ನೈಋತ್ಯ ರೈಲ್ವೆ ಕಾಮಗಾರಿ ಪೂರ್ಣ: ರೈಲುಗಳ ಸಂಚಾರ ಪುನರಾರಂಭ
ಮೈಸೂರು, ಜೂನ್ 25: ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಮೈಸೂರು ರೈಲು ನಿಲ್ದಾಣದ ಮೇಲ್ದರ್ಜೆ ಕಾಮಗಾರಿ ಯಶಸ್ವಿಯಾಗಿದ್ದು, ಇಂದಿನಿಂದ ರೈಲು ಸಂಚಾರ ಪುನರ್ ಆರಂಭವಾಗಿದೆ. ಕಾಮಗಾರಿ ಹಿನ್ನೆಲೆ ರೈಲುಗಳ ಕಾಯುವ ಅವಧಿಯು 30 ನಿಮಿಷ ಕಡಿಮೆಯಾಗಲಿದೆ.
ಅಳ್ನಾವರ-ಅಂಬೇವಾಡಿ ನಡುವೆ ರೈಲು ಸಂಚಾರ ಆರಂಭಿಸಲು ಮನವಿ
ಕಳೆದ ಒಂದು ತಿಂಗಳಿನಿಂದ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದ ಕಾರಣ ಜೂನ್ 16ರಿಂದ 23ರವರೆಗೆ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರಿಗೆ ತೊಂದರೆಯಾಗಿತ್ತು. ಮೈಸೂರು ಮಾರ್ಗವಾಗಿ ಬೆಂಗಳೂರು ಹಾಗೂ ಇತರ ಪ್ರದೇಶಗಳಿಗೆ ಹೋಗುವ 30 ವಿವಿಧ ರೈಲುಗಳ ಸಂಚಾರ ರದ್ದಾಗಿತ್ತು. 15 ರೈಲುಗಳು ಭಾಗಶಃ ರದ್ದಾಗಿ, 5 ರೈಲುಗಳ ಮಾರ್ಗ ಬದಲಾಯಿಸಲಾಗಿತ್ತು. ಇದೇ ವೇಳೆ ಪ್ರಯಾಣಿಕರು ಹೆಚ್ಚಾಗಿ ಬಸ್ ಅವಲಂಬಿಸಿದ್ದರು. ಚೆನ್ನೈ ಎಕ್ಸ್ಪ್ರೆಸ್ ಸೇರಿದಂತೆ ಕೆಲವು ರೈಲುಗಳು ಪಾಂಡವಪುರದಿಂದ ತೆರಳುತ್ತಿದ್ದವು. ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ವತಿಯಿಂದಲೇ ಅಲ್ಲಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು.
ರೈಲ್ವೆ ನಿಲ್ದಾಣದಲ್ಲಿರುವ ಪ್ಲಾಟ್ಫಾರ್ಮ್ ಸಂಖ್ಯೆ 5 ಮತ್ತು 6ರಲ್ಲಿ ಚಾಮರಾಜನಗರದ ಕಡೆಗೆ ರೈಲುಗಳು ಹೋಗಲು ಸಾಧ್ಯವಿರಲಿಲ್ಲ. 1 ಮತ್ತು 4ನೇ ಪ್ಲಾಟ್ಫಾರ್ಮ್ನಿಂದ ಮಾತ್ರ ರೈಲುಗಳು ಚಾಮರಾಜನಗರದತ್ತ ಸಂಚರಿಸುತ್ತಿದ್ದವು. ಈ ಪ್ಲಾಟ್ಫಾರ್ಮ್ಗಳಲ್ಲಿ ರೈಲುಗಳು ನಿಂತಿದ್ದರೆ ಸಂಚಾರ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, 5 ಮತ್ತು 6ನೇ ಪ್ಲಾಟ್ಫಾರ್ಮ್ಗಳನ್ನು ಮೇಲ್ದರ್ಜೆಗೆ ಏರಿಸುವ ಕೆಲಸ ನಡೆದಿದ್ದು, ಅಲ್ಲಿಂದಲೂ ರೈಲುಗಳು ಚಾಮರಾಜನಗರದತ್ತ ಸಂಚರಿಸುವುದು ಸಾಧ್ಯವಾಗಲಿದೆ. ಈ ಮೇಲ್ದರ್ಜೆ ಕಾಮಗಾರಿ ಜನರಿಗೆ ಮತ್ತಷ್ಟು ಅನುಕೂಲವಾಗಿರಲಿವೆ.