ಮೈಸೂರು ವಿವಿ ಘಟಿಕೋತ್ಸವ:20 ಚಿನ್ನದ ಪದಕ ಬಾಚಿಕೊಂಡ ನೈಜೀರಿಯಾ ಮಹಿಳೆ
ಮೈಸೂರು, ಮಾರ್ಚ್ 18: ವಿಶ್ವವಿದ್ಯಾಲಯಗಳಲ್ಲಿ ಹೊಸ ಜ್ಞಾನ ಹೊಮ್ಮಿ, ಅದು ಎಲ್ಲಾ ಕಡೆ ವ್ಯಾಪಿಸಬೇಕು. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ಸಂಶೋಧನೆ ಮತ್ತು ನಾವೀನ್ಯತೆಗೆ ಹೆಚ್ಚು ಒತ್ತು ಕೊಡಬೇಕು ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಮಿತಿ ಅಧ್ಯಕ್ಷ ಡಾ.ಅನಿಲ್ ಡಿ.ಸಹಸ್ರಬುಧೆ ಸಲಹೆ ನೀಡಿದರು.
ಮೈಸೂರು ವಿಶ್ವವಿದ್ಯಾಲಯದ 99ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತೀಯ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯುವ ಯುವಕರು ಉದ್ಯೋಗಾರ್ಹರಲ್ಲ ಎಂಬ ಕೊರತೆಯನ್ನು ನೀಗಿಸಲು ಸಾಂಘಿಕ ಪ್ರಯತ್ನದ ಅಗತ್ಯವಿದೆ ಎಂದರು.
ಮಾತಾ ಅಮೃತಾನಂದಮಯಿ, ಕರಿವೃಷಭಾ ಶ್ರೀಗಳಿಗೆ ಮೈಸೂರು ವಿವಿ ಡಾಕ್ಟರೇಟ್
ಪರಿಣಾಮಕಾರಿ ಸಂವಹನ ಕೌಶಲಗಳು, ತಂಡದ ಕೆಲಸ, ಶಿಸ್ತು, ಸಂಯಮ, ತೀಕ್ಷ್ಣ ಆಲೋಚನೆ, ವೃತ್ತಿಪರತೆ, ಮೌಲ್ಯಗಳು ಭಾರತೀಯ ವಿದ್ಯಾರ್ಥಿಗಳಿಗಿಲ್ಲ ಎಂಬ ಆರೋಪ ಉದ್ಯಮಿಗಳಿಂದ ಕೇಳಿಬರುತ್ತಿದೆ. ಇದೇ ಕಾರಣವನ್ನು ಮುಂದಿಟ್ಟುಕೊಂಡು ಉದ್ಯೋಗಾವಕಾಶವನ್ನು ನೀಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡುಹಿಡಿಯಲೇಬೇಕು ಎಂದು ಸಹಸ್ರಬುಧೆ ತಿಳಿಸಿದರು.
ವಿಶ್ವವಿದ್ಯಾಲಯಗಳಿಗೆ ಇನ್ನೊಂದು ಹೆಸರೇ ಹೊಸತನ. ಹೊಸ ಸಂಶೋಧನೆಗಳಾಗಬೇಕು. ಅಂತರ ವಿಷಯ ಅಧ್ಯಯನ ಹೆಚ್ಚಬೇಕು. ಜೊತೆಗೆ, ಗ್ರಾಮೀಣ ಪ್ರದೇಶಗಳನ್ನು ದತ್ತು ಸ್ವೀಕರಿಸಿ ವಿದ್ಯಾರ್ಥಿಗಳನ್ನು ಬೆಳೆಸಬೇಕು. ಅಂತೆಯೇ, ಅಂತರರಾಷ್ಟ್ರೀಯ ಸಂಪರ್ಕಗಳನ್ನು ಹೆಚ್ಚಿಸಿಕೊಂಡು ವಿದೇಶಿ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಭಾರತೀಯ ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸಬೇಕು. ವಿ.ವಿ.ಗಳಲ್ಲಿ ಓದಿ ಸಾಧನೆಯ ಶಿಖರಕ್ಕೇರಿರುವ ಹಿರಿಯ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಅವರಿಂದ ಸಹಾಯಪಡೆಯಬೇಕು ಎಂದು ಸಹಸ್ರಬುಧೆ ಮಾಹಿತಿ ನೀಡಿದರು.
ಮೈಸೂರು ವಿವಿ ನೂತನ ಆಡಳಿತ ಕುಲಸಚಿವರಾಗಿ ಡಾ.ಲಿಂಗರಾಜ ಗಾಂಧಿ ಆಯ್ಕೆ
ಇದಕ್ಕೂ ಮುನ್ನ ತಿಪಟೂರಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿವೃಷಭಾ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಕೇರಳದ ಕೊಲ್ಲಂನ ಮಾತಾ ಅಮೃತಾನಂದಮಯಿ ಮಠದ ಮಾತಾ ಅಮೃತಾನಂದಮಯಿ ದೇವಿ ಅವರಿಗೆ ಅನುಪಸ್ಥಿತಿಯಲ್ಲಿ ಪ್ರದಾನ ಮಾಡಲಾಯಿತು.
ಇದೇ ವೇಳೆ 20 ಚಿನ್ನದ ಪದಕ, 5 ಬಹುಮಾನವನ್ನ ನೈಜಿರಿಯಾ ಪ್ರಜೆ ಸ್ಟೆಲ್ಲಾ ಸ್ವೀಕರಿಸಿ ಗಮನ ಸೆಳೆದಿದ್ದಾರೆ. ಅಂತರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ಯೋಜನೆ ಅಡಿ ಭಾರತದಲ್ಲಿ ಅಧ್ಯಯನ ಬಯಸಿದ್ದ ಸ್ಟೆಲ್ಲಾ ಮೈಸೂರಿನ ಬೋಗಾಧಿಯಲ್ಲಿ ವಾಸ್ತವ್ಯವಿದ್ದುಕೊಂಡು ಎಂಎಸ್ ಸಿ ರಾಸಾಯನಶಾಸ್ತ್ರ ವಿಭಾಗದಲ್ಲಿ ದಾಖಲೆ ಮಾಡಿದ್ದಾರೆ.
"ನೈಜೀರಿಯಾದಲ್ಲಿ ತಂದೆ ಬಿಸಿನೆಸ್, ತಾಯಿ ಹೈಸ್ಕೂಲ್ ಟೀಚರ್ ಹಾಗೂ ನನ್ನ ಗಂಡ ಬಿಸಿನೆಸ್ ಮಾಡುತ್ತಿದ್ದಾರೆ. ಈ ಪದಕ ಪಡೆದು ನನಗೆ ತುಂಬ ಖುಷಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುವ ಆಸೆ ನನಗಿದೆ" ಎಂದು ಸಂತಸ ವ್ಯಕ್ತಪಡಿಸಿದರು.