ಮೈಸೂರು ಆಷಾಢ ಮಾಸದಲ್ಲಿ ಚಾಮುಂಡೇಶ್ವರಿ ದರ್ಶನಕ್ಕೆ ಹೊಸ ನಿಯಮ
ಮೈಸೂರು, ಜೂನ್ 22: ಆಷಾಢ ಮಾಸ ಆರಂಭಕ್ಕೆ ಕೆಲವೇ ದಿನಗಳಿವೆ. ನಾಡದೇವತೆ ಮೈಸೂರು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಆಷಾಢ ಮಾಸದ ವಿಶೇಷ ಪೂಜೆಗಳು ಆರಂಭವಾಗಲಿದೆ. ಆಷಾಧ ಮಾಸದ ಪ್ರಯುಕ್ತ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಹೊಸ ನಿಯಮ ತರಲಾಗುತ್ತಿದೆ.
ಜುಲೈ 1 ರಿಂದ ಆಷಾಢ ಮಾಸ ಆರಂಭವಾಗುತ್ತಿದೆ. ಆಷಾಢ ಮಾಸದಲ್ಲಿ ಚಾಮುಂಡಿ ದೇವಿ ದರ್ಶನಕ್ಕೆ ಲಕ್ಷಾಂತರ ಜನ ಆಗಮಿಸುತ್ತಾರೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿರುವ ಕಾರಣ ಮೈಸೂರು ಜಿಲ್ಲಾಡಳಿತ ಹೊಸ ನಿಬಂಧನೆಗಳನ್ನು ಜಾರಿ ಮಾಡಲು ಮುಂದಾಗಿದೆ.
ಚಾಮುಂಡಿ ಬೆಟ್ಟಕ್ಕೆ ಮೋದಿ ಭೇಟಿ, ರಾಜಕೀಯ ಹಿನ್ನಡೆ ಆರಂಭ: ಜ್ಯೋತಿಷಿ
ಇನ್ನು ಈ ಬಾರಿ ಆಷಾಢ ಮಾಸದಲ್ಲಿ ಚಾಮುಂಡಿದೇವಿ ದರ್ಶನ ಮಾಡಲು ಎರಡು ಡೋಸ್ ಕೋವಿಡ್ ಲಸಿಕೆ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಡಳಿತ ಹೇಳಿದೆ. ಒಂದು ವೇಳೆ ಲಸಿಕೆ ಹಾಕಿಸಿಕೊಂಡಿಲ್ಲ ಎಂದರೆ ದರ್ಶನಕ್ಕೆ ಹೋಗುವ 72 ಗಂಟೆ ಒಳಗೆ ಕೋವಿಡ್ ಟೆಸ್ಟ್ ಮಾಡಿಕೊಂಡು, ನೆಗೆಟಿವ್ ಸರ್ಟಿಫಿಕೇಟ್ ತೆಗೆದುಕೊಂಡು ಹೋಗುವುದು ಕಡ್ಡಾಯವಾಗಿದೆ.
ಜೂನ್ 25 ರಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ನೇತೃತ್ವದಲ್ಲಿ ಜಿಲ್ಲಾಡಳಿತ ಸಭೆ ನಡೆಸಲಿದ್ದು, ಇನ್ನೂ ಹಲವು ಹೊಸ ನಿಯಮಗಳನ್ನು ಜಾರಿ ಮಾಡುವ ಸಾಧ್ಯತೆ ಇದೆ.
ಮೈಸೂರಿಗೆ ಪ್ರಧಾನಿ ಆಗಮನ: ಗಮನ ಸೆಳೆದ ಮೋದಿ ಯೋಗಾಸನದ ಮರಳು ಶಿಲ್ಪಗಳು
ಕಳೆದ 2 ವರ್ಷಗಳಿಂದ ಕೊರೊನಾ ಸಾಂಕ್ರಾಮಿಕದ ಕಾರಣದಿಂದ ಭಕ್ತರಿಲ್ಲದೆ ಆಷಾಢ ಮಾಸದ ವಿಶೇಷ ಪೂಜೆಗಳು ನಡೆದಿದ್ದವು. ಕೊರೊನಾ ಸಮಯದಲ್ಲಿ ಆಷಾಢ ಮಾಸದಲ್ಲಿ, ಮುಂಜಾನೆ 5 ಗಂಟೆಗೆ ಪೂಜೆ ಪ್ರಾರಂಭಿಸಿ 8 ಗಂಟೆ ಹೊತ್ತಿಗೆ ಪೂಜಾ ಕಾರ್ಯಗಳು ಮುಕ್ತಾಯಗೊಳ್ಳುತ್ತಿದ್ದವು. 8 ಗಂಟೆ ನಂತರ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತಿತ್ತು. ಎರಡು ವರ್ಷ ಕೊರೊನಾ ಕಾರಣದಿಂದ ಆಷಾಢ ಮಾಸದಲ್ಲಿ ಚಾಮುಂಡಿತಾಯಿ ದರ್ಶನ ಪಡೆಯಲು ಭಕ್ತರಿಗೆ ಸಾಧ್ಯವಾಗಿರಲಿಲ್ಲ. ಕೊರೊನಾ ಸೋಂಕು ಪ್ರಕರಣಗಳು ಕಡಿಮೆಯಾದ ನಂತರ ನಿಯಮಗಳನ್ನು ಸಡಿಲಗೊಳಿಸಲಾಗಿತ್ತು. ಚಾಮುಂಡಿ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಿದ್ದರು.
ಈಗ ಕೊರೊನಾ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ತಿಳಿಸಿದ್ದಾರೆ.
ಪ್ರತಿ ವರ್ಷ ಆಷಾಢ ಮಾಸದಲ್ಲಿ ಚಾಮುಂಡಿ ದೇವಿಗೆ ವಿಶೇಷ ಪೂಜೆ ನಡೆಯುತ್ತದೆ. ವಿಶೇಷ ಅಲಂಕಾರ ಕೂಡ ಮಾಡಲಾಗುತ್ತದೆ. ಅದರಲ್ಲೂ ಆಷಾಢ ಮಾಸದ ಪ್ರತಿ ಶುಕ್ರವಾರ ದೇವಿಯ ದರ್ಶನಕ್ಕೆ ಸಾವಿರಾರು ಜನ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಚಾಮುಂಡಿ ಬೆಟ್ಟದಲ್ಲಿ ಜಾತ್ರೆಯ ವಾತಾವರಣವೇ ನಿರ್ಮಾಣವಾಗುತ್ತದೆ.