ಚಿರತೆ ರಕ್ಷಿಸಲು 100 ಅಡಿ ಬಾವಿಗಿಳಿದ ನಾಗರಹೊಳೆ ಅರಣ್ಯಾಧಿಕಾರಿ ಸಿದ್ದರಾಜು
ಮೈಸೂರು, ಜುಲೈ 20: ನೂರು ಅಡಿ ಆಳದ ಬಾವಿಯಲ್ಲಿ ಚಿರತೆಯೊಂದು ಬಿದ್ದಿದೆ ಎಂಬ ಗ್ರಾಮಸ್ಥರ ದೂರಿನಿಂದಾಗಿ ನಾಗರಹೊಳೆ ಅರಣ್ಯಾಧಿಕಾರಿಗಳು ಬಾವಿಯೊಳಗೆ ಇಳಿದು ಪರಿಶೀಲನೆ ನಡೆಸಿದ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ಸಮೀಪದ ಕಾರಾಪುರದಲ್ಲಿ ನಡೆದಿದೆ.
ಕಳೆದ ಶನಿವಾರ ಎಚ್.ಡಿ.ಕೋಟೆ ತಾಲೂಕಿನ ಕಾರಪುರ ಗ್ರಾಮದ ಬಾವಿಯಲ್ಲಿ ಚಿರತೆ ಬಿದ್ದಿದೆ ಎಂದು ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕಳೆದ ಕೆಲ ದಿನಗಳಿಂದ ಚಿರತೆಯು ಊರಿನೊಳಗೆ ಕಾಟ ಕೊಡುತ್ತಿದ್ದರಿಂದ ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಚಿರತೆಗಾಗಿ ಹುಡುಕಾಟ ನಡೆಸಿದರು.
ಮೈಸೂರು: ಮತ್ತೆ ಶತಕ ದಾಟಿದ ಕೊರೊನಾ ವೈರಸ್ ಪ್ರಕರಣಗಳು
ಆದರೆ ಅಂತರಸಂತೆ ವಲಯದ ಉತ್ಸಾಹಿ ವಲಯ ಅರಣ್ಯಾಧಿಕಾರಿ ಎಸ್.ಎಸ್ ಸಿದ್ದರಾಜು ಅವರು ತಾವೇ ಖುದ್ದು ಬಾವಿಯೊಳಗೆ ಇಳಿಯಲು ನಿರ್ಧರಿಸಿದರು. ಮೊಬೈಲ್ ಫೋನ್ ಹಾಗೂ ಟಾರ್ಚ್ ನೊಂದಿಗೆ ಕಬ್ಬಿಣದ ಪಂಜರದೊಳಗೆ ಕುಳಿತ ಸಿದ್ದರಾಜು ಅವರನ್ನು ಹಗ್ಗದ ಸಹಾಯದಿಂದ ಬಾವಿಯೊಳಗೆ ಇಳಿಸಲಾಯಿತು. ಸುಮಾರು 100 ಅಡಿ ಆಳದ ನೀರಿಲ್ಲದ ಬಾವಿಯ ಒಳಗೆ ಇಳಿದು ಚಿರತೆಯ ಸುಳಿವಿನ ಬಗ್ಗೆ ಪರಿಶೀಲಿಸಿದಾಗ ಚಿರತೆಯು ಅಲ್ಲಿ ಇರಲೇ ಇಲ್ಲ.
ಆದರೆ ಗ್ರಾಮಸ್ಥರು ತಾವೇ ಸ್ವತಃ ಚಿರತೆ ಬಾವಿಯೊಳಗೆ ಬೀಳುವುದನ್ನು ನೋಡಿದ್ದೇವೆ ಎಂದು ಇಲಾಖೆಗೆ ತಪ್ಪು ಮಾಹಿತಿ ನೀಡಿದ್ದರು. ಬಾವಿಯಲ್ಲಿ ಚಿರತೆ ಇಲ್ಲದಿರುವುದು ಅರಣ್ಯ ಅಧಿಕಾರಿಗಳಿಗೂ ಹಾಗೂ ಗ್ರಾಮಸ್ಥರಿಗೂ ನೆಮ್ಮದಿ ತಂದಿದೆ.