ಮಲೇಷ್ಯಾದಲ್ಲಿ ಶವವಾಗಿ ಸಿಕ್ಕಿದ ಮೈಸೂರು ಯುವಕ; ಮೃತದೇಹಕ್ಕೆ ಕುಟುಂಬಸ್ಥರ ಪರದಾಟ
ಮೈಸೂರು, ಡಿಸೆಂಬರ್ 20: ಮಲೇಷ್ಯಾದಲ್ಲಿ ಖಾಸಗಿ ಕಂಪನಿಯ ಗೂಡ್ಸ್ ಹಡಗಿನಲ್ಲಿ ಕೆಲಸ ಮಾಡುತ್ತಿದ್ದ ಮೈಸೂರು ಮೂಲದ ಯುವಕ ಸಾವನ್ನಪ್ಪಿದ್ದು, ಸರಿಯಾದ ಮಾಹಿತಿ ಸಿಗದೆ ಕುಟುಂಬಸ್ಥರು ಪರದಾಡುತ್ತಿದ್ದಾರೆ.
ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಾನ್ವೆಂಟ್ ರಸ್ತೆಯ ನಿವಾಸಿಗಳಾದ ವೆಂಕಟೇಶ್ ಹಾಗೂ ಶೋಭಾ ದಂಪತಿಯ ಮಗ ಸುಮಂತ್ (22) ಎಂಬ ಯುವಕ ಮಲೇಷ್ಯಾದಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಸುಮಂತ್ ಕಳೆದ 9 ತಿಂಗಳಿನಿಂದ ಮಲೇಷ್ಯಾದಲ್ಲಿ ಖಾಸಗಿ ಕಂಪನಿಯ ಗೂಡ್ಸ್ ಶಿಪ್ನಲ್ಲಿ ಕೆಲಸ ಮಾಡುತ್ತಿದ್ದರು.
ಮಲೇಷ್ಯಾ ಪತ್ರಿಕೆಯಲ್ಲಿ ಸುಮಂತ್ ಸಾವಿನ ವರದಿ
ನಿನ್ನೆ ಬೆಳಿಗ್ಗೆ ಅಲ್ಲಿನ ಅಧಿಕಾರಿಗಳು ಸುಮಂತ್ ಪೋಷಕರಿಗೆ ನಿಮ್ಮ ಮಗ ಕಾಣೆಯಾಗಿದ್ದಾನೆ ಎಂದು ಹೇಳಿದ್ದಾರೆ. ಅಲ್ಲಿನ ಸ್ಥಳೀಯ ಪೊಲೀಸ್ ಠಾಣೆಗೆ ಮಲೇಷ್ಯಾ ಭಾಷೆಯಲ್ಲಿ ದೂರು ನೀಡಿದ್ದ ಪ್ರತಿ ಕಳುಹಿಸಿದ್ದು, ಸ್ಥಳೀಯ ಪತ್ರಿಕೆಗಳಲ್ಲಿ ಕರ್ನಾಟಕದ ಸುಮಂತ್ ಎಂಬ ಯುವಕ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದು, ಮೃತದೇಹದ ಶೋಧ ಕಾರ್ಯ ನಡೆಸುತ್ತಿರುವ ಕುರಿತ ವರದಿಯ ಪ್ರತಿಯನ್ನೂ ಕಳುಹಿಸಿದ್ದರು.
ಅಮೆರಿಕದಲ್ಲಿ ಅಪರಿಚಿತ ವ್ಯಕ್ತಿಯ ಗುಂಡೇಟಿಗೆ ಬಲಿಯಾದ ಮೈಸೂರಿನ ಯುವಕ
ಈ ಸುದ್ದಿಯಿಂದ ಆಘಾತಕ್ಕೊಳಗಾದ ಸುಮಂತ್ ಪೋಷಕರು ಇಲ್ಲಿನ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
ಒಂಬತ್ತು ತಿಂಗಳ ಹಿಂದೆ ಮಲೇಷ್ಯಾಗೆ ಹೋಗಿದ್ದ ಯುವಕ
ಮೊದಲು ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದ ಸುಮಂತ್ ಮಲೇಷ್ಯಾದಲ್ಲಿ 70 ಸಾವಿರ ರೂಪಾಯಿ ಸಂಬಳ ಪಡೆಯುವ ಆಸೆಯಿಂದ ಗೋವಾದ ಮನೀಶ್ ಪಟೇಲ್ ಎಂಬ ಏಜೆಂಟ್ ಮೂಲಕ ಮುಂಬೈನಲ್ಲಿ ಮರ್ಚೆಂಟ್ ನೇವಿ ತರಬೇತಿ ಪಡೆದಿದ್ದರು. ಏಜೆಂಟ್ ನೀಡಿದ ಭರವಸೆಯ ಮೇರೆಗೆ ತರಬೇತಿ ಹಾಗೂ ಉದ್ಯೋಗಕ್ಕಾಗಿ ಆತನಿಗೆ 3.35 ಲಕ್ಷ ರೂಪಾಯಿಗಳನ್ನು ನೀಡಲಾಗಿತ್ತು ಎಂದು ಶೋಭಾ ಆರೋಪಿಸಿದರು.
ಕೊಲೆ ಶಂಕೆ ವ್ಯಕ್ತಪಡಿಸಿದ ಕುಟುಂಬ
ಆದರೆ ಕೆಲಸಕ್ಕೆ ಮಲೇಷ್ಯಾಕ್ಕೆ ತೆರಳಿದ ಬಳಿಕ ತಿಂಗಳಿಗೆ ಕೇವಲ 18 ಸಾವಿರ ರೂಪಾಯಿ ನೀಡುತಿದ್ದುದಲ್ಲದೆ ಉದ್ಯೋಗದಾತರು ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ. ಅಲ್ಲದೆ ಕಳೆದ ಮೂರು ತಿಂಗಳಿನಿಂದ ಸಂಬಳ ನೀಡಿರಲಿಲ್ಲ. ಇದನ್ನು ತಾಯಿಗೆ ಫೋನ್ ಮೂಲಕ ತಿಳಿಸಿದ್ದ ಸುಮಂತ್, ತಾನು ವಾಪಾಸ್ ಬರುವುದಾಗಿಯೂ ಹೇಳಿದ್ದ ಎಂದು ತಾಯಿ ಶೋಭಾ ಕಣ್ಣೀರಾದರು. ಸುಮಂತ್ ಜತೆ ತೆರಳಿದ ಕರ್ನಾಟಕದ ಇತರ ಯುವಕರನ್ನೂ ಬೇರೆ ಬೇರೆ ಕಡೆ ಕೆಲಸಕ್ಕೆ ಹಾಕಲಾಗಿದೆ. ಆತನ ಕಂಪೆನಿಯ ಮೇಲಧಿಕಾರಿಗಳು ಸಂಪರ್ಕಕ್ಕೂ ಸಿಗುತ್ತಿಲ್ಲ, ತನ್ನ ಅಣ್ಣ ಕೊಲೆ ಆಗಿರುವ ಶಂಕೆ ಇದೆ ಎಂದು ಸಹೋದರ ಹೇಮಂತ್ ಹೇಳಿದರು.
ತಿಥಿಗೆಂದು ಬಂದಿದ್ದ ಯೋಧನ ದುರ್ಮರಣ; 20 ಗಂಟೆ ನಂತರ ಸಿಕ್ಕಿತು ಮೃತದೇಹ
ಸಂಸದ ಪ್ರತಾಪ ಸಿಂಹ ಭೇಟಿಯಾದ ಕುಟುಂಬಸ್ಥರು
ಮಲೇಷ್ಯಾದಲ್ಲಿ ಕೆಲಸಕ್ಕೆ ಹೋದ ನನ್ನ ಮಗ ಸುಮಂತನ ಮೃತದೇಹವನ್ನು ಕೊಡಿಸಿ ಹಾಗೂ ಆತನ ಮಗನ ಹೇಗಾಯಿತು ಎಂಬುದನ್ನು ತನಿಖೆ ಮಾಡಿಸಿ ಎಂದು ಸಂಸದ ಪ್ರತಾಪ್ ಸಿಂಹರನ್ನು ಕುಟುಂಬಸ್ಥರು ಭೇಟಿಯಾಗಿ ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸದ, ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.