ಕೆಆರ್ ಎಸ್ ಮುಂಭಾಗ ಒಡೆಯರ್, ಸರ್ ಎಂವಿ ಪ್ರತಿಮೆ ಸ್ಥಾಪನೆ; ರಾಜಮಾತೆ ಹರ್ಷ
ಮೈಸೂರು, ಮೇ 29: ಇಂದು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಮೈಸೂರಿನ ಅರಮನೆಯಲ್ಲಿ ಭೇಟಿ ಮಾಡಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು, ಜಲಸಂಪನ್ಮೂಲ ಇಲಾಖೆಯ ಅಭಿವೃದ್ಧಿ ಯೋಜನೆಗಳಿಗೆ ಮಾರ್ಗದರ್ಶನ, ಸಲಹೆ ನೀಡುವಂತೆ ಮನವಿ ಮಾಡಿದರು.
ಇದೇ ಸಂದರ್ಭ ಮಾತನಾಡಿದ ಅವರು, "ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪರಿಕಲ್ಪನೆ ಮತ್ತು ಕೊಡುಗೆಯಿಂದ ನೀರಾವರಿ, ಹೈನುಗಾರಿಕೆ, ಕೃಷಿ ಪ್ರಧಾನವಾಗಿ ಇನ್ನೂ ಕರ್ನಾಟಕ ಸಮೃದ್ಧಿಯಿಂದಿದೆ. ಬರಡಾಗಿದ್ದ ಬಯಲುಸೀಮೆಗೆ ನೀರೊದಗಿಸಲು ವಾಣಿವಿಲಾಸ ಸಾಗರ ಜಲಾಶಯ ನಿರ್ಮಿಸಿದ ಅರಸರು, ತಮ್ಮ ಸ್ವಂತ ಚಿನ್ನವನ್ನು ಮಾರಿ ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಾಣ ಮಾಡಿ ಕಾವೇರಿ ನೀರನ್ನು ಹರಿಸಿ ಕೋಟ್ಯಾಂತರ ಜನರ ಪಾಲಿನ ಕಣ್ಣೀರನ್ನು ಒರೆಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನರಾಗಿದ್ದ ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯ ರವರ ಪ್ರತಿಮೆಗಳನ್ನು ಕೆ.ಆರ್.ಎಸ್ ದಕ್ಷಿಣ ದ್ವಾರದ ಮುಂಭಾಗ ನಿರ್ಮಿಸಲು 8.50 ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದ್ದು, ಶೀಘ್ರವೇ ಪೂರ್ಣಗೊಳ್ಳಿಲಿದೆ" ಎಂದು ತಿಳಿಸಿದರು.
ಸುತ್ತೂರು ಮಠಕ್ಕೆ ಸಚಿವ ರಮೇಶ್ ಜಾರಕಿಹೊಳಿ ಭೇಟಿ
ನದಿ ತೀರದ ಸಂರಕ್ಷಣೆ, ರೈತರ ಸಮಿತಿ ರಚನೆ, ಕೆರೆಗಳಿಗೆ ನೀರು ತುಂಬಿಸುವುದು, ರೈತರ ಹಿತ ಕಾಪಾಡುವುದು ಹೀಗೆ ಹಲವು ವಿಷಯಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು. ಒಡೆಯರ್ ಮತ್ತು ಸರ್ ಎಂವಿ ಅವರ ಪ್ರತಿಮೆ ನಿರ್ಮಾಣ ಮಾಡುತ್ತಿರುವ ಜಲಸಂಪನ್ಮೂಲ ಇಲಾಖೆಯ ಕಾರ್ಯವನ್ನು ಶ್ಲಾಘಿಸಿದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ಸರ್ಕಾರದ ನೀರಾವರಿ ಯೋಜನೆಗಳು ಶೀಘ್ರವಾಗಿ ಮುಕ್ತಾಯಗೊಂಡು ಜನರಿಗೆ ಅನುಕೂಲವಾಗುವ ಸಂಕಲ್ಪದಿಂದ ಕಾರ್ಯೋನ್ಮುಖರಾಗುವಂತೆ ಜಲಸಂಪನ್ಮೂಲ ಸಚಿವರಿಗೆ ತಿಳಿಸಿದರು.