ಮೈಸೂರು ಮೇಯರ್ ಚುನಾವಣೆಗೆ ದಿನಾಂಕ ಘೋಷಣೆ
ಮೈಸೂರು, ಆಗಸ್ಟ್ 17: ಮೈಸೂರು ಮೇಯರ್ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಇದೇ ಆಗಸ್ಟ್ 25ರಂದು ಮೈಸೂರು ಮೇಯರ್ ಚುನಾವಣೆ ನಡೆಯಲಿದೆ ಎಂದು ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಮಾಹಿತಿ ಸಿಕ್ಕಿದೆ.
ಸದ್ಯ ಮೇಯರ್ ಹುದ್ದೆಗೇರಲು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಪೋರೇಟರ್ಗಳು ಸಜ್ಜಾಗುತ್ತಿದ್ದು, ಮೈಸೂರಿನ ನೂತನ ಮೇಯರ್ ಚುನಾವಣೆ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಮೈಸೂರು ಮಾಜಿ ಮೇಯರ್ ರುಕ್ಮಿಣಿ ಮಾದೇಗೌಡ ಪಾಲಿಕೆ ಸದಸ್ಯತ್ವ ರದ್ದುಗೊಂಡ ಹಿನ್ನೆಲೆ ತೆರವಾಗಿದ್ದ ಸ್ಥಾನಕ್ಕೆ ನಿಗದಿಯಾಗಿದ್ದ ಚುನಾವಣೆ ದಿನಾಂಕ ಘೋಷಣೆ ಬೆನ್ನಲ್ಲೇ ಚುನಾವಣಾ ಕಣ ರಂಗೇರುತ್ತಿದೆ.
ಮೂರು ಪಕ್ಷದ ನಾಯಕರು ಅಭ್ಯರ್ಥಿಗಳ ತಲಾಶ್ನಲ್ಲಿ ತೊಡಗಿದ್ದಾರೆ. ಆ.25ಕ್ಕೆ ಮೇಯರ್ ಚುನಾವಣೆ ನಡೆಯಲಿದ್ದು, ದಿನೇ ದಿನೇ ಎಲೆಕ್ಷನ್ ಕಣ ಕಾವು ಪಡೆದುಕೊಳ್ಳುತ್ತಿದೆ. ಈ ನಡುವೆ ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ ಚುನಾವಣೆ ಸಂಬಂಧ ಹೇಳಿಕೆ ನೀಡಿದ್ದಾರೆ.
ಇನ್ನೆರಡು ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆಯಾಗುತ್ತದೆ. ಆಗಸ್ಟ್ 20ಕ್ಕೆ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸಲಿದ್ದು, ಈ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಮೈಸೂರಿನಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ನಿಂದ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈಗಾಗಲೇ ಈ ಸಂಬಂಧ ಕೆಪಿಸಿಸಿಗೆ ಪತ್ರ ಬರೆದಿದ್ದೇವೆ. ಈ ಮೊದಲು ಅಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಕಳೆದ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಸೋಲಾಗಿತ್ತು. ಈ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರು ಮಹಾನಗರ ಪಾಲಿಕೆಯಲ್ಲಿ ಮಾಡಿಕೊಂಡಿರುವ ಮೈತ್ರಿ ಚುನಾವಣೆ ಮೇಲೆ ಪರಿಣಾಮ ಬೀರಲ್ಲ. ವಾರ್ಡ್ನಲ್ಲಿ ಜೆಡಿಎಸ್ ನಮಗೆ ಎದುರಾಳಿ ಎಂದು ಹೇಳಿದ್ದಾರೆ.
ಕಾಂಗ್ರೆಸ್ನಿಂದ ರಜನಿ ಅಣ್ಣಯ್ಯ ಸ್ಪರ್ಧೆ!?
ಇನ್ನು ಕಳೆದ ಬಾರಿ ಅಲ್ಪ ಅಂತರದಲ್ಲಿ ಸೋತಿದ್ದ ಕಾಂಗ್ರೆಸ್ ಅಭ್ಯರ್ಥಿ ರಜನಿ ಅಣ್ಣಯ್ಯ ಈ ಬಾರಿಯೂ ಸ್ಪರ್ಧಿಸುವುದು ಪಕ್ಕಾ ಅಂತ ಹೇಳಲಾಗುತ್ತಿದೆ. ಅಧಿಕೃತವಾಗಿ ಬುಧವಾರ ಈ ಬಗ್ಗೆ ಪ್ರಕಟಣೆ ಹೊರಬೀಳಲಿದೆ.
ರುಕ್ಮಿಣಿ ಮಾದೇಗೌಡ ಸ್ಪರ್ಧೆಯಿಂದ ಔಟ್!
ಇನ್ನು ಜೆಡಿಎಸ್ನ ರುಕ್ಮಿಣಿ ಮಾದೇಗೌಡ ಎಲೆಕ್ಷನ್ನಿಂದ ದೂರ ಉಳಿಯುವುದು ಖಚಿತವಾಗಿದೆ. ಸೋಮವಾರ ಜೆಡಿಎಸ್ ನಾಯಕರ ಸಭೆ ನಡೆಯಲಿದ್ದು, ಅಧಿಕೃತ ಅಭ್ಯರ್ಥಿ ಆಯ್ಕೆಯ ಬಗ್ಗೆ ಸಭೆಯಲ್ಲಿ ಅಂತಿಮ ತೀರ್ಮಾನ ಆಗಲಿದೆ. ನಗರ ಜೆಡಿಎಸ್ ಅಧ್ಯಕ್ಷ ಚಲುವೇಗೌಡ ಸೇರಿದಂತೆ ಹಲವು ಮುಖಂಡರ ನೇತೃತ್ವದಲ್ಲಿ ಸಭೆ ಏರ್ಪಟ್ಟಿದೆ.
ಮಾದೇಗೌಡರ ಕುಟುಂಬದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನ ಮಾಡಲಾಗಿದೆ. ಮಾದೇಗೌಡ ನಾದಿನಿ ಅಥವಾ ತಂಗಿಯನ್ನು ಕಣಕ್ಕಿಳಿಸುವ ಸಾಧ್ಯತೆ ದಟ್ಟವಾಗಿದೆ.
ಬೆಳಗಾವಿಯಲ್ಲಿ ಬಿಜೆಪಿ ಸಭೆ
ಇನ್ನು ಆ ಕಡೆ ಬೆಳಗಾವಿ ಮಹಾನಗರ ಪಾಲಿಕೆಗೆ ಸೆಪ್ಟೆಂಬರ್ 3ರಂದು ಮತದಾನ ನಡೆಯಲಿದ್ದು, ಸೋಮವಾರದಿಂದಲೇ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ. 25 ವರ್ಷಗಳ ಬಳಿಕ ಬಿಜೆಪಿ ತನ್ನ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಲು ನಿರ್ಧರಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಮಹಾನಗರ ಪಾಲಿಕೆ ಚುನಾವಣೆಯ ತಯಾರಿ ಕುರಿತು ವಿಶೇಷ ಸಭೆ ನಡೆಯಿತು. 58 ಸದಸ್ಯರ ಪೈಕಿ ಕನಿಷ್ಠ 50 ಬಿಜೆಪಿ ಸದಸ್ಯರು ಗೆಲ್ಲುವ ಗುರಿಯನ್ನು ನೀಡಿದ್ದಾರೆ.
ಪ್ರತಿಯೊಂದು ವಾರ್ಡ್ಗೆ ಒಬ್ಬ ಶಾಸಕರನ್ನು ಉಸ್ತುವಾರಿಯಾಗಿ ನೇಮಿಸಲಿದ್ದು, ಚುನಾವಣೆ ಮುಗಿಯುವವರೆಗೂ ಶಾಸಕರು ಬೇರೆಡೆ ಹೋಗುವಂತಿಲ್ಲ ಎಂದು ನಳಿನ್ ಕುಮಾರ್ ಕಟೀಲ್ ಸೂಚನೆ ನೀಡಿದ್ದಾರೆ.