ಶಬರಿಮಲೈ ಅರ್ಚಕರಿಂದ ಅಯ್ಯಪ್ಪಸ್ವಾಮಿಯ 19ನೇ ಬ್ರಹ್ಮೋತ್ಸವ ಧ್ವಜಾರೋಹಣ
ಮೈಸೂರು, ಡಿಸೆಂಬರ್.18 : ದಕ್ಷಿಣಕಾಶಿ ನಂಜನಗೂಡಿನ ಕಪಿಲಾ ನದಿ ತಟದಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ 19ನೇ ಬ್ರಹ್ಮೋತ್ಸವದ ಧ್ವಜಾರೋಹಣವನ್ನು ಶನಿವಾರ ಶಬರಿಮಲೈ ಪ್ರಧಾನ ಅರ್ಚಕ ಶ್ರೀಕಂಠ ರಾಜೀವ ತಂತ್ರಿಗಳು ನೆರೆವೇರಿಸಿದರು.
ಬೆಳಗ್ಗಿನಿಂದಲೇ ಶ್ರೀಅಯ್ಯಪ್ಪ ದೇವಸ್ಥಾನದಲ್ಲಿ ಸಕಲ ವಿಧದ ಅಭಿಷೇಕಗಳು, ಪುಷ್ಪಾಲಂಕರ ಮುಂತಾದವುಗಳು ನಡೆದು ಪುನರ್ವಸು ನಕ್ಷತ್ರದ ಸಮಯ 9.30ರಿಂದ 9.50 ಕಾಲದಲ್ಲಿ ಸಕಲ ಧಾರ್ಮಿಕ ವಿಧಿವಿಧಾನಗಳ ಮೂಲಕ ಧ್ವಜಾರೋಹಣ ನೆರೆವೇರಿಸಲಾಯಿತು. [ಶಬರಿಮಲೈ ದರ್ಶನಕ್ಕೆ ಮಹಿಳೆಯರಿಗೆ ಕೇರಳ ಸರ್ಕಾರ ಅನುಮತಿ]
ಇದೇ ಸಂದರ್ಭದಲ್ಲಿ ಶ್ರೀಅಯ್ಯಪ್ಪ ಸ್ವಾಮಿಯ ಭಕ್ತರಿಂದ ಅಯ್ಯಪ್ಪಸ್ವಾಮಿ ಭಜನೆ, ಮಂತ್ರಘೋಷಣೆ, ಮತ್ತು ಪುಷ್ಪಾರ್ಚನೆಗಳು ನಡೆದವು. ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ಗುರುಗಳಾದ ಪಿ.ದೇವರಾಜು ಹಾಗೂ ಕೀರ್ತಿಶೇಷ ಶ್ರೀಕಾಂತರಾಜು ಪುತ್ರ ಮೋಹನ ಧ್ವಜಾರೋಹಣದಲ್ಲಿ ಭಾಗಿಯಾಗಿ, ಎಲ್ಲರಿಗೂ ಶ್ರೀಗಂಧದ ತಿಲಕವಿಟ್ಟು ಪ್ರಸಾದ ವಿನಿಯೋಗ ಮಾಡಿದರು.
ಶ್ರೀಕ್ಷೇತ್ರ ಶಬರಿಮಲೈ ದೇವಸ್ಥಾನದ ವಾದ್ಯಗೋಷ್ಠಿಯ ಕಲಾವಿದರು ಧ್ವಜಾರೋಹಣ ಸಮಯದಲ್ಲಿ ವಾದ್ಯಗೋಷ್ಠಿ ನಡೆಸಿಕೊಟ್ಟರು. [ಶಬರಿಮಲೆ ಯಾತ್ರೆ ಈ ಬಾರಿ ಭಾರೀ ದುಬಾರಿ: ಸ್ವಾಮಿ ಶರಣಂ!]
ಕಾರ್ಯಕ್ರಮದಲ್ಲಿ ಅಯ್ಯಪ್ಪದೇವಸ್ಥಾನದ ಗುರುಸ್ವಾಮಿ ಪಿ.ದೇವರಾಜು, ಮೋಹನಕುಮಾರ್, ಅರ್ಚಕ ಶಿವಕುಮಾರ್, ನಾರಾಯಣ ಸ್ವಾಮಿ, ಜಗದೀಶ್, ವಿಜಯ, ನಾರಾಯಣ, ಭಕ್ತವತ್ಸಲ, ವೆಂಕಟೇಶ್, ಸೇರಿದಂತೆ ನೂರಾರು ಅಯ್ಯಪ್ಪಸ್ವಾಮಿ ಭಕ್ತರು ಕರ್ಪೂರ ಬೆಳಗಿ ಸೇವೆ ಸಲ್ಲಿಸಿದರು