ಮೈಸೂರು: ಉಳ್ಳವರಿಗೆ ನಂಜುಂಡೇಶ್ವರನ ದರ್ಶನ, ಇಲ್ಲದವರಿಗೆ ಭ್ರಮನಿರಸನ
ಮೈಸೂರು, ಜೂನ್ 7: ಶ್ರೀಮಂತ ಭಕ್ತರಿಗೆ ಮಾತ್ರ ನಂಜನಗೂಡು ನಂಜುಂಡೇಶ್ವರನ ದರ್ಶನಕ್ಕೆ ವಿಶೇಷ ಅವಕಾಶ ನೀಡುತ್ತಿದ್ದು, ಬಡ ಹಾಗೂ ಮಧ್ಯಮ ವರ್ಗದವರಿಗೆ ದೇವಾಲಯದಲ್ಲಿ ತಾರತಮ್ಯ ಮಾಡಲಾಗುತ್ತಿದೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.
ಹಣವಿದ್ದವರಿಗೆ ನಂಜುಂಡೇಶ್ವರನ ದರ್ಶನ ಭಾಗ್ಯವಿದ್ದು, ಇಲ್ಲದವರಿಗೆ ಕಾನೂನಿನ ನೆಪವೊಡ್ಡಿ ತಡೆಯಲಾಗುತ್ತಿದೆ. ದೇವಾಲಯದಲ್ಲಿ ಅರ್ಚಕರೂ ರಾಜಕೀಯ ಮಾಡುತ್ತಿರುವ ಆರೋಪ ಕೇಳಿಬಂದಿದೆ.
ಜೂನ್ 8ಕ್ಕೆ ತೆರೆಯಲು ಸಜ್ಜಾಗುತ್ತಿದೆ ಮೈಸೂರು ಮೃಗಾಲಯ
ಲಾಕ್ ಡೌನ್ ಹಿನ್ನೆಲೆಯಲ್ಲಿ ದೇವಸ್ಥಾನ ಪ್ರವೇಶವನ್ನು ನಿರ್ಬಂಧಿಸಿದ್ದು, ಆದರೆ ಅರ್ಚಕರ ಜೇಬಿಗೆ ದುಡ್ಡು ಇಳಿದರೆ ದೇವಸ್ಥಾನ ಪ್ರವೇಶ ಹಾಗೂ ನಂಜುಂಡೇಶ್ವರನ ದರ್ಶನ ಮಾಡಬಹುದಾಗಿದೆ.
ಜೂನ್ 8 ರ ಸೋಮವಾರದಿಂದ ದೇವಾಲಯಗಳು ರೀ ಓಪನ್ ಆಗಲಿವೆ. ಆದರೆ ನಂಜನಗೂಡು ದೇವಾಲಯ ಮಾತ್ರ ಅದಕ್ಕೂ ಮೊದಲೇ ತೆರೆದಿವೆ. ಕದ್ದುಮುಚ್ಚಿ ಶ್ರೀಮಂತ ಭಕ್ತರನ್ನು ದೇವಸ್ಥಾನ ಅರ್ಚಕರು ಕರೆದೊಯ್ಯುತ್ತಿದ್ದಾರೆ.
ಅರ್ಚಕರ ತಾರತಮ್ಯ ರಾಜಾರೋಷವಾಗಿ ನಡೆದರೂ ಆಡಳಿತ ಮಂಡಳಿ ಸೈಲೆಂಟ್ ಆಗಿದ್ದು, ಅಧಿಕಾರಿಗಳು ಜಾಣಕುರುಡರಂತೆ ವರ್ತಿಸುತ್ತಿದ್ದಾರೆ. ಇದು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕೋಟಿ ಗಳಿಕೆಯ ಕ್ಲಬ್ ಸೇರಿದ ನಂಜನಗೂಡು ನಂಜುಂಡ!
ಅರ್ಚಕರ ತಾರತಮ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಸಾರ್ವಜನಿಕರು ತಿರುಗಿ ಬೀಳುವ ಮುನ್ನ ಮುಜರಾಯಿ ಇಲಾಖೆ ಎಚ್ಚೆತ್ತುಕೊಳ್ಳುವುದೇ ಎಂದು ಕಾದು ನೋಡಬೇಕು.