ಮೈಸೂರಿನಲ್ಲಿ ತಲೆ ಎತ್ತಲಿದೆ ಬೃಹತ್ ಅಕ್ವೇರಿಯಂ
ಮೈಸೂರು, ಜುಲೈ 9: ಶತಮಾನದ ಮೃಗಾಲಯದ ಆವರಣದಲ್ಲಿ ಕಳೆದ ಕೆಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬೃಹತ್ ಅಕ್ವೇರಿಯಂ ಕಾಮಗಾರಿಗೆ ಕಾಯಕಲ್ಪ ನೀಡಲು ನ್ಯೂಜಿಲೆಂಡ್ ಮೂಲದ ಸಂಸ್ಥೆಯೊಂದು ಮುಂದೆ ಬಂದಿದೆ.
ಅಂತಾರಾಷ್ಟ್ರೀಯ ಗುಣಮಟ್ಟದ ಮತ್ಸ್ಯಾಲಯ ಕಾಮಗಾರಿಯನ್ನು ಸಂಪೂರ್ಣಗೊಳಿಸಲು ಸರ್ಕಾರದ ಅನುಮೋದನೆಗಾಗಿ ಮೃಗಾಲಯ ಪ್ರಾಧಿಕಾರ ಈಗಾಗಲೇ ವರದಿ ಕಳುಹಿಸಿದೆ. ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಮೈಸೂರು ನಗರಪಾಲಿಕೆ 2010-11ರಲ್ಲಿ ಮೃಗಾಲಯ ಮತ್ತು ಕಾರಂಜಿ ಕೆರೆ ನಡುವೆ ಮತ್ಸ್ಯಾಗಾರ ಕಾಮಗಾರಿ ಆರಂಭಿಸಿತ್ತು. 4.26 ಕೋಟಿ ವೆಚ್ಚದಲ್ಲಿ ಸುಮಾರು ಆರು ಸಾವಿರ ಚದರಡಿ ವಿಸ್ತೀರ್ಣದಲ್ಲಿ ಅಕ್ವೇರಿಯಂ ಕಟ್ಟಡವನ್ನು ಸಹ ನಿರ್ಮಿಸಿತ್ತು. ಆದರೆ ಕಾಮಗಾರಿ ಪೂರ್ಣಗೊಳಿಸಲು ಇನ್ನೂ 30 ಕೋಟಿ ವೆಚ್ಚವಾಗಲಿದೆ ಎಂಬುದು ತಿಳಿದುಬಂದ ಬಳಿಕ ಅನುದಾನ ಬಿಡುಗಡೆಗೆ ಮೈಸೂರು ಮಹಾನಗರ ಪಾಲಿಕೆ ಹಾಗೂ ಮೃಗಾಲಯದ ನಡುವೆ ಮಾತುಕತೆ ನಡೆಯಿತು.
ಮೈಸೂರಿನಲ್ಲಿರುವ ಈ ಎಲ್ಲಾ ತಾಣಗಳು ಪ್ರೇಮಿಗಳಿಗೆ ಅಚ್ಚುಮೆಚ್ಚು
ಹೆಚ್ಚುವರಿ ಅನುದಾನದ ಕೊರತೆಯಿಂದಾಗಿ ಕಳೆದ ಆರು ವರ್ಷಗಳಿಂದ ಅಕ್ವೇರಿಯಂ ಕಟ್ಟಡ ಪಾಳು ಬಿದ್ದಂತಾಗಿತ್ತು. ಕಳೆದ ವರ್ಷ ಪ್ರವಾಸೋದ್ಯಮ ಸಚಿವ ಸಾ. ರಾ ಮಹೇಶ್ ಹಾಗೂ ಶಾಸಕ ರಾಮದಾಸ್, ಪಾಲಿಕೆ ಮತ್ತು ಮೃಗಾಲಯದ ಹಿರಿಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಕಟ್ಟಡವನ್ನು ಮೃಗಾಲಯಕ್ಕೆ ಹಸ್ತಾಂತರಿಸುವಂತೆ ಸೂಚನೆ ನೀಡಿದ್ದರು, ಅದರಂತೆ ಹಸ್ತಾಂತರಿಸಲಾಗಿತ್ತು. ಮೃಗಾಲಯದ ಅಧಿಕಾರಿಗಳು ಮತ್ಸ್ಯಾಗಾರ ಕಾಮಗಾರಿ ಪೂರ್ಣಗೊಳಿಸುವ ಸಂಬಂಧ ಮಾಹಿತಿಯನ್ನು ಸಹ ಪಡೆದುಕೊಂಡಿದ್ದರು.
ಅರ್ಧಕ್ಕೆ ನಿಂತಿರುವ ಕಟ್ಟಡದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಅಕ್ವೇರಿಯಂ ನಿರ್ಮಿಸಿಕೊಡುವುದಾಗಿ ನ್ಯೂಜಿಲೆಂಡ್ ಸಂಸ್ಥೆಯೊಂದು ಮುಂದೆ ಬಂದಿದೆ. ಈ ಸಂಸ್ಥೆ ಗುಜರಾತ್ ಅಹಮದಾಬಾದ್ ನಲ್ಲಿ 257 ಕೋಟಿ ರೂಪಾಯಿ ವೆಚ್ಚದಲ್ಲಿ 13,000 ಚದರ ಮೀಟರ್ ವಿಕಸನದಲ್ಲಿ ಅತ್ಯಾಕರ್ಷಕವಾಗಿ ಅಕ್ವಾಟಿಕ್ ಲೈಫ್ ಸೈನ್ಸ್ ಪಾರ್ಕ್ ನಿರ್ಮಿಸುತ್ತಿದ್ದು, ಕಾಮಗಾರಿ ಶೇ 75ರಷ್ಟು ಪೂರ್ಣಗೊಂಡಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಸಾರ್ವಜನಿಕರ ವೀಕ್ಷಣೆಗೆ ಅದು ಸಹ ಲಭ್ಯವಿದೆ.
ಮೈಸೂರು ಮೃಗಾಲಯ ಸಂಪರ್ಕಿಸಲು ಅಂಡರ್ ಪಾಸ್ ನಿರ್ಮಾಣ
ಮೈಸೂರಿನ ಮೃಗಾಲಯದ ಅಕ್ವೇರಿಯಂ ಕಾಮಗಾರಿಗೆ ಈ ತಂಡವನ್ನೇ ಬಳಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಮೃಗಾಲಯ ಆಡಳಿತ ಮಂಡಳಿ ಬಂದಿದೆ. ಇದಕ್ಕಾಗಿ ಸರ್ಕಾರಕ್ಕೆ ಅನುಮೋದನೆ ನೀಡಲು ಪ್ರಸ್ತಾವನೆ ಕಳುಹಿಸಲಾಗಿದೆ. ಇದು ಒಪ್ಪಿಗೆಯಾದರೆ ಸಾಂಸ್ಕೃತಿಕ ನಗರಿಯ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಅತ್ಯಾಧುನಿಕ ಅಕ್ವೇರಿಯಂ ಕೂಡ ಸ್ಥಾನ ಪಡೆದುಕೊಳ್ಳಲಿದೆ.