ಸಾರಾ ಸಭಾಂಗಣ ಕುರಿತು ಸಮಗ್ರ ತನಿಖೆ ಮಾಡಿ ಎಂದ ರೋಹಿಣಿ ಸಿಂಧೂರಿ
ಮೈಸೂರು, ಜೂನ್ 10: "ಮೈಸೂರು ನಗರದ ವಿವಾದಿತ ಸ್ಥಳದಲ್ಲಿ ನಿರ್ಮಾಣವಾಗಿರುವ ಶಾಸಕ ಸಾ.ರಾ ಮಹೇಶ್ ಒಡೆತನದ ಕಲ್ಯಾಣ ಮಂಟಪಕ್ಕೆ ಸಂಬಂಧಿಸಿದಂತೆ 'ಸಮಗ್ರ ತನಿಖೆ' ನಡೆಸುವಂತೆ" ಪ್ರಾದೇಶಿಕ ಆಯುಕ್ತರಿಗೆ, ಮೈಸೂರಿನ ವರ್ಗಾಯಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮನವಿ ಮಾಡಿದ್ದಾರೆ.
ಈ ಸಂಬಂಧ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ರೋಹಿಣಿ ಸಿಂಧೂರಿ, "ಕಲ್ಯಾಣ ಮಂಟಪಕ್ಕೆ ಸಂಬಂಧಿಸಿದಂತೆ ಅನೇಕ ಅಕ್ರಮಗಳಿವೆ. ಸರ್ವೆ ಸಂಖ್ಯೆ 123ರಲ್ಲಿ ಕಲ್ಯಾಣ ಮಂಟಪ ನಿರ್ಮಾಣವಾಗಿದೆ. ಆದರೆ, ಈ ಜಾಗ ಸರ್ಕಾರಿ ಗೋಮಾಳ ಭೂಮಿ. ಆದ್ದರಿಂದ ಅದು ಹೇಗೆ ಖಾಸಗಿಯಾಗುತ್ತದೆ" ಎಂದು ಪ್ರಶ್ನಿಸಿದ್ದಾರೆ.
"ಈ ಕುರಿತಾದ ಅನುದಾನದ ಸರಿಯಾದ ದಾಖಲೆಗಳು ಲಭ್ಯವಿಲ್ಲ. ಭೂ ಪರಿವರ್ತನೆಯನ್ನು ಸುಳ್ಳಿನಿಂದ ತೆಗೆದುಕೊಳ್ಳಲಾಗಿದೆ ಮತ್ತು ಮಾಸ್ಟರ್ ಪ್ಲ್ಯಾನ್ಗೆ ವಿರುದ್ಧವಾಗಿದೆ ಎಂದು ದೂರಿದ್ದಾರೆ. ವಿಚಾರಣೆಯು ಒಂದು ವಿಷಯಕ್ಕೆ (ರಾಜಕಾಲುವೆ) ಮಾತ್ರ ಆರಿಸುವುದು ಮತ್ತು ಆಯ್ಕೆ ಮಾಡಿರುವುದು. ಲಿಂಗಾಂಬುದಿ ಕೆರೆ ಸಮೀಪದ ಭೂಮಿಯ ಅತಿಕ್ರಮಣ ನಡೆದಿದೆ. ಇದನ್ನು ವಿಚಾರಣೆಗೆ ಒಳಪಡಿಸುವಂತೆ" ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕೋರಿದ್ದಾರೆ.
ಶಾಸಕ ಸಾ.ರಾ ಮಹೇಶ್ ಅವರ ಆಯ್ಕೆಯ ಪ್ರಕಾರ, ಕೇವಲ ಒಂದು ಆಯ್ದ ವಿಷಯಕ್ಕೆ ಮಾತ್ರ ವಿಚಾರಣೆ ನಡೆಸದೆ, ಎಲ್ಲಾ ಅಂಶಗಳ ಬಗ್ಗೆ ಸಮಗ್ರ ಮತ್ತು ಸರಿಯಾದ ವಿಚಾರಣೆ ನಡೆಸಿ ಎಂದು ಮನವಿ ಮಾಡಿದ್ದಾರೆ.