ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದ ಮಾಜಿ ಸಿಎಂ ಬಿಎಸ್‌ವೈ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 17: "ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಆಡಳಿತ ನೀಡಲಿದ್ದಾರೆ," ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ಶುಕ್ರವಾರ ಮೈಸೂರಿಗೆ ಆಗಮಿಸಿದ್ದ ವೇಳೆ ನಗರದ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದಾರೆ ಅನ್ನೋದು ನನ್ನ ಅಭಿಪ್ರಾಯ ಮಾತ್ರವಲ್ಲ, ರಾಜ್ಯದ ಜನರ ಅಭಿಪ್ರಾಯವೂ ಇದೆ ಆಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಆಡಳಿತ ನೀಡಲಿದ್ದಾರೆ," ಎಂದು ಬಿಎಸ್‌ವೈ ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಹಾನಗಲ್ ಹಾಗೂ ಸಿಂದಗಿ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿ.ವೈ. ವಿಜಯೇಂದ್ರ ಸ್ಪರ್ಧೆ ಮಾಡುವ ಬಗ್ಗೆ ಮಾತನಾಡಿದ ಅವರು, "ಸದ್ಯಕ್ಕೆ ವಿಜಯೇಂದ್ರ ಯಾವುದೇ ಉಪ ಚುನಾವಣೆಯಲ್ಲೂ ಸ್ಪರ್ಧೆ ಮಾಡುವುದಿಲ್ಲ. ಅವರು ಯಾವ ಕ್ಷೇತ್ರದಲ್ಲಿ ಮುಂದೆ ನಿಲ್ಲುತ್ತಾರೆ ಅನ್ನೋದು ನಿರ್ಧಾರವಾಗಿಲ್ಲ. ಸದ್ಯ ಅವರು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ನಾನು ಮತ್ತು ರಾಜ್ಯಾಧ್ಯಕ್ಷರು ಸೇರಿ ರಾಜ್ಯ ಪ್ರವಾಸ ಮಾಡುತ್ತೇವೆ. ಈ ಬಗ್ಗೆ ಅಧಿವೇಶನ ಮುಗಿದ 15 ದಿನಗಳ ನಂತರ ರೂಪುರೇಷೆ ರಚಿಸುವುದಾಗಿ," ಹೇಳಿದರು.

 ಮುಂದುವರೆದ ದೇಶವನ್ನಾಗಿ ಮಾಡುವ ಶಕ್ತಿ ಅವರಲ್ಲಿದೆ

ಮುಂದುವರೆದ ದೇಶವನ್ನಾಗಿ ಮಾಡುವ ಶಕ್ತಿ ಅವರಲ್ಲಿದೆ

ರಾಜ್ಯದಲ್ಲಿ ನಡೆದ ಹಿಂದೂ ದೇವಸ್ಥಾನಗಳ ತೆರವಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಯಡಿಯೂರಪ್ಪ, "ದೇವಾಲಯಗಳ ತೆರವು ಮಾಡಿದ್ದು ಸರಿಯಲ್ಲ. ಈ ಬಗ್ಗೆ ಸಿಎಂ ಬೊಮ್ಮಾಯಿ ಈಗಾಗಲೇ ಸೂಚನೆ‌ ನೀಡಿದ್ದಾರೆ. ಆದರೆ ಈ ವಿಚಾರವಾಗಿ ಮೊದಲೇ ಚರ್ಚೆ ಮಾಡಬೇಕಿತ್ತು. ಯಾವುದೇ ಕಾರಣಕ್ಕೂ ದೇಗುಲ ತೆರವು ಮಾಡದಂತೆ ಆಗ್ರಹ ಮಾಡುತ್ತೇನೆ," ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಯುಗ ಉತ್ಸವ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು, "ದೇಶದ ಉದ್ದಗಲಕ್ಕೂ ನರೇಂದ್ರ ಮೋದಿ ಯುಗ ಉತ್ಸವ ನಡೆಯುತ್ತಿದೆ. ನಾನು, ಶಾಸಕ ರಾಮದಾಸ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದೇನೆ. ಮೋದಿಯವರ ದೂರ ದೃಷ್ಟಿಯಿಂದ ಇಡೀ ಜಗತ್ತೆ ಅಚ್ಚರಿಯಾಗುವ ರೀತಿ ದೇಶ ಮುನ್ನಡೆಯತ್ತ ಸಾಗುತ್ತಿದೆ. ಜಗತ್ತಿನಲ್ಲಿ ಅವರ ಆಡಳಿತ ಅಚ್ಚಳಿಯದಂತೆ ದೊಡ್ಡ ಸಾಧನೆ ಮಾಡಿ ತೋರಿಸಿದ್ದಾರೆ. ಮುಂದುವರೆದ ದೇಶವನ್ನಾಗಿ ಮಾಡುವ ಶಕ್ತಿ ಅವರಲ್ಲಿ ಇದೆ. ಆ ರೀತಿ ಆಗಲಿ ಎಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದ ಅವರು, ಮೋದಿ ಇನ್ನೊಮ್ಮೆ ಈ ದೇಶದ ಪ್ರಧಾನಿಯಾಗುವುದು ನಮ್ಮ ಅಪೇಕ್ಷೆ," ಎಂದರು.

 ನಂಜನಗೂಡು ತಹಶೀಲ್ದಾರ ಭೇಟಿ

ನಂಜನಗೂಡು ತಹಶೀಲ್ದಾರ ಭೇಟಿ

ಇದೇ ಸಂದರ್ಭದಲ್ಲಿ ಸುತ್ತೂರು ಮಠಕ್ಕೆ ಆಗಮಿಸಿದ್ದ ನಂಜನಗೂಡು ತಹಶೀಲ್ದಾರ ಮೋಹನ ಕುಮಾರಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಸುತ್ತೂರು ಶ್ರೀಗಳನ್ನು ಭೇಟಿ ಮಾಡಿದರು. ಸದ್ಯ ಹಿಂದೂ ದೇವಾಲಯ ತೆರವುಗೊಳಿಸಿದ ನಂತರ ವಿವಾದದ ಕೇಂದ್ರ ಬಿಂದುವಾಗಿರುವ ತಹಶೀಲ್ದಾರ ಮೋಹನ ಕುಮಾರಿ, ಮಹದೇವಮ್ಮ ದೇವಸ್ಥಾನ ನೆಲಸಮಗೊಳಿಸಿದ ವಿಚಾರ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

 ಮೋದಿ ಯುಗ ಉತ್ಸವ ಆಚರಣೆ

ಮೋದಿ ಯುಗ ಉತ್ಸವ ಆಚರಣೆ

ಇನ್ನೂ ಮೈಸೂರಿಗೆ ಭೇಟಿ ನೀಡಿದ ಯಡಿಯೂರಪ್ಪ ಮೈಸೂರಿನ ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ನೇತೃತ್ವದಲ್ಲಿ ‌ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ನಡೆದ ಮೋದಿ ಯುಗ್ ಉತ್ಸವದಲ್ಲಿ ಭಾಗಿಯಾಗಿದ್ದರು. ಮೈಸೂರಿನ ನಗರದ ವಿದ್ಯಾರಣ್ಯಪುರಂನಲ್ಲಿರುವ ರಾಮದಾಸ್ ಕಚೇರಿ ಬಳಿ ನಡೆದ ಸಮಾರಂಭಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಚಾಲನೆ ನೀಡಿದರು. ಮೋದಿ ಹುಟ್ಟುಹಬ್ಬದ ಅಂಗವಾಗಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆ ಅನುಷ್ಠಾನಕ್ಕೆ ಚಾಲನೆ ನೀಡಿದರಲ್ಲದೆ, ಕಾರ್ಯಕ್ರಮಕ್ಕೂ ಮುನ್ನ ಗೋಪೂಜೆ ನೆರವೇರಿಸಿದರು.

 ಮಾಜಿಯಾದರೂ ಎಲ್ಲೆಲ್ಲೂ ಜನವೋ ಜನ

ಮಾಜಿಯಾದರೂ ಎಲ್ಲೆಲ್ಲೂ ಜನವೋ ಜನ

ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದರೂ ಮೈಸೂರಿನಲ್ಲಿ ಬಿಎಸ್‌ವೈ ಹವಾ ಜೋರಾಗಿತ್ತು.‌ ನಗರದಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಯಡಿಯೂರಪ್ಪ ಭಾಗವಹಿಸಿದ್ದ ವೇಳೆ ಯಡಿಯೂರಪ್ಪ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದು ಕಂಡು ಬಂತು.

ಇನ್ನು ಮಾಜಿ ಸಿಎಂ ಯಡಿಯೂರಪ್ಪ ಮೈಸೂರಿಗೆ ಆಗಮಿಸಿದ ಹಿನ್ನೆಲೆ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಕೊರೊನಾ ಮಾರ್ಗಸೂಚಿಗಳನ್ನು ಗಾಳಿಗೆ ತೂರಿದರು. ಮೈಸೂರು ಹಾಗೂ ರಾಜ್ಯದಲ್ಲಿ ಕೊರೊನಾ‌ ಪಾಸಿಟಿವ್ ಪ್ರಕರಣಗಳು ಏರಿಕೆಯತ್ತ ಸಾಗಿದ್ದರೂ, ತಲೆ‌ಕೆಡಿಸಿಕೊಳ್ಳದ ಬಿಜೆಪಿ ಕಾರ್ಯಕರ್ತರು, ಸಾಮಾಜಿಕ ಅಂತರ‌ ಕಾಯ್ದುಕೊಳ್ಳದೇ ಕಿಕ್ಕಿರಿದು ಜಮಾಯಿಸಿದ್ದರು.‌ ಗುಂಪುಗುಂಪಾಗಿ ಸೇರುವ ಮೂಲಕ‌ ಕೊರೊನಾ ನಿಯಮಗಳನ್ನು ಧಿಕ್ಕರಿಸಿದರು.

English summary
Good governance would be given by Chief Minister Basavaraj Bommai in the next few days, BS Yediyurappa Says in mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X