ಕೆಪಿಎಲ್ ಕ್ರಿಕೆಟ್ ಪಂದ್ಯಾವಳಿ: ಮೈಸೂರು ವಾರಿಯರ್ಸ್ ನಿಂದ ಟ್ಯಾಲೆಂಟ್ ಹಂಟ್
ಮೈಸೂರು, ಜುಲೈ 13: 2019ರ ಕೆಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ಪರ್ಧಿಸುವ ಸಲುವಾಗಿ ಈ ಬಾರಿ ಮೈಸೂರಿನ ಎನ್ಆರ್ ಸಮೂಹ ಕ್ರಿಕೆಟ್ ಪ್ರತಿಭಾನ್ವೇಷಣೆಯ ಆರನೇ ಆವೃತ್ತಿಯನ್ನು ಆಯೋಜಿಸಿದೆ. ಬೆಂಗಳೂರಿನಲ್ಲಿ ಜುಲೈ 17 ಹಾಗೂ ಮೈಸೂರಿನಲ್ಲಿ ಜುಲೈ 20ರಂದು ಪ್ರತಿಭಾನ್ವೇಷಣೆ ನಡೆಯಲಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಎನ್ ಆರ್ ಸಮೂಹ, ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ಜುಲೈ 17ರಂದು ಮತ್ತು ಮೈಸೂರಿನ ಎಸ್ ಡಿಎನ್ಆರ್ ಮೈದಾನದಲ್ಲಿ ಜುಲೈ 20ರಂದು ಪ್ರತಿಭಾನ್ವೇಷಣೆ ನಡೆಯಲಿದೆ. ಕರ್ನಾಟಕದ ಯಾವುದೇ ಭಾಗದ ಯುವ, ಪ್ರತಿಭಾವಂತ ಕ್ರಿಕೆಟ್ ಆಟಗಾರರು ಭಾಗವಹಿಸಬಹುದು. ಇಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಆಯ್ಕೆಯಾಗುವ ಆಟಗಾರರು 2019ರ ಕೆಪಿಎಲ್ ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು ಮಾಹಿತಿ ನೀಡಿದೆ.
ಕೆಪಿಎಲ್ ಫೈನಲ್ಸ್ ಗೆ ಸಾಕ್ಷಿಯಾಗಲಿದೆ ಸಾಂಸ್ಕೃತಿಕ ನಗರಿ ಮೈಸೂರು
ಮೈಸೂರು ವಾರಿಯರ್ಸ್ ನಿಂದ ಕಳೆದ ವರ್ಷವೂ ಕ್ರಿಕೆಟ್ ಪ್ರತಿಭಾನ್ವೇಷಣೆ ನಡೆಸಲಾಗಿತ್ತು. ಕಳೆದ ವರ್ಷದ ಆಕಾಂಕ್ಷಿಗಳಲ್ಲಿ ಕಿಶನ್ ಬೆಡಾರೆ ಮತ್ತು ಗೌತಮ್ ಸಾಗರ್ ವಾರಿಯರ್ಸ್ ತಂಡದ ಆಟಗಾರರಾಗಿ ಆಯ್ಕೆಯಾದರು. ಈ ಪ್ರತಿಭಾನ್ವೇಷಣೆಯನ್ನು ಮುಖ್ಯವಾಗಿ ಕರ್ನಾಟಕದ ಕೆಎಸ್ ಸಿಎ (ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್) ನೋಂದಾಯಿತ ಕ್ಲಬ್ ಗಳ ಕೆಎಸ್ ಸಿಎ ನೋಂದಾಯಿತ ಸದಸ್ಯರಿಗಾಗಿ ಆಯೋಜಿಸಲಾಗುತ್ತದೆ. ಯುವ ಪ್ರತಿಭಾವಂತ ಕ್ರಿಕೆಟ್ ಪ್ರತಿಭೆಗಳನ್ನು ಬೆಳೆಸುವ ಜೊತೆಗೆ ಅವರಿಗೆ ಸೂಕ್ತ ತರಬೇತಿ ಹಾಗೂ ಪ್ರೋತ್ಸಾಹ ನೀಡಿ ಪೋಷಿಸುವ ಗುರಿಯನ್ನು ಹೊಂದಿದೆ.
ಪ್ರತಿಭಾನ್ವೇಷಣೆಯು ಬೆಂಗಳೂರಿನಲ್ಲಿ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಕೆಎಸ್ ಸಿಎ ಕ್ಲಬ್ ಅಡಿಯಲ್ಲಿ ನೋಂದಾಯಿತ ಕ್ಲಬ್ ಆಟಗಾರರು ಮಾತ್ರ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಪರ್ಧಿಸಬಹುದು. ಆಟಗಾರರು ಕಳೆದ ಎರಡು ವರ್ಷಗಳ ಕೆಎಸ್ ಸಿಎ ಅಂಕಿಅಂಶಗಳನ್ನು ಮತ್ತು ಕಿಟ್ ಗಳನ್ನು ತಮ್ಮೊಂದಿಗೆ ತರಬೇಕು. ಮೈಸೂರು (ಮಂಡ್ಯ ಮತ್ತು ಚಾಮರಾಜನಗರ) ಸುತ್ತಮುತ್ತಲ ಪ್ರದೇಶಗಳನ್ನು ಹೊರತುಪಡಿಸಿ ಬೇರೆ ಭಾಗಗಳ ಆಟಗಾರರು ಬರಬಹುದು.