ಪೌರಕಾರ್ಮಿಕರಿಗೆ ಇನ್ಮುಂದೆ ಸಿಗಲಿದೆ ಬಿಸಿ ಬಿಸಿ ಟಿಫನ್
ಮೈಸೂರು, ಜೂನ್ 28: ನಗರವನ್ನು ಸ್ವಚ್ಛವಾಗಿಡುವಲ್ಲಿ ಪೌರಕಾರ್ಮಿಕರ ಪಾತ್ರ ಹೆಚ್ಚಿದೆ. ಅದರಲ್ಲೂ ಸ್ವಚ್ಛ ನಗರಿ ಎಂದು ಹೆಸರು ಪಡೆದಿರುವ ಮೈಸೂರಿನಲ್ಲಿ ಅವರದ್ದು ಇನ್ನೂ ಹೆಚ್ಚಿನ ಜವಾಬ್ದಾರಿ. ಹಾಗಾಗಿ ಅವರ ಅನುಕೂಲಕ್ಕೆ ಬೆಳಗ್ಗಿನ ತಿಂಡಿಯನ್ನು ಪೂರೈಸಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದ್ದು, ಅದಕ್ಕಾಗಿ ಟೆಂಡರ್ ಪ್ರಕ್ರಿಯೆ ಸಹ ಪೂರ್ಣಗೊಂಡಿದೆ.
ಗುತ್ತಿಗೆ ಪೌರಕಾರ್ಮಿಕರಿಗೂ ಸರ್ಕಾರದಿಂದ ಹೆಲ್ತ್ಕಾರ್ಡ್: ಜಿ ಪರಮೇಶ್ವರ
ಕಳೆದ ಮೂರು ಬಾರಿ ಉಪಾಹಾರ ಪೂರೈಸಲು ಟೆಂಡರ್ ಕರೆದಿದ್ದರೂ ಯಾರೂ ಮುಂದೆ ಬರಲಿಲ್ಲ. ಟೆಂಡರ್ ನಲ್ಲಿ 20ರೂಪಾಯಿಗೆ ಒಬ್ಬರಿಗೆ ಉಪಾಹಾರ ನೀಡಬೇಕೆಂದು ತಿಳಿಸಿದ್ದು, ಅಷ್ಟು ಕಡಿಮೆಗೆ ಮಾಡಲು ಸಾಧ್ಯವಿಲ್ಲವೆಂದು ಹಿಂದೇಟು ಹಾಕಿದ್ದರು. ಈ ಕಾರಣಕ್ಕಾಗಿಯೇ ಪೌರಕಾರ್ಮಿಕರಿಗೆ ಕಳೆದ 2 ವರ್ಷದಿಂದಲೂ ಉಪಾಹಾರ ಲಭ್ಯವಾಗಿರಲಿಲ್ಲ. ಹೀಗಾಗಿ ದರ ಹೆಚ್ಚಿಸುವಂತೆ ಪಾಲಿಕೆಯು ನಗರಾಭಿವೃದ್ಧಿ ಇಲಾಖೆಗೆ ಪತ್ರ ಕೂಡ ಬರೆದಿತ್ತು. ತಾತ್ಕಾಲಿಕವಾಗಿ ಇಂದಿರಾ ಕ್ಯಾಂಟೀನ್ನಿಂದ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಈ ಕ್ಯಾಂಟೀನ್ಗಳಲ್ಲಿ ತಿಂಡಿ ಸೇವಿಸುವುದನ್ನು ಪೌರ ಕಾರ್ಮಿಕರು ನಿಲ್ಲಿಸಿದರು. ನಿತ್ಯ ಒಂದೇ ರೀತಿ ಇರುತ್ತದೆ, ಚೆನ್ನಾಗಿರುವುದಿಲ್ಲ ಎಂದು ನಿರಾಕರಿಸಿದ್ದರು. ಹೀಗಾಗಿ, ಮೂರು ತಿಂಗಳಿನಿಂದ ಅಲ್ಲೂ ಉಪಾಹಾರ ಮಾಡುತ್ತಿರಲಿಲ್ಲ. ಈ ಹಣದ ಮೊತ್ತವನ್ನು ಪೌರ ಕಾರ್ಮಿಕರಿಗೆ ನೀಡಬೇಕೆಂದು ಒತ್ತಾಯ ಸಹ ಮಾಡಲಾಗಿತ್ತು.
ಇದೀಗ ಮೈಸೂರು ಮಹಾನಗರ ಪಾಲಿಕೆಯಲ್ಲಿರುವ ಒಟ್ಟು 65 ವಾರ್ಡ್ ಗಳಲ್ಲಿ 1,645 ಗುತ್ತಿಗೆ ಪೌರಕಾರ್ಮಿಕರು ದಿನನಿತ್ಯ ಕಾರ್ಯ ನಿವರ್ಹಿಸುತ್ತಾರೆ. ಅದರಲ್ಲಿಯೂ 530 ಕಾಯಂ ಪೌರಕಾರ್ಮಿಕರು ಇದ್ದಾರೆ. ಅಲ್ಲದೇ, ಒಳಚರಂಡಿ ಕಾರ್ಮಿಕರ ಸಂಖ್ಯೆ 212. ಹೆಚ್ಚಿನವರು ಬೆಳಿಗ್ಗೆ 5 ಗಂಟೆಗೆ ಕೆಲಸಕ್ಕೆ ಬರುತ್ತಾರೆ. ಮಧ್ಯಾಹ್ನದವರೆಗೆ ಸ್ವಚ್ಛತಾ ಕೆಲಸದಲ್ಲಿ ತೊಡಗುತ್ತಾರೆ. ಅವರೆಲ್ಲರಿಗೂ ಮುಂದಿನ ದಿನಗಳಲ್ಲಿ ಈ ಉಪಾಹಾರದ ಭಾಗ್ಯ ಲಭಿಸಲಿದೆ.