ಚಂದನ್ ಶೆಟ್ಟಿ ಮಾತ್ರವಲ್ಲ, ಎಲ್ಲರಿಗೂ ಖಡಕ್ ವಾರ್ನಿಂಗ್ ಕೊಟ್ಟ ಮೈಸೂರು ಎಸ್ ಪಿ
ಮೈಸೂರು, ನವೆಂಬರ್ 7: ಯುವ ದಸರಾ ವೇದಿಕೆಯಲ್ಲಿ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರಿಗೆ ಗಾಯಕ ಚಂದನ್ ಶೆಟ್ಟಿ ಪ್ರೇಮ ನಿವೇದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇಂತಹ ವರ್ತನೆ ಮತ್ತೆ ಮರುಕಳಿಸದಂತೆ ಎಚ್ಚರಿಕೆ ವಹಿಸಿಕೊಳ್ಳಬೇಕು ಎಂದು ವಾರ್ನ್ ಮಾಡಿದ್ದಾರೆ.
ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ನಿವೇದಿತಾಗೆ ಪ್ರೇಮ ನಿವೇದನೆ ಮಾಡಿ ಸುದ್ದಿಯಾಗಿದ್ದರು. ಚಂದನ್ ವರ್ತನೆಗೆ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಮೈಸೂರು ದಸರಾ ಉಸ್ತುವಾರಿ ವಹಿಸಿಕೊಂಡಿದ್ದ ಸಚಿವ ವಿ. ಸೋಮಣ್ಣ ಚಂದನ್ ಶೆಟ್ಟಿ ವರ್ತನೆಗೆ ಕಿಡಿಕಾರಿದ್ದರು.
ಮೈಸೂರಿನ ಯುವದಸರಾದಲ್ಲಿ ಪ್ರೇಮ ನಿವೇದನೆ
ಇದೇ ಅಕ್ಟೋಬರ್ 4ರಂದು ಯುವ ದಸರಾದಲ್ಲಿ ಚಂದನ್ ಶೆಟ್ಟಿ ಸಂಗೀತ ಕಾರ್ಯಕ್ರಮ ನೀಡಿದ್ದರು. ಇದೇ ಕಾರ್ಯಕ್ರಮದಲ್ಲಿ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿದ್ದರು. ವೇದಿಕೆ ಮೇಲೆ ನಿವೇದಿತಾಗೆ ರಿಂಗ್ ಹಾಕಿದ ಚಂದನ್ ನಂತರ ತಮ್ಮ ಅಭಿಮಾನಿಗಳ ಜೊತೆಗೆ ಮಾತನಾಡಿದರು. ''ಈ ದಿನ ನಾನು ಪ್ರಪೋಸ್ ಮಾಡುತ್ತೇನೆ ಎಂದು ತಿಳಿದಿರಲಿಲ್ಲ. ಆದರೆ, ನಿಮ್ಮೆಲ್ಲರ ಮುಂದೆ ನಿವೇದಿತಾಗೆ ಪ್ರಪೋಸ್ ಮಾಡಿದ್ದೇನೆ. ಸದ್ಯದಲ್ಲಿಯೇ ನಾವು ಮದುವೆ ಆಗುತ್ತಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲೆ ಇರಲಿ.'' ಎಂದು ಹೇಳಿದ್ದಾರೆ. ಈ ಒಂದು ನಡೆಗೆ ಭಾರೀ ವಿರೋಧವೂ ವ್ಯಕ್ತವಾಗಿತ್ತು.
ಯುವ ದಸರಾದಲ್ಲಿ ಚಂದನ್ ಪ್ರೇಮ ನಿವೇದನೆ; ಅಕ್ಷಮ್ಯ ಅಪರಾಧ ಎಂದ ಸೋಮಣ್ಣ
ವೇದಿಕೆ ದುರುಪಯೋಗದ ಆರೋಪ
ಸಾಮಾಜಿಕ ಜಾಲತಾಣಗಳಲ್ಲೂ ಚಂದನ್ ವರ್ತನೆ ಚರ್ಚೆಗೆ ಗ್ರಾಸವಾಗಿತ್ತು. ದಸರಾ ವೇದಿಕೆ ದುರುಪಯೋಗಪಡಿಸಿಕೊಂಡ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಚಂದನ್ ಗೆ ನೋಟಿಸ್ ಜಾರಿಗೊಳಿಸಿತ್ತು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಈ ನಡೆಯನ್ನು ಖಂಡಿಸಿ "ಚಂದನ್ ಮತ್ತು ನಿವೇದಿತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸೋಮಣ್ಣ, "ಯುವ ದಸರಾ ವೇದಿಕೆ ಚಾಮುಂಡಿಶ್ವರಿಯ ದೇವರ ಸನ್ನಿಧಿ. ಆ ತಾಯಿಯ ಸನ್ನಿಧಿಯಲ್ಲಿ ಈ ರೀತಿಯ ನಡೆ ಸರಿಯಲ್ಲ. ಇನ್ನು ಆರು ತಿಂಗಳಲ್ಲಿ ಅವರಿಬ್ಬರಿಗೂ ಆ ತಾಯಿ ಶಿಕ್ಷೆ ನೀಡುತ್ತಾಳೆ. ಈ ಅಪರಾಧಕ್ಕೆ ಕ್ಷಮೆಯೇ ಇಲ್ಲ" ಎಂದಿದ್ದರು. ನಂತರ ಚಂದನ್ ಶೆಟ್ಟಿ ಕ್ಷಮೆ ಕೇಳಿದ್ದರು.
ಚಂದನ್-ನಿವೇದಿತಾ ನಿಶ್ಚಿತಾರ್ಥ
ದಸರಾ ವೇದಿಕೆಯಲ್ಲಿ ಪ್ರೇಮ ನಿವೇದನೆ ಮಾಡಿಕೊಂಡ ಈ ಜೋಡಿ ಸ್ವಲ್ಪ ದಿನಗಳಲ್ಲೇ ನಿಶ್ಚಿತಾರ್ಥವನ್ನೂ ಮಾಡಿಕೊಂಡಿತು. ಅಕ್ಟೋಬರ್ 21ರಂದು ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಿಶ್ಚಿತಾರ್ಥವನ್ನು ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಭಾಗಿಯಾಗಿ ನೆರವೇರಿಸಿದ್ದರು.
ಅಭಿಮಾನಿಗಳ ಮುಂದೆ ಎಂಗೇಜ್ ಆದ ಚಂದನ್ ಶೆಟ್ಟಿ - ನಿವೇದಿತಾ ಗೌಡ : ಸದ್ಯದಲ್ಲೇ ಮದುವೆ
ಬ್ಯಾನ್ ಮಾಡುವ ಎಚ್ಚರಿಕೆ ಕೊಟ್ಟ ಎಸ್ ಪಿ
ಈ ಘಟನೆ ಬಗ್ಗೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಚಂದನ್ ಶೆಟ್ಟಿ ವಿವರಣೆಯನ್ನೂ ನೀಡಿದ್ದರು. ಇಂತಹ ವರ್ತನೆ ಮರುಕಳಿಸಿದರೆ ಸರಕಾರಿ ಕಾರ್ಯಕ್ರಮದಿಂದ ನಿಮ್ಮನ್ನು ಬ್ಯಾನ್ ಮಾಡುತ್ತೇವೆ ಎಂದು ಎಸ್ಪಿ ಸಿ.ಬಿ.ರಿಷ್ಯಂತ್ ಎಚ್ಚರಿಕೆ ನೀಡಿದ್ದಾರೆ. ಚಂದನ್ ಶೆಟ್ಟಿ ಮಾತ್ರವಲ್ಲ ಸರಕಾರಿ ವೇದಿಕೆಯನ್ನು ಖಾಸಗಿತನಕ್ಕೆ ಬಳಸಿಕೊಳ್ಳುವ ಎಲ್ಲಾ ಕಲಾವಿದರಿಗೂ ಎಚ್ಚರಿಕೆ ನೀಡಲಾಗಿದೆ ಎಂದಿದ್ದಾರೆ ಎಸ್ಪಿ ರಿಷ್ಯಂತ್. "ಘಟನೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಬಿಟ್ಟಿದ್ದೇವೆ. ಜಿಲ್ಲಾಧಿಕಾರಿಗಳು ಎಲ್ಲವನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತಾರೆ" ಎಂದು ತಿಳಿಸಿದ್ದಾರೆ.