ಮೈಸೂರಿನಲ್ಲಿ ಸಂಚಾರ ನಿಯಮ ಪಾಲಿಸದವರಿಗೆ ಹೊಸ ಪಾಠ
ಮೈಸೂರು, ಜೂನ್ 11 : ಮೈಸೂರು ಪೊಲೀಸರು ವಿಶೇಷ ಯೋಜನೆಗಳನ್ನು ಜಾರಿಗೆ ತರುವಲ್ಲಿ ಮುಂದು. ಅದರಂತೆಯೇ ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರುವವರನ್ನು ನಿಯಂತ್ರಿಸುವ ಸಲುವಾಗಿ ಮೈಸೂರಿನಲ್ಲಿ ಪೊಲೀಸರಿಗೆ ಪಬ್ಲಿಕ್ ಅಡ್ರೆಸ್ ಸಿಸ್ಟಂ ಎಂಬ ಯೋಜನೆಯನ್ನು ಜಾರಿಗೆ ತರಲಾಗಿದೆ.
ಸಂಚಾರ ನಿಯಮ ಉಲ್ಲಂಘಿಸುವವರಿಗೆ ಪೊಲೀಸರು ದಂಡ ವಿಧಿಸುವುದರೊಂದಿಗೆ ಪಾಠವನ್ನೂ ಹೇಳುತ್ತಾರೆ. ಪ್ರತಿಯೊಬ್ಬ ಟ್ರಾಫಿಕ್ ಪೊಲೀಸ್ ಗೂ, ಧ್ವನಿವರ್ಧಕ ನೀಡಿದ್ದು, ಅದರ ಮೂಲಕ ಅರಿವು ಮೂಡಿಸುವುದು ಈ ಯೋಜನೆಯ ಪ್ರಧಾನ ಉದ್ದೇಶ. ನಗರದಲ್ಲಿರುವ ಒಟ್ಟು 52 ಸಿಗ್ನಲ್ಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಈಗಾಗಲೇ 36 ಕಡೆ ಉಪಕರಣಗಳನ್ನು ಅಳವಡಿಸಲಾಗಿದೆ. ಹಲವೆಡೆ ಪೊಲೀಸರು ಅರಿವು ಮೂಡಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ವ್ಯಕ್ತಿ ಹಾಕಿರುವ ಬಟ್ಟೆಯ ಬಣ್ಣವನ್ನು ಉಲ್ಲೇಖಿಸಿ ಪೊಲೀಸರು ಎಲ್ಲರಿಗೂ ಕೇಳುವಂತೆ ಧ್ವನಿವರ್ಧಕದಲ್ಲಿ ಹೇಳುವುದರಿಂದ ವ್ಯಕ್ತಿಗೆ ಮುಜುಗರ ಉಂಟಾಗುತ್ತದೆ. ಮತ್ತೆ ಇಂತಹ ತಪ್ಪನ್ನು ಮಾಡಲು ಹಿಂದೇಟು ಹಾಕುತ್ತಾರೆ ಎಂಬ ಲೆಕ್ಕಾಚಾರ ಇದರ ಹಿಂದಿನದ್ದು.
ಮೈಸೂರ್ ಟು ಮುಂಬೈ ಸಂಚಾರಕ್ಕೆ ವಿಶೇಷ ಐಶಾರಾಮಿ ಬಸ್
'ನಿಮ್ಮ ಒಳಿತಿಗಾಗಿ ನಾವು' ಎಂಬ ಘೋಷದೊಂದಿಗೆ ಸಂಚಾರ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಗರ ಪೊಲೀಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ ಅವರ ನಿರ್ದೇಶನದಂತೆ ಸಂಚಾರ ಎಸಿಪಿ ಜಿ.ಎನ್.ಮೋಹನ್ ಹೊಸ ವಿಧಾನವನ್ನು ಜಾರಿಗೊಳಿಸಿದ್ದಾರೆ.
ಮೈಸೂರು ಟ್ರಾಫಿಕ್ ಪೊಲೀಸರು ತಂದಿರುವ ಈ ಯೋಜನೆ ಪ್ರಶಂಸನಾರ್ಹವಾಗಿದ್ದು, ಇದರಿಂದಾಗಿ ಅಪಘಾತ ಪ್ರಕರಣಗಳು ಕಡಿಮೆಯಾಗುವ ನಿರೀಕ್ಷೆ ಜನರಲ್ಲಿದೆ.