ನಿಖಿಲ್-ಹರೀಶ್ ಗೌಡ ಭೇಟಿ: ಜಿ.ಟಿ.ದೇವೇಗೌಡ ಸುತ್ತ ಮತ್ತೆ ಗುಸುಗುಸು ಸುದ್ದಿ
ಮೈಸೂರು, ಅ 23: ಆಪ್ತ ಸ್ನೇಹಿತರು ಒಬ್ಬರೊನ್ನೊಬ್ಬರು ವೈಯಕ್ತಿಕ ಕೆಲಸದ ಮೇಲೆ ಭೇಟಿಯಾದರೂ ಅದಕ್ಕೆ ರಾಜಕೀಯ ಬಣ್ಣ ಬರುವುದು ಸಹಜ. ಅದಕ್ಕೊಂದು ತಾಜಾ ಉದಾಹರಣೆ ಮೈಸೂರು ಚಾಮುಂಡೇಶ್ವರಿ ದೇವಾಲಯದಲ್ಲಿ ನಡೆದ ವಿದ್ಯಮಾನ.
ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು ಎರಡು ದಿನಗಳ ಹಿಂದೆ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಬಿಡುಗಡೆ ಹಂತದಲ್ಲಿರುವ ತಮ್ಮ ಮುಂದಿನ 'ರೈಡರ್ ' ಸಿನಿಮಾ ಸಂಬಂಧ ವಿಶೇಷ ಪೂಜೆ ಸಲ್ಲಿಸಲು ಆಗಮಿಸಿದ್ದರು.
ದೇವೇಗೌಡ್ರು ಕಿವಿಹಿಂಡಿದ ನಂತರ ಎಚ್ಚೆತ್ತ ಜೆಡಿಎಸ್ ನಾಯಕರು
ಆ ವೇಳೆ, ಜೆಡಿಎಸ್ ನಲ್ಲಿ ಇದ್ದರೂ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಜೊತೆ ಮುನಿಸಿಕೊಂಡಿರುವ ಹಾಲೀ ಜೆಡಿಎಸ್ ಶಾಸಕರ ಮಗ ನಿಖಿಲ್ ಕುಮಾರಸ್ವಾಮಿಯವರ ಜೊತೆಗಿದ್ದರು. ಅದು ಈಗ ರಾಜಕೀಯ ಬಣ್ಣಕ್ಕೆ ತಿರುಗಿದೆ. ಅದಕ್ಕೆ ಕಾರಣ ಇಲ್ಲದಿಲ್ಲ..
ಉಪ ಚುನಾವಣೆಗೆ ಪ್ರಚಾರಕ್ಕೆ ಧುಮುಕುವ ಮುನ್ನ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರು, ಪಕ್ಷ ಬಿಟ್ಟು ಹೋಗಿರುವ ಮತ್ತು ಬಿಟ್ಟು ಹೋಗಲು ಸಜ್ಜಾಗಿರುವ ನಾಯಕರನ್ನು ಮತ್ತೆ ಪಕ್ಷದಲ್ಲೇ ಉಳಿಸಿಕೊಳ್ಳುವ ಕೆಲಸಕ್ಕೆ ಮುಂದಾಗಿದ್ದರು. ಅದರ ಭಾಗವಾಗಿ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರನ್ನು ಕೂಡಾ ಮನವೊಲಿಸುವ ಕೆಲಸಕ್ಕೆ ಗೌಡ್ರು ಮಾತುಕತೆ ನಡೆಸುತ್ತಿದ್ದಾರೆ.
ಉಪ ಚುನಾವಣೆ: ಇರುವ ಸತ್ಯವನ್ನು ಇದ್ದಹಾಗೇ ಒಪ್ಪಿಕೊಂಡ ಎಚ್.ಡಿ.ಕುಮಾರಸ್ವಾಮಿ
ಜಿ.ಟಿ.ದೇವೇಗೌಡ ಅವರು ಮತ್ತವರ ಪುತ್ರ ಹರೀಶ್ ಗೌಡ
ಕುಮಾರಸ್ವಾಮಿಯವರ ಜೊತೆಗೆ ಮುನಿಸಿಕೊಂಡು ಪಕ್ಷದ ಚಟುವಟಿಕೆಯಿಂದ ದೂರವಿರುವ ಜಿ.ಟಿ.ದೇವೇಗೌಡ ಅವರು ಮತ್ತವರ ಪುತ್ರ ಹರೀಶ್ ಗೌಡ ಬಹುತೇಕ ಕಾಂಗ್ರೆಸ್ ಸೇರುವುದು ನಿಶ್ಚಿತ. ಈ ವಿಚಾರವನ್ನು ಖುದ್ದು ಜಿಟಿಡಿಯವರೇ ಹೇಳಿದ್ದರು. ಆದರೆ, ಎಚ್.ಡಿ.ದೇವೇಗೌಡ್ರು, ಜಿಟಿಡಿಯವರನ್ನು ಮನವೊಲಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಎರಡು ಹಂತದಲ್ಲಿ ಗೌಡ್ರು, ಜಿಟಿಡಿ ಬಳಿ ಮಾತುಕತೆ ನಡೆಸಿದ್ದು ಫಲಪ್ರದವಾಗಿರಲಿಲ್ಲ. ಉಪ ಚುನಾವಣೆಯ ಪ್ರಚಾರ ಮುಗಿದ ನಂತರ ಮತ್ತೆ ಗೌಡ್ರು, ಜೆಡಿಎಸ್ ನಿಂದ ದೂರವಾಗುತ್ತಿರುವವರ ಜೊತೆ ಮಾತುಕತೆ ಮುಂದುವರಿಸಲಿದ್ದಾರೆ.
ಸ್ನೇಹಿತರ ಜೊತೆಗೆ ಮೈಸೂರು ಚಾಮುಂಡೇಶ್ವರಿ ದೇವಾಲಯಕ್ಕೆ ನಿಖಿಲ್ ಭೇಟಿ
ಈ ಹಿಂದೆ, ನಿಖಿಲ್ ಕುಮಾರಸ್ವಾಮಿಯವರು ಜಿ.ಟಿ.ದೇವೇಗೌಡ್ರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರು. ಇದಾದ ನಂತರ, ಮೂರು ದಿನಗಳ ಹಿಂದೆ ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿಯವರು, ಜಿಟಿಡಿಯವರ ಪತ್ನಿಯ ಜೊತೆ ಮಾತುಕತೆ ನಡೆಸಿದ್ದಾರೆ. ಇದರ ಬೆನ್ನಲ್ಲೇ, ನಿಖಿಲ್ ಕುಮಾರಸ್ವಾಮಿಯವರು ಜಿಟಿಡಿ ಪುತ್ರ ಹರೀಶ್ ಗೌಡ, ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಪುತ್ರ ಶಿವು ಪುಟ್ಟರಾಜು, ಪಿರಿಯಾಪಟ್ಟಣ ಶಾಸಕ ಮಹದೇವ್ ಅವರ ಪುತ್ರ ಮತ್ತು ಮೈಸೂರು ಹಾಲು ಒಕ್ಕೂಟದ ಅಧ್ಯಕ್ಷರೂ ಆಗಿರುವ ಪ್ರಸನ್ನ ಅವರ ಜೊತೆ ಚಾಮುಂಡೇಶ್ವರಿ ದೇವಾಲಯದಲ್ಲಿ ಕಾಣಿಸಿಕೊಂಡಿದ್ದಾರೆ.
ನನ್ನ ಮತ್ತು ಹರೀಶ್ ಗೌಡರ ಸ್ನೇಹ ಇಂದು ನಿನ್ನೆಯದಲ್ಲ
"ನಾವೆಲ್ಲಾ ಸ್ನೇಹಿತರು, ಬಹಳ ದಿನಗಳ ನಂತರ ನಾವು ಒಂದು ಕಡೆ ಸೇರುತ್ತಿದ್ದೇವೆ. ನನ್ನ ಹೊಸ ಚಿತ್ರಕ್ಕೆ ಅಶೀರ್ವಾದ ಪಡೆಯಲು ತಾಯಿ ಚಾಮುಂಡೇಶ್ವರಿ ಬಳಿ ಬಂದಿದ್ದೇನೆ. ಜೊತೆಗೆ ರಾಜ್ಯದ ಜನಕ್ಕೆ ಒಳಿತು ಮಾಡಲಿ ಎಂದು ಬೇಡಿಕೊಂಡಿದ್ದೇನೆ. ಯಾವುದೇ ರೀತಿಯ ರಾಜಕೀಯ ಮಾಡಲು ಬಂದಿಲ್ಲ. ನನ್ನ ಮತ್ತು ಹರೀಶ್ ಗೌಡರ ಸ್ನೇಹ ಇಂದು ನಿನ್ನೆಯದಲ್ಲ. ರಾಜಕೀಯದ ಹೊರತಾಗಿ ನಮ್ಮ ಸ್ನೇಹವಿದೆ. ಸಂಘಟನೆ ವಿಚಾರದಲ್ಲಿ ಎಲ್ಲವೂ ಸರಿ ಹೋಗುತ್ತದೆ, ಮುಂದಿನ ದಿನಗಳಲ್ಲಿ ಎಲ್ಲಾ ಸಮಸ್ಯೆಗಳು ಸರಿ ಹೋಗುತ್ತವೆ" ಎಂದು ನಿಖಿಲ್ ಕುಮಾರಸ್ವಾಮಿಯವರು ಈ ಸಂದರ್ಭದಲ್ಲಿ ಹೇಳಿದ್ದರು.
ಕುಮಾರಸ್ವಾಮಿಯವರ ಬಿಡದಿಯ ತೋಟದ ಮನೆಯಲ್ಲಿ ನಡೆದ ಜೆಡಿಎಸ್ ಕಾರ್ಯಾಗಾರ
ನಿಖಿಲ್ ಹೇಳಿದ ಮಾತನ್ನು ಹರೀಶ್ ಗೌಡ ಅವರು ಕೂಡಾ ಪುನರುಚ್ಚಿಸಿದ್ದಾರೆ. ಇತ್ತೀಚೆಗೆ ಕುಮಾರಸ್ವಾಮಿಯವರ ಬಿಡದಿಯ ತೋಟದ ಮನೆಯಲ್ಲಿ ನಡೆದ ಜೆಡಿಎಸ್ ಕಾರ್ಯಾಗಾರದ ನಂತರ, ಪಕ್ಷ ಸಂಘಟನೆಯ ವಿಚಾರದಲ್ಲಿ ಹೊಸ ಚೈತನ್ಯ ಬಂದಿದೆ ಎಂದು ಜೆಡಿಎಸ್ ಕಾರ್ಯಕರ್ತರೂ ಹೇಳುತ್ತಿದ್ದಾರೆ. 'ಮಿಷನ್ 123' ಟಾರ್ಗೆಟ್ ಇಟ್ಟುಕೊಂಡಿರುವ ದೇವೇಗೌಡ್ರು ಮತ್ತು ಕುಮಾರಸ್ವಾಮಿಯವರು ಹೊಸ ಮುಖದತ್ತ ಚಿತ್ತ ಹರಿಸುತ್ತಿರುವುದರ ಜೊತೆಗೆ, ಜಿ.ಟಿ.ದೇವೇಗೌಡ್ರು ಅಂತಹ ಪ್ರಭಾವೀ ನಾಯಕನನ್ನೂ ಪಕ್ಷದಲ್ಲಿ ಉಳಿಸಿಕೊಳ್ಳಲು ಗೌಡ್ರ ಪ್ರಯತ್ನ ಮುಂದುವರಿದಿದೆ. ಹಾಗಾಗಿ, ನಿಖಿಲ್ ಮತ್ತು ಅವರ ಸ್ನೇಹಿತರ ಭೇಟಿಗೆ ರಾಜಕೀಯ ಬಣ್ಣ ಬಂದಿದೆ.