ಕನ್ನಡದ ಅಸ್ಮಿತೆಯುಳಿಸಲು ಮೈಸೂರಿನಲ್ಲಿ ನಾವಿಕೋತ್ಸವ -2018
ಮೈಸೂರು, ಆಗಸ್ಟ್ 4 : ನಮ್ಮ ಕನ್ನಡ ಭಾಷೆ ಮತ್ತು ಸಂಸ್ಕೃತಿಗಳ ಬಗ್ಗೆ ಅಭಿಮಾನ ಹೊತ್ತ ಅನೇಕರು ದೂರದ ಅಮೆರಿಕದಿಂದ ಇಂದು ಮೈಸೂರಿಗೆ ಆಗಮಿಸಿದ್ದರು. ಇವರೊಂದಿಗೆ ಸ್ಥಳೀಯ ಕನ್ನಡಿಗರೂ ಬೆರೆತು ಪರಸ್ಪರ ಸ್ನೇಹ-ಪ್ರೀತಿಯಿಂದ ಹಬ್ಬವನ್ನು ಆಚರಿಸಿದರು.
ನಾರ್ತ್ ಅಮೆರಿಕ ವಿಶ್ವ ಕನ್ನಡ ಆಗರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಅನಿವಾಸಿ ಭಾರತೀಯ ಸಮಿತಿಗಳ ಸಹಯೋಗದೊಂದಿಗೆ ಕಲಾ ಮಂದಿರದಲ್ಲಿ ಆಯೋಜಿಸಿದ್ದ 'ನಾವಿಕೋತ್ಸವ 2018' ಕಾರ್ಯಕ್ರಮದಲ್ಲಿ ಈ ಚಿತ್ರಣವಿದು. ಎರಡು ದಿನಗಳ ಈ 'ನಾವಿಕೋತ್ಸವ'ಕ್ಕೆ ನಿತ್ಯೋತ್ಸವ ಕವಿ ಡಾ. ನಿಸಾರ್ ಅಹ್ಮದ್ ಶನಿವಾರ ಚಾಲನೆ ನೀಡಿದರು.
ಇದೇ ವೇಳೆ ಕನ್ನಡ ಕಲಿ ಎಂಬ ಪುಸ್ತಕವನ್ನು ವಿದೇಶಿ ಮಕ್ಕಳಿಗೆ ಕಲಿಕೆಯನ್ನು ಸುಲಭವಾಗಿಸುವ ನಿಟ್ಟಿನಲ್ಲಿ ಬಿಡುಗಡೆಗೊಳಿಸಲಾಯಿತು. ಇದರೊಟ್ಟಿಗೆ ಹಲವರಿಗೆ ಅನುಕೂಲವಾಗುವಂತೆ ಕ-ನಾದ ವೆಬ್ಸೈಟ್ ಅನ್ನು ಲೋಕಾರ್ಪಣೆಗೊಳಿಸಲಾಯಿತು.
ಸಚಿವ ಜಿ ಟಿ ದೇವೇಗೌಡ ಅವರು, ಕನ್ನಡವನ್ನು ಕನ್ನಡಿಗರೇ ಮರೆಯುತ್ತಿರುವ ಇಂತಹ ಕಾಲಘಟ್ಟದಲ್ಲಿ ವಿದೇಶಿಯರ ಕನ್ನಡ ಪ್ರೀತಿ ಶ್ಲಾಘನೀಯ. ಇದನ್ನು ಮುಂದಿನ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ಪ್ರಚಾರ ಮಾಡಿ ಹೆಸರಾಂತ ಕಾರ್ಯಕ್ರಮಗಳ ಪಟ್ಟಿಯಲ್ಲಿ ಸೇರಿಸಬೇಕು. ವಿದೇಶಿ ಕನ್ನಡಿಗರು ಕನ್ನಡವನ್ನು ತಮ್ಮ ಮಕ್ಕಳಿಗೆ ಅತೀ ಸುಲಭವಾಗಿ ಸರಳೀಕರಿಸಿ ಹೇಳಿಕೊಡುತ್ತಿದ್ದಾರೆ. ಇದರಿಂದಾಗಿಯೇ ಕನ್ನಡದ ಉಳಿವಿನ ಅವರ ಪಾತ್ರ ಎತ್ತಿ ತೋರಿಸುತ್ತಿದೆ ಎಂದು ಶ್ಲಾಘಿಸಿದರು.
ನಟ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಕನ್ನಡದ ಅಸ್ಮಿತೆ ಆಳದಲ್ಲಿ ಅರಿಯಬೇಕಾದರೆ ಅದರ ಬಳಕೆ ಹೆಚ್ಚಾಗಬೇಕು. ಇಂಗ್ಲಿಷ್ ಗೆ ಮಾರು ಹೋಗದೇ ಕನ್ನಡವನ್ನು ನಮ್ಮ ಮಾತೃಭಾಷೆಯೆಂದು ಅರಿತು, ಕಲಿತು ನಡೆಯಬೇಕು ಎಂದರು. ಇದಾದ ಬಳಿಕ ಪ್ರೊ. ಕೃಷ್ಣೇಗೌಡರ ಹಾಸ್ಯ ಸಂಜೆ ಕಾರ್ಯಕ್ರಮ ಸಭಿಕರನ್ನು ನಗೆಗಡಲಲ್ಲಿ ತೇಲಿಸಿತು. ಮಂಡ್ಯ ರಮೇಶ್ ರ ನಟನ ತಂಡದ ವತಿಯಿಂದ 'ಕೆಂಪು ಕಣಗಿಲೆ' ನಾಟಕ ಕೂಡ ಪ್ರೇಕ್ಷಕರನ್ನು ರಂಜಿಸಿತು.
ವೇದಿಕೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್. ಜಿ. ಸಿದ್ದರಾಮಯ್ಯ, ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮದ್, ಸಮ್ಮೇಳನ ಅಧ್ಯಕ್ಷ ಸುರೇಶ್ ರಾಮಚಂದ್ರ, ಡಾ.ಕೆ.ಮುರಳಿಧರ, ಲಕ್ಷ್ಮೀ ರಾಜ್ ಮಾರ್, ಡಾ.ಶರಚ್ಚಂದ್ರ ಸ್ವಾಮೀಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.