ಮೈಸೂರು ರೇಸ್ ಕೋರ್ಸ್ ಸ್ಥಳಾಂತರಿಸಿ: ಸಾ.ರಾ. ಮಹೇಶ್
ಮೈಸೂರು, ಜೂನ್.14 : ಬೆಂಗಳೂರು ರೇಸ್ ಕೋರ್ಸ್ ನ್ನು ನಗರದ ಹೊರಗಡೆ ಸ್ಥಳಾಂತರಿಸಬೇಕು ಎನ್ನುವುದು ಹಳೆಯ ಕೂಗು. ಈಗ ಇಂತಹುದೇ ಕೂಗು ಮೈಸೂರಿನಲ್ಲೂ ಎದ್ದಿದೆ. ಈ ಕೂಗಿಗೆ ಧ್ವನಿಯಾಗಿರುವವರು ಮತ್ತಾರು ಅಲ್ಲ ನೂತನ ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್.
ನಗರದ ಹೃದಯಭಾಗದಲ್ಲಿರುವ ರೇಸ್ ಕೋರ್ಸ್ ನ ಪರವಾನಗಿಯನ್ನು ನವೀಕರಣಗೊಳಿಸದಿರುವಂತೆ ಕಳೆದ ಕೆಲ ಸಮಯದಿಂದ ಹೋರಾಡುತ್ತಿರುವ ಸಾರಾ ಮಹೇಶ್, ಸಚಿವರಾಗುತ್ತಿದ್ದಂತೆ ಈ ವಿವಾದ ಕೆದಕಿದ್ದಾರೆ.
ರೇಸ್ ಕೋರ್ಸ್ ನಲ್ಲಿ ಕಟ್ಟಡಗಳು ಬೇಡ : ಸಾಹಿತಿಗಳು
ರೇಸ್ ಕೋರ್ಸ್ ನಲ್ಲಿ ಬೊಟಾನಿಕಲ್ ಗಾರ್ಡನ್ ಅಭಿವೃದ್ಧಿ ಪಡಿಸಬೇಕು ಎನ್ನುವುದು ಅವರ ಅಭಿಪ್ರಾಯ. ರೇಸ್ಕೋರ್ಸ್ ನ್ನು ನಗರದಿಂದ 20 ಕಿಲೋ ಮೀಟರ್ ಹೊರಗೆ ಸ್ಥಳಾಂತರಿಸಿ ಎನ್ನುವುದು ಅವರ ಬೇಡಿಕೆ.
ಮೈಸೂರಿನಲ್ಲಿ ಪತ್ರಕರ್ತರಿಗೆ ಈ ವಿಷಯ ತಿಳಿಸಿರುವ ಅವರು, ಈ ವಿಷಯಕ್ಕೆ ಸಂಬಂಧಿಸಿದಂತೆ ರೇಸ್ಕ್ಲಬ್ ಅಧ್ಯಕ್ಷರು-ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಮೂಲಗಳ ಪ್ರಕಾರ, ರೇಸ್ ಕೋರ್ಸ್ ಸ್ಥಳಾಂತರಕ್ಕೆ ಸಂಬಂಧಿಸಿ, ಮುಂದಿನ ವಾರ ಲೋಕೋಪಯೋಗಿ ಇಲಾಖೆ ಹಾಗೂ ಇತರ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ಕರೆಯಲಾಗಿದೆ.