ಈಶಾನ್ಯ ರಾಜ್ಯ ವಿದ್ಯಾರ್ಥಿಗಳಿಗೆ ಪ್ರವೇಶ ನೀಡದ ಸೂಪರ್ ಮಾರ್ಕೆಟ್
ಮೈಸೂರು, ಮಾರ್ಚ್ 30: ಮೈಸೂರಿನ ಮೋರ್ ಸೂಪರ್ ಮಾರ್ಕೆಟ್ ನಲ್ಲಿ ಈಶಾನ್ಯ ರಾಜ್ಯದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿನ ನಾಲ್ವರು ಸಿಬ್ಬಂದಿ ವಿರುದ್ಧ ದೂರು ದಾಖಲಿಸಿದ್ದಾರೆ.
ಇಲ್ಲಿನ ಚಾಮುಂಡಿಪುರ ವೃತ್ತದ ಬಳಿ ಇರುವ ಮೋರ್ ಸೂಪರ್ ಮಾರ್ಕೆಟ್ ನಲ್ಲಿ ಈ ಘಟನೆ ನಡೆದಿದೆ. ಕಳೆದ ಶನಿವಾರ ಸಂಜೆ ಸೂಪರ್ ಮಾರ್ಕೆಟ್ ಗೆ ಆಗಮಿಸಿದ್ದ ಇಬ್ಬರು ನಾಗಾಲ್ಯಾಂಡ್ ವಿದ್ಯಾರ್ಥಿಗಳನ್ನು ಚೀನೀಯರು ಎಂದು ಭಾವಿಸಿದ ಸಿಬ್ಬಂದಿಗಳು ಒಳಗೆ ಪ್ರವೇಶಿಸದಂತೆ ತಡೆದರು.
ನಮ್ಮನ್ನು ಯಾಕೆ ಒಳಗೆ ಬಿಡುತ್ತಿಲ್ಲ ಎಂದು ಪ್ರಶ್ನಿಸಿದರು. ನಮಗೂ ದಿನಸಿ ಬೇಕು, ನಮಗೂ ಆಹಾರ ಪದಾರ್ಥ ಬೇಕು. ನಾವು ನಿಮ್ಮ ಹಾಗೆ ಮನುಷ್ಯರು. ನಾವು ಭಾರತೀಯರೇ. ನಮ್ಮ ಬಳಿಯೂ ಆಧಾರ್ ಕಾರ್ಡ್ ಇದೆ ಎಂದು ಮನವಿ ಮಾಡಿಕೊಂಡರು.
ನಮ್ಮನ್ನು ಯಾಕೆ ಬೇರೆಯವರಂತೆ ನೋಡ್ತೀರಾ? ನಾವು ನಿಮ್ಮ ರೀತಿಯಲ್ಲೇ ಬದುಕುತ್ತಿದ್ದೇವೆ. ನಮಗೂ ಬದುಕಲು ಆಹಾರ ಪದಾರ್ಥ ನೀಡಿ ಎಂದು ಒತ್ತಾಯಿಸಿದರು. ಆದರೂ ಮೋರ್ ಸಿಬ್ಬಂದಿ ನೀಡದಾಗ ಸಮೀಪದ ಕೃಷ್ಣರಾಜ ಠಾಣೆಯಲ್ಲಿ ದೂರು ದಾಖಲಿಸಿದರು. ಕೂಡಲೇ ಸೂಪರ್ ಮಾರ್ಕೆಟ್ ನ ಮಾರಾಟಗಾರರಾದ ಮಂಜುನಾಥ್, ನವೀನ್, ಅವಿನಾಶ್ ಮತ್ತು ರೇವಣ್ಣ ವಿರುದ್ಧ ವಿವಿಧ ಐಪಿಸಿ ಸೆಕ್ಷನ್ ಗಳನ್ವಯ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಈ ನಡುವೆ ಘಟನೆ ಮೊಬೈಲ್ನಲ್ಲಿ ಸೆರೆ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡಲಾಗಿತ್ತು. ಈ ವಿಡಿಯೋ ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಮೈಸೂರು ನಗರ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ ಕಾರ್ಯ ಪ್ರವೃತ್ತರಾಗಿದ್ದಾರೆ.
ಜನರು, ಅಂಗಡಿ ಮಾಲೀಕರು ಮತ್ತು ಸಿಬ್ಬಂದಿಗಳು ಇಂತಹ ಕೃತ್ಯಗಳನ್ನು ಮಾಡದಂತೆ ಮತ್ತು ಈ ಬಿಕ್ಕಟ್ಟಿನ ಸಮಯದಲ್ಲಿ ಜವಾಬ್ದಾರಿಯುತವಾಗಿ ವರ್ತಿಸುವಂತೆ ನಾವು ಕೋರುತ್ತೇವೆ ಎಂದು ಟ್ವೀಟರ್ ಮೂಲಕ ಡಾ.ಚಂದ್ರಗುಪ್ತ ಮನವಿ ಮಾಡಿದ್ದಾರೆ.