ಶೌಚಾಲಯವಿದ್ದರೂ ತೆರಳದವರಿಗೆ ತಿಳಿ ಹೇಳಲು ಮೈಸೂರು ಜಿಪಂನಿಂದ ಯೋಜನೆ
ಮೈಸೂರು, ಮೇ 4 : ಸ್ವಚ್ಛ ಭಾರತ ಅಭಿಯಾನದಲ್ಲಿ ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿಸಲಾಗಿತ್ತು.
ಆದರೀಗ ಶೌಚಾಲಯ ನಿರ್ಮಾಣಗೊಂಡರೂ ಜನರು ಅದರ ಬಳಕೆಯಲ್ಲೇ ನಿರಾಸಕ್ತಿ ತೋರಿಸುತ್ತಿದ್ದಾರೆ. ಹೀಗಾಗಿ ಶೌಚಾಲಯ ಬಳಸಿ ಎಂಬ ಹೊಸ ಯೋಜನೆಯನ್ನು ಮೈಸೂರು ಜಿಪಂ ಕೈಗೊಂಡಿದೆ. ಇದಕ್ಕಾಗಿ 76 ಲಕ್ಷ ರೂ ಹಣವನ್ನು ಕೂಡ ಮೀಸಲಿರಿಸಲಾಗಿದೆ.
ಮೈಸೂರು ಜಿ.ಪಂ.ನಿಂದ 435 ಕೋಟಿ ರೂ. ಬಜೆಟ್ ಮಂಡನೆ: ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಒತ್ತು
ಗ್ರಾಮೀಣ ಭಾಗದ ಜನರು ಬಯಲಿನಲ್ಲಿ ಶೌಚಾಲಯ ಮಾಡಬಾರದೆಂಬ ಉದ್ದೇಶದಿಂದ ಹಿಂದಿನ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರಕಾರ ನಿರ್ಮಲ ಭಾರತ ಅಡಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಚಾಲನೆ ನೀಡಿತ್ತು.
ನಂತರ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಕೂಡ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಅನುದಾನ ಪ್ರಕಟಿಸಿದ್ದಲ್ಲದೆ ಯೋಜನೆಗೆ ಸಾಕಷ್ಟು ಪ್ರೋತ್ಸಾಹ ನೀಡಿದ್ದು, ಮೊದಲಿಗೆ ಗ್ರಾಮೀಣ ಭಾಗದ ಜನರು ಶೌಚಾಲಯ ನಿರ್ಮಾಣಕ್ಕೆ ನಿರಾಸಕ್ತಿ ತೋರಲು ಆರಂಭಿಸಿದರು. ಅಂತಿಮವಾಗಿ ಸರ್ಕಾರದಿಂದ ಅನುದಾನ ಬರುತ್ತದೆಂಬ ಕಾರಣಕ್ಕಾಗಿ ಸಾಕಷ್ಟು ಮಂದಿ ತಮ್ಮ ಮನೆಗಳ ಹಿತ್ತಲಿನಲ್ಲಿ ಶೌಚಾಲಯ ನಿರ್ಮಿಸಿದ್ದಾರೆ.
ಆದರೆ ಹೊಸ ಸಮಸ್ಯೆ ಶೌಚಾಲಯ ನಿರ್ಮಾಣವಾದರೂ, ಕೂಡ ಜನರು ಮಾತ್ರ ಅದರಲ್ಲಿಯೂ ಪುರುಷರು ಶೌಚಾಲಯವನ್ನು ಬಳಸುತ್ತಿಲ್ಲ. ಅವರು ಈಗಲೂ ಕೂಡ ಬಯಲು ಶೌಚಾಲಯವನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಜಿಪಂ ಅಧಿಕಾರಿಗಳು ಶೌಚಾಲಯವನ್ನು ಬಳಸಿ ಎಂಬ ಅಭಿಯಾನಕ್ಕೆ ಮುಂದಾಗಿದ್ದಾರೆ.
ಕೈ - ತೆನೆ ಮೈತ್ರಿ ಪಾಲಾದ ಮೈಸೂರು ಜಿ.ಪಂ ಅಧ್ಯಕ್ಷ- ಉಪಾಧ್ಯಕ್ಷರ ಗಾದಿ
ಯೋಜನೆ ವಿಫಲವಾಗಬಾರದೆಂಬ ನಿರ್ಧಾರಕ್ಕೆ ಬಂದಿರುವ ಸರ್ಕಾರ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿ ಮೂಲಕ ಶೌಚಾಲಯ ಬಳಕೆ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದೆ. ಅದರಂತೆ ಮೈಸೂರು ಜಿಲ್ಲಾ ಪಂಚಾಯತ್ ಮೂಲಕ ಕೂಡ ಜಿಲ್ಲೆಯ ಎಲ್ಲಾ ತಾಲ್ಲೂಕು ಗ್ರಾಮೀಣ ಭಾಗದ ಜನರಲ್ಲಿ ಶೌಚಾಲಯ ಬಳಕೆ ಬಗ್ಗೆ ಜಾಗೃತಿ ಮೂಡಿಸಲು 76 ಲಕ್ಷ ರೂ ಹಣ ಬಿಡುಗಡೆ ಮಾಡಿದೆ.
ಕಳೆದ ಒಂದು ತಿಂಗಳಿನಿಂದ ಜಿಪಂ ಸ್ವಚ್ಛ ಭಾರತ್ ಮಿಷನ್ ವಿಭಾಗದಿಂದ ಜಿಲ್ಲೆಯ 60 ಗ್ರಾಮಗಳಲ್ಲಿ ಶೌಚಾಲಯ ಬಳಕೆ ಬಗ್ಗೆ ಬೀದಿ ನಾಟಕಗಳನ್ನು ಆಯೋಜಿಸಲಾಗಿದೆ, ಪ್ರತಿ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಶೌಚಾಲಯ ಬಳಕೆ ಬಗ್ಗೆ ಪೋಸ್ಟರ್ ಅಂಟಿಸಿ ಜಾಗೃತಿ ಮೂಡಿಸಲಾಗಿದೆ.
ಅಂಗನವಾಡಿಯ ಆಶಾ ಕಾರ್ಯಕರ್ತರಿಗೆ ತರಬೇತಿ ನೀಡುವ ಮೂಲಕ ಜನರಿಗೆ ಅರಿವು ಮೂಡಿಸುವಂತೆ ಮನನ ಮಾಡಲಾಗಿದೆ. ಜೊತೆಗೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಶೌಚಾಲಯ ಬಳಕೆ ಬಗ್ಗೆ ಉಪನ್ಯಾಸ ಏರ್ಪಡಿಸಲಾಗಿದೆ. ಆ ಮೂಲಕ ಜನರಿಗೆ ತಿಳಿ ಹೇಳಲಾಗಿದೆ.
ಅತಿ ಹೆಚ್ಚು ಶೌಚಾಲಯ ಬಳಸದ ಗ್ರಾಮಗಳ ಬಗ್ಗೆ ವರದಿ ಪಡೆದಿರುವ ಜಿಪಂ ನೊಡಲ್ ಅಧಿಕಾರಿ ಶಿವಕುಮಾರ ಸ್ವಾಮಿ ಅವರು ಸ್ವಚ್ಛ ಭಾರತ ವಿಭಾಗದ ಎಲ್ಲ ಅಧಿಕಾರಿಗಳೊಂದಿಗೆ ಆಯಾ ಗ್ರಾಮಗಳಿಗೆ ತೆರಳಿ ಸಭೆ ನಡೆಸುವ ಮೂಲಕ ಶೌಚಾಲಯ ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಒಟ್ಟಾರೆ ಜನಪರವಾಗಿರುವ ಸರ್ಕಾರದ ಈ ಒಂದು ಯೋಜನೆ ವಿಫಲವಾಗಬಾರದು ಕಾರಣಕ್ಕಾಗಿ ಅಧಿಕಾರಿಗಳು ಟೊಂಕ ನಿಂತಿರುವುದು ಸಾರ್ವಜನಿಕರಿಗೆ ಪ್ರಶಂಸಿಸಿದ್ದಾರೆ.