ಅನ್ಲಾಕ್ ನಂತರ ಚಾಮುಂಡಿ ಬೆಟ್ಟದ ಕಾಣಿಕೆಯಲ್ಲಿ ಸುಧಾರಣೆ: ಸಂಗ್ರಹವಾಗಿದ್ದೆಷ್ಟು?
ಮೈಸೂರು, ಜನವರಿ 29: ಕೊರೊನಾ ಲಾಕ್ಡೌನ್ ನಿಂದಾಗಿ ದೇವಸ್ಥಾನಗಳ ಕಾಣಿಕೆ ಹುಂಡಿಯಲ್ಲಿ ಆದಾಯ ಇಳಿಕೆಯಾಗಿತ್ತು. ಅನ್ ಲಾಕ್ ನಿಯಮ ಜಾರಿ ಬಳಿಕ ಪ್ರವಾಸಿ ಸ್ಥಳ, ಧಾರ್ಮಿಕ ಕ್ಷೇತ್ರಗಳತ್ತ ಹೆಚ್ಚಿದ ಜನಸಂಖ್ಯೆ ಹರಿದು ಬರುತ್ತಿದೆ.
ಮೈಸೂರಿನ ಪ್ರಮುಖ ಪ್ರವಾಸಿತಾಣ, ಧಾರ್ಮಿಕ ಕೇಂದ್ರವಾಗಿರುವ ಚಾಮುಂಡಿಬೆಟ್ಟದ ಕಾಣಿಕೆಯಲ್ಲಿ ಸುಧಾರಣೆ ಕಂಡುಬಂದಿದೆ. ಹೊರರಾಜ್ಯ, ಹೊರ ಜಿಲ್ಲೆಗಳಿಂದ ಚಾಮುಂಡಿ ದೇವಿ ದರ್ಶನಕ್ಕೆ ಆಗಮಿಸುತ್ತಿರುವ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಿದೆ.
ಮೈಸೂರು ರಸ್ತೆಗಿಳಿದ 'ಅಂಬಾರಿ' ಡಬ್ಬಲ್ ಡೆಕ್ಕರ್ ಬಸ್
ವಾರಾಂತ್ಯ, ಸರ್ಕಾರಿ ರಜೆ ದಿನಗಳಂದು ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ದುಪ್ಪಟ್ಟಾಗಿದ್ದು, ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಒಂದು ಕೋಟಿ ಮೂವತ್ಮೂರು ಲಕ್ಷ ಇಪ್ಪತ್ತೈದು ಸಾವಿರದ ಮೂನ್ನೂರಾ ಎರಡು ರೂ.(1,33,25,302) 42 ದಿನದಲ್ಲಿ ಇಷ್ಟು ಕಾಣಿಕೆ ಸಂಗ್ರಹಗೊಂಡಿದೆ.
ಚಿನ್ನ 253 ಗ್ರಾಂ, ಬೆಳ್ಳಿ 810 ಗ್ರಾಂ ಭಕ್ತರು ನೀಡಿದ್ದು, ಡಿಸೆಂಬರ್ 17ರಿಂದ ಜ.27ರವರೆಗೆ 1,33,25,302 ರೂ. ಸಂಗ್ರಹವಾಗಿದೆ. ಚಾಮುಂಡಿ ಬೆಟ್ಟದ ದಾಸೋಹ ಭವನದಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ 60ಕ್ಕೂ ಹೆಚ್ಚು ಮಂದಿಯಿಂದ ಎಣಿಕೆ ಕಾರ್ಯ ನಡೆಯಿತು.
ಕೊರೊನಾ ಕಡಿಮೆಯಾಗುತ್ತಿದ್ದಂತೆ ಚಾಮುಂಡಿ ಬೆಟ್ಟಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಭಕ್ತರ ಸಂಖ್ಯೆ ಹೆಚ್ಚಾದಂತೆ, ಕಾಣಿಕೆಯ ಮೊತ್ತವೂ ಏರಿಕೆಯಾಗಿದೆ.
ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ, ಮಹಾಬಲೇಶ್ವರ ದೇವಸ್ಥಾನದ ಹುಂಡಿಯಲ್ಲಿ 1,33,25,302 ರೂ. ನಗದು, 253 ಗ್ರಾಂ ಚಿನ್ನ ಹಾಗೂ 810 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ ಎಂದು ದೇವಸ್ಥಾನ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯನಿರ್ವಹಣಾಧಿಕಾರಿ ಯತಿರಾಜನ್ ಸಂಪತ್ ಕುಮಾರನ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜ್, ಮುಜರಾಯಿ ತಹಶೀಲ್ದಾರ್ ಜಗದೀಶ್, ಪ್ರಧಾನ ಆಗಮಿಕ ಡಾ.ಎನ್.ಶಶಿಶೇಖರ್ ದೀಕ್ಷಿತ್, ಚಾಮುಂಡೇಶ್ವರಿ ದೇವಾಲಯ ಮತ್ತು ಅರಮನೆ ಮುಜರಾಯಿ ಸಮೂಹ ದೇವಾಲಯಗಳ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಿ.ಕಾಳಯ್ಯ, ಟ್ರಸ್ಟಿಗಳಾದ ಆರ್.ಶಿವಲಿಂಗು, ಯು.ಸಿ.ಕುಮಾರಿ, ಸವಿತಾ ಘಾಟ್ಕೆ, ಮಾಜಿ ಧರ್ಮದರ್ಶಿ ಉತ್ತನಹಳ್ಳಿ ಶಿವಣ್ಣ ಸಮ್ಮುಖದಲ್ಲಿ ಹುಂಡಿಗಳನ್ನು ತರಲಾಯಿತು.
ಬಳಿಕ ದೇವಾಲಯದ ಅಧಿಕಾರಿಗಳು, ಟ್ರಸ್ಟ್ ಪದಾಧಿಕಾರಿಗಳು ಹಾಗೂ ಬೆಟ್ಟದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಬೆಟ್ಟದ ಶಾಖೆಯ ಮ್ಯಾನೇಜರ್ ಶಾಲಿನಿ ಪ್ರಭು ಸಮ್ಮುಖದಲ್ಲಿ ದೇವಾಲಯದ ಸಿಬ್ಬಂದಿ, ಕರ್ನಾಟಕ ಬ್ಯಾಂಕ್ ಸಿಬ್ಬಂದಿ ವರ್ಗ ಹಾಗೂ ಸ್ವಯಂ ಸೇವಕರು ಸಂಜೆವರೆಗೂ ಹುಂಡಿಯಲ್ಲಿದ್ದ ಕಾಣಿಕೆ ಮೊತ್ತವನ್ನು ಎಣಿಕೆ ಮಾಡಿದರು.