ಗೋ ಹತ್ಯೆ ನಿಷೇಧದಿಂದ ಮೃಗಾಲಯದ ಪ್ರಾಣಿಗಳಿಗೆ ಆಹಾರ ಸಮಸ್ಯೆ ಇಲ್ಲ
ಮೈಸೂರು, ಜನವರಿ 19: ಕರ್ನಾಟಕ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಅದರ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮ ಬಳಕೆದಾರರು, ರೈತರು, ಗೋ ಸಾಕಣೆದಾರರು ಎಲ್ಲರ ಮೇಲಷ್ಟೇ ಅಲ್ಲ, ಮೃಗಾಲಯದಲ್ಲಿರುವ ಪ್ರಾಣಿಗಳ ಮೇಲೂ ಆಗಿದೆ.
ಈ ನೂತನ ಕಾಯ್ದೆಯಿಂದಾಗಿ ಗೋ ಮಾಂಸದ ಕೊರತೆ ಎದುರಾದಲ್ಲಿ ಮೃಗಾಲಯದಲ್ಲಿನ ಮಾಂಸಾಹಾರಿ ಪ್ರಾಣಿಗಳಿಗೆ ಇನ್ನು ಮುಂದೆ ಕೋಳಿ ಮಾಂಸ ನೀಡಲಾಗುತ್ತಿದೆ. ಬ್ರಾಯ್ಲರ್ ಕೋಳಿಗಳನ್ನು ಮನುಷ್ಯನೇ ಸಾಕಾಣಿಕೆ ಮಾಡುವ ಕಾರಣ, ಅದರ ಬೆಳವಣಿಗೆಗೆ ಕೃತಕ ಪ್ರೋಟೀನ್, ಹಾರ್ಮೋನ್ ಬದಲಾವಣೆ ಔಷಧಗಳನ್ನು ನೀಡಲಾಗಿರುತ್ತದೆ. ಹಾಗಾಗಿ ಇದರ ಪರಿಣಾಮ ಝೂನಲ್ಲಿರುವ ಪ್ರಾಣಿಗಳ ಮೇಲೂ ಬೀರುವ ಸಾಧ್ಯತೆಗಳು ಇವೆ.
ಮೈಸೂರನ್ನು ಯೋಗ ನಗರಿಯಾಗಿಸಲು ಜಿಎಸ್ಎಸ್ ಪಣ!
ಈ ಕುರಿತು ಒನ್ ಇಂಡಿಯಾ ಕನ್ನಡ ಪ್ರತಿನಿಧಿ ಜತೆ ಮಾತನಾಡಿದ ಪಶು ವೈದ್ಯ ಡಾ. ನಾಗರಾಜ್, ಪ್ರಾಣಿಗಳು ಬ್ರಾಯ್ಲರ್ ಚಿಕನ್ ಸೇವನೆ ಮಾಡುವುದಿರಿಂದ ಅದರ ಪರಿಣಾಮವು ದೀರ್ಘಾವಧಿಯಲ್ಲಿ ಗೊತ್ತಾಗಲಿದೆ ಎಂದರು.
ಪ್ರಾಣಿಗಳ ಆಯುಷ್ಯ ಹತ್ತರಿಂದ ಹನ್ನೆರಡು ವರ್ಷಗಳಾಗಿವೆ. ಯಾವುದೇ ಆಹಾರವಾಗಲಿ ಅದರ ಪರಿಣಾಮ ಧನಾತ್ಮಕವಾಗಿದೆಯೋ ಅಥವಾ ಋಣಾತ್ಮಕವಾಗಿದೆಯೋ ಎಂಬುದನ್ನು ತಿಳಿಯಲು ಕನಿಷ್ಠ ಒಂದರಿಂದ ಎರಡು ವರ್ಷ ಬೇಕಾಗುತ್ತದೆ. ಹಾಗಾಗಿ ಗೋಮಾಂಸದ ಬದಲಾಗಿ ಚಿಕನ್ ನೀಡುತ್ತಿರುವುದಿರಿಂದ ಒಳ್ಳೆಯದಾಗಿದೆಯೋ ಅಥವಾ ಕೆಟ್ಟದ್ದಾಗಿದೆಯೋ ಎಂಬುದನ್ನು ಈಗಲೇ ಹೇಳಲು ಬರುವುದಿಲ್ಲ ಎಂದು ಅವರು ಹೇಳಿದರು.
ನಿರ್ವಹಣೆ ಮಾಡಲು ಸಾಧ್ಯವಾಗದ ಗೋವುಗಳು, ಹದಿನಾಲ್ಕು ವರ್ಷ ದಾಟಿದ ಎಮ್ಮೆಗಳು, ಗಂಭೀರವಾಗಿ ಗಾಯಗೊಂಡಿರುವ ರಾಸುಗಳನ್ನು ವಧೆ ಮಾಡಿ, ಅದರ ಮಾಂಸವನ್ನು ಮೃಗಾಲಯದ ಪ್ರಾಣಿಗಳಿಗೆ ಪೂರೈಕೆ ಮಾಡಲು ಅನುಮತಿ ನೀಡಿದರೆ ಉತ್ತಮ ಎಂಬುದು ಪಶು ತಜ್ಞರ ಅಭಿಪ್ರಾಯವಾಗಿದೆ.
ಕುರಿ, ಮೇಕೆ, ಕೋಳಿ, ಹಂದಿ ಇತರೆ ಪ್ರಾಣಿಗಳ ಮಾಂಸಕ್ಕೆ ಹೋಲಿಸಿದರೆ ಗೋಮಾಂಸವು ಒಂದು ಸಮತೋಲನ ಆಹಾರವಾಗಿದೆ. ಇದರಲ್ಲಿ ಕ್ಯಾಲ್ಸಿಯಂ, ಪ್ರೋಟೀನ್ ಅಂಶಗಳು ಹೆಚ್ಚಾಗಿರುತ್ತವೆ. ವೈದ್ಯಕೀಯ ಕ್ಷೇತ್ರದಲ್ಲಿ ಗೋಮಾಂಸವನ್ನು ಬ್ಯಾಲೆನ್ಸ್ಡ್ ಡಯೆಟ್ ಫುಡ್ ಎಂದು ಹೇಳಲಾಗುತ್ತದೆ. ಕುರಿಗಿಂತ ಕಡಿಮೆ ಕೊಬ್ಬು ಗೋಮಾಂಸದಲ್ಲಿರುತ್ತದೆ.
ಈ ಕುರಿತು ಒನ್ ಇಂಡಿಯಾ ಕನ್ನಡ ಜತೆ ಮಾತನಾಡಿದ ಮೃಗಾಲಯದ ನಿರ್ದೇಶಕ ಅಜಿತ್ ಕುಲಕರ್ಣಿ, ನೂತನ ಗೋಹತ್ಯೆ ನಿಷೇಧ ಕಾಯ್ದೆಯಿಂದ ಮೃಗಾಲಯದ ಪ್ರಾಣಿಗಳಿಗೆ ಯಾವುದೇ ಆಹಾರ ಕೊರತೆ ಎದುರಾಗುವುದಿಲ್ಲ ಎಂದು ಹೇಳಿದರು. ಕೋಳಿ ತ್ವರಿತವಾಗಿ ಬೆಳೆಯಲು ಬಳಸಲಾಗುವ ರಸಾಯನಿಕಗಳಿಂದ ಮೃಗಾಲಯದ ಪ್ರಾಣಿಗಳ ಮೇಲೆ ಆಗುವ ಪರಿಣಾಮ ಕುರಿತು ಮಾತನಾಡಿದ ಅವರು ಮೃಗಾಲಯದಲ್ಲಿ ಸುಸಜ್ಜಿತ ಪ್ರಯೋಗಾಲಯವೂ, ವೈದ್ಯರೂ ಇದ್ದಾರೆ. ಸೂಕ್ತವಾಗಿ ಹಂತ ಹಂತದ ಅಮೂಲಾಗ್ರ ಪರೀಕ್ಷೆ ನಡೆಸಿದ ನಂತರವೇ ಕೋಳಿ ಮಾಂಸವನ್ನು ನೀಡಲಾಗುತ್ತದೆ ಎಂದರು.