13ಕ್ಕೆ ಸಿದ್ದರಾಮಯ್ಯನವರ ಗರ್ವಭಂಗ : ಶ್ರೀನಿವಾಸ ಪ್ರಸಾದ್
ಮೈಸೂರು, ಏಪ್ರಿಲ್ 7 : "ನನ್ನ ರಾಜಕೀಯ ಜೀವನದಲ್ಲಿ ಯಾವತ್ತೂ ಅಧಿಕಾರಕ್ಕಾಗಿ ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಬೇಡಿಕೆಯನ್ನು ಇಟ್ಟಿಲ್ಲ. ಈ ಚುನಾವಣೆ ನನ್ನಿಂದ ಅಲ್ಲ, ಸಿದ್ದರಾಮಯ್ಯನವರ ದುರಹಂಕಾರದಿಂದ ನಡೆಯುತ್ತಿದೆ" ಎಂದು ನಂಜನಗೂಡು ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಕ್ ಪ್ರಹಾರ ನಡೆಸಿದರು.
ಮೈಸೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಮಾತನಾಡಿದ ಅವರು ಸಂಪುಟದಿಂದ ತೆಗೆದು ಹಾಕಿದಕ್ಕೆ ಮುಖ್ಯಮಂತ್ರಿಗಳು ಕಾರಣ ನೀಡಿಲ್ಲ. ನನ್ನ ಆಡಳಿತ ಅವಧಿಯಲ್ಲಿ ಉತ್ತಮವಾದ ಕೆಲಸ ಮಾಡಿದ್ದೇನೆ. ಆ ಬಗ್ಗೆ ಚರ್ಚೆಗೆ ಸಿದ್ದನಿದ್ದೇನೆ. ಮನಸ್ವಿನಿ ಯೋಜನೆ ನನ್ನದೇ ಎಂದು ಅವರು 43 ವರ್ಷದ ರಾಜಕೀಯ ಜೀವನದ ಹಳೆಯ ದಿನಗಳನ್ನು ಮೆಲುಕು ಹಾಕಿದರು.[ಕಾಂಗ್ರೆಸ್-ಬಿಜೆಪಿ ಉಪಚುನಾವಣೆ ಅಬ್ಬರ ಪ್ರಚಾರದ ಅಸಲಿಯತ್ತು ಏನು?]
ಸಿದ್ದರಾಮಯ್ಯನವರಿಗೆ ಯಾಕೆ ನನ್ನ ಮೇಲೆ ದ್ವೇಷ? ಯಾಕೆ ನನ್ನ ಮೇಲೆ ಕೀಳರಿಮೆ ಎಂದು ಪ್ರಶ್ನಿಸಿದರಲ್ಲದೇ, ಯಾರ್ರಿ ನೀವು ಪರಮೇಶ್ವರ್, 1989ರಲ್ಲಿ ನೀವು ಹೇಗೆ ಟಿಕೇಟ್ ಪಡೆದಿರಿ? ನಿಮ್ಮಪ್ಪ ತುಂಬಾ ಒಳ್ಳೆಯವರು. ನಿಮ್ಮ ಮುಖವನ್ನೇ ನಾನು ನೋಡಿಲ್ಲ. ನೀವು ಕಾಣಸಿಕೊಳ್ಳಲೇ ಇಲ್ಲ ಎಂದು ಪರಮೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.[ಉಪಚುನಾವಣಾ ಅಂಗಳದಲ್ಲಿ ದೊಡ್ಡಜಾತ್ರಾ ಸಂಭ್ರಮ]
ಅಂದು ದುಡ್ಡು ಕೊಟ್ಟು ಮಂತ್ರಿ ಗಾದಿಗೇರಿದ್ದೀರಿ. ನಾನೇ ಅದಕ್ಕೆ ಸಾಕ್ಷಿ. ನನ್ನ ಸೋಲಿಗೆ ಸಿದ್ದರಾಮಯ್ಯ ಅವರೇ ಕಾರಣ ಅಂತ ನನ್ನ ಬಳಿ ಹೇಳಿಕೊಂಡಿದ್ದು ಮರೆತು ಹೋಯಿತಾ? ಇದೀಗ ಮಲ್ಲಿಕಾರ್ಜುನ ಖರ್ಗೆ ವಿಲ ವಿಲ ಅಂತ ಓದಾಡ್ಡುತ್ತಿದ್ದಾರೆ ಎಂದು ಪ್ರಸಾದ್ ಖರ್ಗೆ ಕುರಿತು ವ್ಯಂಗ್ಯವಾಡಿದರು.
ಅವರು ತಂಜಾವೂರು ಬೊಂಬೆ ರೀತಿ. ದೇವರಾಜು ಅರಸು ಜೊತೆಯಲ್ಲಿದ್ದು ಅವರ ಬೆನ್ನಿಗೇ ಚೂರಿ ಹಾಕಿದವರು. ಅವರ ಜೊತೆಯಲ್ಲಿ ಇದ್ದು 9 ಬಾರಿ ಆಯ್ಕೆ ಆಗಿದ್ದೀರಿ. ಎಷ್ಟು ಅಧಿಕಾರ ಅನುಭವಿಸಿದರೂ ಇನ್ನೂ ಅಧಿಕಾರದ ದಾಹ ನೀಗಿಲ್ಲ. ನಾಚಿಕೆ ಆಗಬೇಕು ನಿಮಗೆ ಎಂದು ಪರಮೇಶ್ವರ್ ಅವರನ್ನು ಪ್ರಸಾದ್ ಟೀಸಿದರು.
ನನ್ನ ಸ್ವಾಭಿಮಾನದಿಂದಾಗಿಯೇ ರಾಜೀನಾಮೆ ಕೊಟ್ಟಿದ್ದೇನೆ. ಇದು ನನಗೆ ಪ್ರತಿಷ್ಠೆಯ ಚುನಾವಣೆ. ಮುಖ್ಯಮಂತ್ರಿಗಳಿಗೆ ದುರಹಂಕಾರ ಎಂದು ಯಾರನ್ನು ಕೇಳಿದರೂ ಹೇಳುತ್ತಾರೆ. ನಂಜನಗೂಡಿನಲ್ಲಿ ಬಿಜೆಪಿಯ ಭೂಕಂಪನ ಆಗಿದೆ. ಅದರಿಂದ ಕಾಂಗ್ರೆಸ್ ನ ಹಾವು ಚೇಳುಗಳು ಹೊರಗೆ ಬಂದಿದೆ ಎಂದು ವ್ಯಂಗ್ಯವಾಡಿದರು.
ಮುಖ್ಯಮಂತ್ರಿ ಪಿತೂರಿ ಮಾಡಿದ್ದರಿಂದಲೇ ಚುನಾವಣೆ ಬಂದಿದೆ. 80 ಲಕ್ಷದ ಡೈಮಂಡ್ ವಾಚ್ ಕಟ್ಟೋ ನೀವು ಜನರ ಬಳಿ ಹೋಗಿ ಮತದಾನದ ಕೂಲಿ ಕೇಳ್ತಿರಾ? (ದೈಹಿಕವಾಗಿಯಲ್ಲದಿದ್ದರೂ) ಮಾನಸಿಕವಾಗಿ ನಿಮಗಿಂತ ನೂರರಷ್ಟು ಶಕ್ತಿಯುತವಾಗಿದ್ದೇನೆ. ನಿಮ್ಮದು ಪರಿಣಾಮಕಾರಿ ಮಂತ್ರಿ ಮಂಡಲವೇ ಎಂದು ಪ್ರಶ್ನಿಸಿದರು.
ನಾನು ಎಡಪಂಥೀಯನಲ್ಲ. ಬಲಪಂಥೀಯನೂ ಅಲ್ಲ. ನಾನೂ ಮಾನವತಾವಾದಿ. ನಾನೂ ತತ್ವ ಸಿದ್ದಾಂತಗಳ ಮೇಲೆ ಕೆಲಸ ಮಾಡುವವನು. ನನಗೆ ನನ್ನದೇ ಆದ ತತ್ವ ಸಿದ್ದಾಂತವಿದೆ. ನಾನೂ ಅದಕ್ಕೆ ಎಂದಿಗೂ ಒಪ್ಪಂದ ಮಾಡಿಕೊಳ್ಳಲಾರೆ ಎಂದರು.
13ಕ್ಕೆ ನೋಡಿಕೊಳ್ಳಿ ಎಷ್ಟು ಮತ ಪಡೆಯುತ್ತೇನೆ ಎಂದು. ಕಾಂಗ್ರೆಸ್ ಮುಳುಗುತ್ತಿರುವ ದೋಣಿ. ಜನ ಮತ ಕೊಡ್ತಾರಾ ನೀವೇ ನೋಡಿ. 13ಕ್ಕೆ ಮುಖ್ಯಮಂತ್ರಿಗಳ ದುರಂಹಕಾರದ ಗರ್ವಭಂಗವಾಗಲಿದೆ. 13ರ ನಂತರ ಮುಖ್ಯಮಂತ್ರಿಗಳ ಹಿಂದೆ ಇರುವವರು ಇರುವುದಿಲ್ಲ. ಎಲ್ಲರೂ ಕಾಣದಂತೆ ನಿಮಗೆ ಕೈಕೊಟ್ಟು ಹೋಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.