವಾಮಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ರೋಲ್ ಮಾಡಲ್ ಆಗಿದ್ದು, ಅವರ ರೀತಿ ಪಾದಯಾತ್ರೆ ಆರಂಭಿಸಿ ರಾಜ್ಯದಾದ್ಯಂತ ಸಂಚರಿಸಿ ಪಕ್ಷವನ್ನು ಸಂಘಟಿಸುವ ಚಿಂತನೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಪಾದಯಾತ್ರೆಯನ್ನು ಮಂಡ್ಯದಿಂದ ಆರಂಭಿಸಿ ರಾಜ್ಯದಾದ್ಯಂತ ಸಂಚರಿಸಿ ಅಲ್ಲಲ್ಲಿ ಸಭೆ, ಪಕ್ಷದ ಕಾರ್ಯಕರ್ತರು, ಮುಖಂಡರ ಭೇಟಿ ಮಾಡಿ ಪಕ್ಷದ ಬೆಳವಣಿಗೆಯ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದ್ದು, ಇವರಿಗೆ ಪಕ್ಷದ ಮುಖಂಡರು ಸಾಥ್ ನೀಡಲಿದ್ದಾರೆ.
ನಿಖಿಲ್ ರಾಜಕೀಯ ಭವಿಷ್ಯದ ಬಗ್ಗೆ ದೇವೇಗೌಡ್ರು ಹೇಳಿದ್ದೇನು?
ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆ ಆರಂಭಿಸಿದ್ದರೂ ಅದನ್ನು ಯಾವ ರೀತಿಯಲ್ಲಿ ನಿಭಾಯಿಸಿ ಯಶಸ್ಸುಗೊಳಿಸುತ್ತಾರೆ ಎಂಬುದು ಇಲ್ಲಿ ಬಹುಮುಖ್ಯ ಸಂಗತಿ.