ಕಾರು ಡಿಕ್ಕಿಯಾಗಿ ತಾಂಡವಪುರದ ನವವಿವಾಹಿತ ಸಾವು
ತಾಂಡವಪುರ, ಅಕ್ಟೋಬರ್ 15: ಕಾರು-ಬೈಕ್ ಮಧ್ಯೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಂಜನಗೂಡು ಬಳಿಯ ತಾಂಡವಪುರದಲ್ಲಿ ಸಂಭವಿಸಿದೆ. ಬೈಕ್ ನಲ್ಲಿ ತೆರಳುತ್ತಿದ್ದ ತಾಂಡವಪುರದ ಗ್ರಾಮ ಪಂಚಾಯಿತಿ ನೌಕರ ಬಸವೇಗೌಡರ ಮಗ ಬಸವರಾಜು (29) ಮೃತಪಟ್ಟಿದ್ದಾರೆ.
ಮತ್ತೊಬ್ಬ ಸವಾರ ರವಿ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾರೆ. ಶನಿವಾರ ಬೆಳಗ್ಗೆ ಬಸವರಾಜು ಮತ್ತು ರವಿ ಕಡಕೊಳ ಕಡೆಯಿಂದ ಬೈಕಿನಲ್ಲಿ ತಾಂಡವಪುರಕ್ಕೆ ಹೋಗುತ್ತಿದ್ದರು. ಅಲ್ಲಿನ ಪೆಟ್ರೋಲ್ ಬಂಕ್ ಬಳಿ ಮೈಸೂರು ಕಡೆಯಿಂದ ವೇಗವಾಗಿ ಬಂದ ರೆನಾಲ್ಟ್ ಡಸ್ಟರ್ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದೆ.[ಕಬಿನಿ ನಾಲೆಗೆ ಉರುಳಿದ ಕಾರು: ಇಬ್ಬರು ಸಾವು]
ಪರಿಣಾಮವಾಗಿ ಬೈಕ್ ಸವಾರ ಬಸವರಾಜು ತಲೆಗೆ ಗಂಭೀರ ಪೆಟ್ಟು ಬಿದ್ದು, ಸ್ಥಳದಲ್ಲೇ ಮೃತ ಪಟ್ಟಿದ್ದಾರೆ, ಮತ್ತೊಬ್ಬ ಸವಾರ ರವಿಗೆ ಗಂಭೀರ ಗಾಯವಾಗಿದೆ. ಕೂಡಲೇ ಆತನಿಗೆ ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.[ಕಾರ್ಕಳದ ತಾಯಿ-ಮಗ ಕಾರು ಅಪಘಾತದಲ್ಲಿ ಸಾವು]
ಮೃತ ಬಸವರಾಜು 2 ತಿಂಗಳ ಹಿಂದೆ ತನ್ನ ಅಕ್ಕನ ಮಗಳನ್ನೇ ಮದುವೆಯಾಗಿದ್ದು, ಹೊಸಜೀವನ ಕಂಡು ಕೊಳ್ಳುವ ಮೊದಲೇ ಆತ ಮೃತಪಟ್ಟಿರುವುದು ದುಃಖದ ವಿಚಾರವಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಇಡೀ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.