ಬೂದಿ ಕೊಟ್ಟು ಹಣದೊಂದಿಗೆ ಮಾಯವಾದ ನಾಗಾ ಸಾಧು!
ಮೈಸೂರು, ನವೆಂಬರ್ 26: ಸಾಧು, ಸ್ವಾಮೀಜಿಗಳೆಂದರೆ ಕೆಲವರಿಗೆ ಭಾರೀ ನಂಬಿಕೆ. ಹೀಗಾಗಿ ಈ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡ ಕೆಲವರು ಮೋಸದ ಜಾಲ ಹೆಣೆಯುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ ನಾಗಾ ಸಾಧುಗಳ ವೇಷದಲ್ಲಿ ಬಂದವರು ಕುಶಾಲನಗರದ ಉದ್ಯಮಿಯೊಬ್ಬರಿಗೆ ನಾಮ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಸಾಮಾನ್ಯವಾಗಿ ನಮ್ಮನ್ನು ಹೊಗಳಿ, ನಿಮಗೆ ಒಳ್ಳೆಯದಾಗುತ್ತದೆ ಎಂದರೆ ತಕ್ಷಣ ನಮ್ಮ ಕಿವಿಗಳು ನೆಟ್ಟಗಾಗಿ ಬಿಡುತ್ತದೆ. ಆಗ ಅವರು ಏನು ಹೇಳಿದರೂ ಮಾಡಲು ತಯಾರಾಗಿಬಿಡುತ್ತೇವೆ. ಇನ್ನು ನಾಗಾ ಸಾಧುಗಳು ಹೇಳಿದ ಮೇಲಂತೂ ತಳ್ಳಿ ಹಾಕುವ ಮಾತೇ ಇಲ್ಲ. ಹೀಗೆ ನಾಗಾ ಸಾಧುಗಳ ವೇಷದಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕುಶಾಲನಗರದ ಉದ್ಯಮಿಯೊಬ್ಬರನ್ನು ಮಾತಿನಲ್ಲಿಯೇ ಮರಳು ಮಾಡಿ ಅವರ ಮೊಬೈಲ್ ಹಾಗೂ ಕಚೇರಿಯಲ್ಲಿದ್ದ ನಗದು ದೋಚಿ ಪರಾರಿಯಾಗಿದ್ದಾರೆ. ಆ ಉದ್ಯಮಿಗೆ ಅವರು ಇದ್ದಷ್ಟು ಹೊತ್ತು ಏನಾಗಿತ್ತು ಎಂಬುದೇ ಗೊತ್ತಾಗಿಲ್ಲ. ಸಿಸಿ ಟಿವಿ ನೋಡಿದ ಬಳಿಕ ತಾನು ಮೋಸ ಹೋಗಿದ್ದು ಅರಿವಿಗೆ ಬಂದಿದೆ.
ವಿಧವೆ ಮದುವೆಯಾಗುವೆನೆಂದು ಬಂದ, ಸರ ದೋಚಿ ಎಸ್ಕೇಪ್ ಆದ
ಇಷ್ಟಕ್ಕೂ ಆ ನಾಗಾ ಸಾಧುಗಳ ವೇಷದಲ್ಲಿರುವ ಆ ವ್ಯಕ್ತಿಗಳು ಏನು ಮಾಡುತ್ತಾರೆ ಗೊತ್ತಾ? ಮೊದಲಿಗೆ ನೇರವಾಗಿ ನಿಮ್ಮ ಅಂಗಡಿಗೆ ನುಗ್ಗುತ್ತಾರೆ. ನೀರು ಕುಡಿಯಲು ಕೇಳುತ್ತಾರೆ. ಬಳಿಕ ಭವಿಷ್ಯದಲ್ಲಿ ನಿಮಗೆ ಒಳ್ಳೆಯ ಕಾಲ ಬರುತ್ತದೆ ಎನ್ನುತ್ತಾರೆ. ನಾವು ಹೇಳಿದಂತೆ ಮಾಡಿದರೆ ನಿಮ್ಮ ಕಷ್ಟಗಳು ಪರಿಹಾರವಾಗಿ ನೀವು ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ ಎನ್ನುತ್ತಾರೆ. ಅವರ ಮಾತಿಗೆ ತಲೆಬಾಗಿದರೆ ಬಣ್ಣದ ಪುಡಿಯೊಂದನ್ನು ಕೈಗೆ ನೀಡಿ ಅದನ್ನು ಮೂಗಿಗೆ ಹಿಡಿಯುವಂತೆ ಹೇಳುತ್ತಾರೆ. ನಂತರ ನಿಮಗೆ ಈ ಪ್ರಪಂಚದ ಅರಿವೇ ಇರುವುದಿಲ್ಲ. ಅವರು ಹೇಳಿದಂತೆ ಕೇಳುತ್ತಾ ಹೋಗುತ್ತೀರ. ಆಮೇಲೆ ಎಲ್ಲವನ್ನು ದೋಚಿ ಅವರು ಪರಾರಿಯಾಗುತ್ತಾರೆ.
ಸಾಲ ವಾಪಸ್ ಕೇಳಿದ್ದಕ್ಕೆ ಮತ್ತು ಬೆರೆಸಿದ ಜೂಸ್ ಕುಡಿಸಿ ವೀಡಿಯೋ ಮಾಡಿದ ಪೇದೆ
ಇದೀಗ ಕುಶಾಲನಗರದ ಈ ಉದ್ಯಮಿಗೆ ಮೋಸ ಮಾಡಿರುವ ನಾಗಾ ಸಾಧು ವೇಷಧಾರಿಗಳು ತಾವು ಹಿಮಾಚಲ ಪ್ರದೇಶದ ನಾಗಾಸಾಧುಗಳಾಗಿದ್ದು, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವುದಾಗಿ ಹೇಳಿ ವಿಶ್ವಾಸ ಹುಟ್ಟಿಸಿ ಕೃತ್ಯ ಎಸಗಿದ್ದಾರೆ. ಇವರು ನಿಮ್ಮ ಬಳಿಗೂ ಬರಬಹುದು ಎಚ್ಚರವಾಗಿರಿ. ಅನುಮಾನ ಬಂದರೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ಇಲ್ಲದೆ ಹೋದರೆ ನಿಮಗೂ ಟೋಪಿ ಹಾಕಬಹುದು, ಯಾವುದಕ್ಕೂ ಹುಷಾರಾಗಿರಿ.