ದೆಹಲಿ ಫಲಿತಾಂಶದ ಬಗ್ಗೆ ಆತ್ಮಾವಲೋಕನ ಅಗತ್ಯ ಎಂದ ಧ್ರುವನಾರಾಯಣ್
ಮೈಸೂರು, ಫೆಬ್ರವರಿ 13: "ದೆಹಲಿ ವಿಧಾನಸಭಾ ಚುನಾವಣೆಯ ತೀರ್ಪು ಕಾಂಗ್ರೆಸ್ ಪಕ್ಷದ ಸಂಘಟನೆಗೆ ಹಿನ್ನಡೆಯಾಗಿದ್ದು, ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ" ಎಂದಿದ್ದಾರೆ ಮಾಜಿ ಸಂಸದ ಆರ್. ಧ್ರುವನಾರಾಯಣ್.
ನಗರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ದೆಹಲಿಯ ಮತದಾರರು ನೀಡಿರುವ ತೀರ್ಪನ್ನು ಗೌರವಪೂರ್ವಕವಾಗಿ ಸ್ವಾಗತಿಸುತ್ತೇವೆ. ಆದರೆ ದೆಹಲಿಯಲ್ಲಿ ಶೀಲಾ ದೀಕ್ಷಿತ್ ಅವರು ಮುಖ್ಯಮಂತ್ರಿಯಾಗಿದ್ದ 15 ವರ್ಷಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.
ಅಶ್ವತ್ಥ್ ನಾರಾಯಣ್ ಗೆ ಡಿಸಿಎಂ ಆಗುವ ಅರ್ಹತೆ ಏನಿದೆ?: ಮಾಜಿ ಸಂಸದ ಧ್ರುವನಾರಾಯಣ್
ದೆಹಲಿ ಈ ಮಟ್ಟದಲ್ಲಿ ಅಭಿವೃದ್ಧಿಯಾಗಲು ಕಾಂಗ್ರೆಸ್ ಪಕ್ಷ ಹಾಗೂ ಶೀಲಾದೀಕ್ಷಿತ್ ಅವರ ಕೊಡುಗೆ ಸಾಕಷ್ಟಿದೆ. ಆದರೆ ಫಲಿತಾಂಶವನ್ನು ಗಮನಿಸಿದರೆ ಪಕ್ಷದ ಸಂಘಟನೆಯ ದೃಷ್ಟಿಯಿಂದ ದೊಡ್ಡ ಹಿನ್ನಡೆಯಾಗಿದ್ದು, ಫಲಿತಾಂಶದ ಕುರಿತ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ" ಎಂದು ಹೇಳಿದರು.
ರಾಜ್ಯಕ್ಕೆ 450 ಕೋಟಿ ರು. ಬರ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ
"ದೆಹಲಿ ಚುನಾವಣೆಯಲ್ಲಿ ಪ್ರಧಾನಮಂತ್ರಿ ಸೇರಿದಂತೆ ಬಿಜೆಪಿಯ ಅನೇಕ ನಾಯಕರು ಬಿರುಸಿನ ಪ್ರಚಾರ ನಡೆಸಿದರೂ, ದೆಹಲಿ ಜನತೆ ಅವರಿಗೆ ತಕ್ಕಪಾಠ ಕಲಿಸಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಬಿಜೆಪಿಯ ನಾಯಕರು ಮಾಡಿದ ಭಾಷಾ ಪ್ರಯೋಗ, ಹೇಳಿಕೆ ಎಲ್ಲವೂ ಕೇವಲ ಸಿಎಎ, ಅಯೋಧ್ಯಾ ವಿಷಯಕ್ಕೆ ಸೀಮಿತವಾಗಿತ್ತೇ ಹೊರತು, ದೆಹಲಿ ಅಭಿವೃದ್ಧಿ ಕುರಿತು ಯಾರೊಬ್ಬರೂ ಮಾತನಾಡಲಿಲ್ಲ. ಹೀಗಾಗಿ ದೆಹಲಿ ಜನತೆ ಬಿಜೆಪಿ ನಾಯಕರ ಮಾತುಗಳನ್ನು ಪರಿಗಣಿಸದೆ ಅಭಿವೃದ್ಧಿ ಪರವಾಗಿ ಪ್ರಚಾರ ಮಾಡಿದ ಕೇಜ್ರಿವಾಲ್ ಅವರಿಗೆ ಮತ ನೀಡಿದ್ದು, ಇದಕ್ಕಾಗಿ ದೆಹಲಿ ಜನತೆಯನ್ನು ಅಭಿನಂದಿಸುತ್ತೇನೆ" ಎಂದರು.