ಮನ ಕೀ ಬಾತ್; ಮೈಸೂರು ವಿದ್ಯಾರ್ಥಿ ಸಾಧನೆ ಶ್ಲಾಘಿಸಿದ ಮೋದಿ
ಮೈಸೂರು, ಮೇ 30: ಉತ್ತರಾಖಂಡದಿಂದ ಮೈಸೂರಿಗೆ ಬಂದು ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 514 ಅಂಕ ಪಡೆದು ತೇರ್ಗಡೆಯಾದ ದೃಷ್ಟಿವಿಶೇಷ ಚೇತನೆ ಕಲ್ಪನಾ ಸಾಧನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್ನಲ್ಲಿ ಶ್ಲಾಘಿಸಿದ್ದಾರೆ.
ಭಾನುವಾರ ನರೇಂದ್ರ ಮೋದಿ ಮನ್ ಕೀ ಬಾತ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು, "ವೈವಿಧ್ಯತೆಯು ದೇಶವನ್ನು ಹೇಗೆ ಬಲಪಡಿಸುತ್ತದೆ ಎಂಬುದಕ್ಕೆ ಕಲ್ಪನಾ ಒಂದು ಒಳ್ಳೆಯ ಉದಾಹರಣೆ. ದೇಶವು ಅನೇಕ ಭಾಷೆಗಳು, ಲಿಪಿಗಳು ಮತ್ತು ಉಪಭಾಷೆಗಳ ಶ್ರೀಮಂತ ನಿಧಿಯಾಗಿದೆ. ವಿವಿಧ ಪ್ರದೇಶಗಳಲ್ಲಿನ ವೈವಿಧ್ಯಮಯ ಉಡುಪು, ಪಾಕ ಪದ್ಧತಿ ಮತ್ತು ಸಂಸ್ಕೃತಿ ನಮ್ಮ ವಿಶಿಷ್ಟ ಲಕ್ಷಣವಾಗಿದೆ" ಎಂದರು.
ಹಿಂದಿ, ಗರ್ ವಾಲಿ ಭಾಷೆ ಮಾತ್ರ ಗೊತ್ತಿದ್ದ ಕಲ್ಪನಾ ಮೈಸೂರಿಗೆ ಬಂದು ಮೂರು ತಿಂಗಳಲ್ಲಿ ಕನ್ನಡ ಕಲಿತಿದ್ದರು. ಜೊತೆಗೆ ಕನ್ನಡ ಮಾಧ್ಯಮದಲ್ಲೇ ಪರೀಕ್ಷೆ ಬರೆದು 514 ಅಂಕಗಳಿಸಿ ಸುದ್ದಿಯಾಗಿದ್ದರು. ಇವರಿಗೆ ಮೈಸೂರಿನ ಇಶಾ ಫೌಂಡೇಶನ್ನ ಸ್ವಯಂ ಸೇವಕ ಪ್ರೊ. ತಾರಾಮೂರ್ತಿ ನೆರವು ನೀಡಿದ್ದರು.
ಕಲ್ಪನಾ ಸಾಧನೆಗೆ ನೆರವು; ಉತ್ತರಾಖಂಡದ ಜೋಶಿಮಠದವರಾದ ಕಲ್ಪನಾ ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡು ಟಿಬಿಯಿಂದ ಬಳಲುತ್ತಿದ್ದರು. ಮೂರನೇ ತರಗತಿಯಲ್ಲಿದ್ದಾಗ ದೃಷ್ಟಿಯೂ ಕಳೆದುಕೊಂಡಿದ್ದಳು. ಆದರೆ, ಅದು ಸಾಧನೆಗೆ ಅಡ್ಡಿಯಾಗಲಿಲ್ಲ.
ಇತ್ತೀಚೆಗಷ್ಟೇ ಮೈಸೂರಿಗೆ ತೆರಳಿ ಕನ್ನಡ ಕಲಿಯಲು ಸಹಕರಿಸಿದ ಪ್ರೊ. ತಾರಾಮೂರ್ತಿ ಅವರ ನೆರವಿನಿಂದ ಕೇವಲ ಮೂರೇ ತಿಂಗಳಲ್ಲಿ ಭಾಷೆ ಕಲಿತು ಕನ್ನಡದಲ್ಲಿ 92 ಅಂಕ ಗಳಿಸಿದ್ದಾರೆ ಎಂಬುದನ್ನು ವಿವರಿಸಿದರು.
ಕಲ್ಪನಾ ಸಾಧನೆಗೆ ನೆರವು ನೀಡಿದ ಪ್ರೊ.ತಾರಾಮೂರ್ತಿ ಮಾತನಾಡಿ, "ಯಾರನ್ನೂ ಅವಲಂಬಿಸದೆ ದೊಡ್ಡ ಸಾಧನೆ ಮಾಡಿದ ಅನೇಕರ ಕಥೆಗಳನ್ನು ಹೇಳುವ ಮೂಲಕ ಮನ್ ಕಿ ಬಾತ್ನಲ್ಲಿ ಪ್ರಧಾನಿ ಆತ್ಮ ನಿರ್ಭರ ಪರಿಕಲ್ಪನೆಯನ್ನು ಸಾಕಾರಗೊಳಿಸುತ್ತಿದ್ದಾರೆ. ಕಲ್ಪನಾ ಅವರ ಕಥೆ ಮನ್ ಕೀ ಬಾತ್ ಮೂಲಕ ಮತ್ತಷ್ಟು ಜನರನ್ನು ತಲುಪಿದೆ'' ಎಂದು ಸಂತಸ ವ್ಯಕ್ತಪಡಿಸಿದರು.
ಕಸ ಬಿಸಾಡುವ ಪ್ರವೃತ್ತಿ: ಚಾರ್ ಧಾಮ್ ಯಾತ್ರೆಯ ವೇಳೆ ಭಕ್ತಾದಿಗಳು ತಾವು ಸಾಗುವ ಮಾರ್ಗದುದ್ದಕ್ಕೂ ಕಸ ಬಿಸಾಡುವ ಪ್ರವೃತ್ತಿ ಇದೆ. ಈ ಕುರಿತಾಗಿ ತಮ್ಮ ಮನ್ ಕೀ ಬಾತ್ನಲ್ಲಿ ಕಳವಳ ವ್ಯಕ್ತಪಡಿಸಿದ್ದ ಮೋದಿ, ಕೇದಾರನಾಥ ಸೇರಿದಂತೆ ಯಾವುದೇ ಪುಣ್ಯಕ್ಷೇತ್ರದಲ್ಲಿ ಕಸ ಹಾಕಿ ಪರಿಸರವನ್ನು ಹಾಳು ಮಾಡಬೇಡಿ ಎಂದು ಮನವಿ ಮಾಡಿದ್ದರು.
ನರೇಂದ್ರ ಮೋದಿ ಮನ್ ಕೀ ಬಾತ್ ಕಾರ್ಯಕ್ರಮವು ರೇಡಿಯೋದಲ್ಲಿ ಪ್ರಸಾರವಾಗುತ್ತದೆ. ಪ್ರತಿ ತಿಂಗಳ ಕೊನೆಯ ಭಾನುವಾರದಂದು ಆಲ್ ಇಂಡಿಯಾ ರೇಡಿಯೋದಲ್ಲಿ ಈ ಕಾರ್ಯಕ್ರಮ ಪ್ರಸಾರ ಆಗುತ್ತದೆ. ಅಕ್ಟೋಬರ್ 3, 2014ರಂದು ಮನ್ ಕೀ ಬಾತ್ನ ಮೊದಲ ಎಪಿಸೋಡ್ ಪ್ರಸಾರ ಆಗಿತ್ತು.