ಬೆಂಗಳೂರಿನ ಲೇಡಿ ರೌಡಿ ಶೀಟರ್ ಆಪ್ತರಿಂದ ಮೈಸೂರು ಯುವಕನಿಗೆ ಹಲ್ಲೆ: 80 ಹೊಲಿಗೆ
ಮೈಸೂರು, ಸೆಪ್ಟೆಂಬರ್ 22: ಮೈಸೂರಿನ ಶ್ರೀರಾಂಪುರದಲ್ಲಿ ವೈದ್ಯಕೀಯ ರಿಹಾಬ್ ಸೆಂಟರ್ ಇಟ್ಟುಕೊಂಡಿದ್ದ ವ್ಯಕ್ತಿಯೋರ್ವನಿಗೆ ರೌಡಿ ಶೀಟರ್ ಗಳು ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಅರುಣ ಎಂಬಾತನೇ ಹಲ್ಲೆಗೆ ಒಳಗಾಗಿದ್ದು, ಈತ ಶ್ರೀರಾಂಪುರ ರಿಂಗ್ ರೋಡ್ ನಲ್ಲಿ ರಿಹಾಬ್ ಸೆಂಟರ್ ನ್ನು ಇಟ್ಟುಕೊಂಡಿದ್ದ. ಈತ ತನ್ನ ಮೊದಲ ಪತ್ನಿಗೆ ಡಿವೋರ್ಸ್ ನೀಡಿದ್ದನು. ನಂತರ ಬೆಂಗಳೂರಿನ ರೌಡಿ ಶೀಟರ್ ಅಶ್ವಿನಿ ಎಂಬಾಕೆಯ ಪರಿಚಯ ಆಗಿತ್ತು.
ಅಶ್ವಿನಿಯ ಸ್ನೇಹಿತೆಯನ್ನೇ ಕಳೆದ ಸೆಪ್ಟೆಂಬರ್ ೬ರಂದು ವಿವಾಹವಾಗಿದ್ದ. ಕಳೆದ ವಾರ ನೂತನ ದಂಪತಿಗೆ ಪಾರ್ಟಿ ಕೊಡಿಸುವ ನೆಪದಲ್ಲಿ ಬೆಂಗಳೂರಿಗೆ ಕರೆಸಿಕೊಂಡು ಅಶ್ವಿನಿ ಮತ್ತು ಸಹಚರರು ಅರುಣ್ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ಅರುಣ್ ನನ್ನು ಥಳಿಸುವ ದೃಶ್ಯವನ್ನು ವಿಡಿಯೋ ಮಾಡಿ ವೈರಲ್ ಕೂಡ ಮಾಡುತ್ತಾರೆ. ಇದಕ್ಕೆ ಶ್ರೀರಂಗಪಟ್ಟಣದ ರೌಡಿ ಶೀಟರ್ ಕೂಡ ಸಾಥ್ ನೀಡಿದ್ದು, ಆ ದಿನವೇ ಅರುಣನ ಕಾರು ಕಿತ್ತುಕೊಂಡು ಕಳುಹಿಸಿದ್ದಾರೆ.
ಇದು ಸಹಜವಾಗಿಯೇ ಅರುಣನನ್ನು ಕೆರಳಿಸಿರುತ್ತದೆ. ನಿನ್ನೆ ಕಂಠ ಪೂರ್ತಿ ಕುಡಿದ ಅರುಣ್ ಶ್ರೀರಂಗಪಟ್ಟಣದ ರೌಡಿಗೆ ಫೋನ್ ಮಾಡಿ ಅವಾಜ್ ಹಾಕಿದ್ದಾನೆ. ನಿನಗೆ ಧೈರ್ಯ ಇದ್ದರೆ ಮೈಸೂರಿನ ಬಲ್ಲಾಳ್ ಸರ್ಕಲ್ ಗೆ ಬಾ ಅಂತ ಚಾಲೆಂಜ್ ಮಾಡುತ್ತಾನೆ.
ನಿನ್ನೆ ಆ ರೌಡಿ ಶೀಟರ್ ಬರ್ತ್ ಡೇ ಇದ್ದು, ಅವರೆಲ್ಲಾ ಮದ್ಯ ಪಾರ್ಟಿ ಮಾಡಿಕೊಂಡಿದ್ದರು. ಕುಡಿದ ಮತ್ತಿನಲ್ಲಿದ್ದ ರೌಡಿಯ ಸಹಚರರಿಗೆ ಅರುಣ್ ಚಾಲೆಂಜ್ ಮಾಡಿರುವುದು ಸಿಟ್ಟು ಬರಿಸುತ್ತದೆ. ಕೂಡಲೇ ಎರಡು ವಾಹನಗಳಲ್ಲಿ 18 ಜನರ ತಂಡದೊಂದಿಗೆ ಶ್ರೀರಂಗಪಟ್ಟಣದ ರೌಡಿ ಶೀಟರ್ ಬಲ್ಲಾಳ್ ಸರ್ಕಲ್ ಬರುತ್ತಾನೆ.
ಅಲ್ಲಿ ಎದುರಾದ ಅರಣ್ ಗೆ ಹಿಗ್ಗಾಮುಗ್ಗಾ ಥಳಿಸಿ ಪರಾರಿ ಆಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಅರುಣ್ ನನ್ನು ಮೈಸೂರು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು, ವೈದ್ಯರು 80 ಹೊಲಿಗೆ ಹಾಕಿದ್ದಾರೆ ಎನ್ನಲಾಗಿದೆ. ಡಿಸಿಪಿ ಡಾ.ಎ.ಎನ್ ಪ್ರಕಾಶ್ ಗೌಡ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದು, ಲಕ್ಷ್ಮೀಪುರಂ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.