ಮೈಸೂರಿನಲ್ಲಿ ಶಾಲಾ ಮಕ್ಕಳ ಆಟೋ ಚಾಲಕರಿಗೆ ಖಡಕ್ ಸೂಚನೆ
ಮೈಸೂರು, ಜೂನ್ 27: ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಆಟೋಗಳು ರಾಜ್ಯ ಉಚ್ಚ ನ್ಯಾಯಾಲಯದ ಮಾರ್ಗಸೂಚಿಯಂತೆ ನಡೆದುಕೊಳ್ಳಬೇಕು. 12 ವರ್ಷದೊಳಗಿನ 5 ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಆಟೋದಲ್ಲಿ ಕರೆದೊಯ್ಯುವಂತಿಲ್ಲ. ನಿಯಮ ಉಲ್ಲಂಘಿಸಿದಲ್ಲಿ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಎಂದು ನಗರ ಪೊಲೀಸ್ ಆಯುಕ್ತ ಕೆ. ಟಿ ಬಾಲಕೃಷ್ಣ ಎಚ್ಚರಿಸಿದ್ದಾರೆ.
ನಗರದಲ್ಲಿ ಆಟೋ ಚಾಲಕರು ಹಾಗೂ ಮಾಲೀಕರ ಸಭೆಯಲ್ಲಿ ಮಾತನಾಡಿದ ಆಯುಕ್ತರು, ಕಾನೂನು ರೂಪಿಸುವುದು ಪೊಲೀಸರಲ್ಲ. ನ್ಯಾಯಾಲಯದ ಆದೇಶವನ್ನು ನಾವು ಪಾಲಿಸಲೇಬೇಕು. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ನ್ಯಾಯಾಲಯ ಕೆಲ ಮಾರ್ಗಸೂಚಿ ನೀಡಿದೆ. ಅದರ ಅನ್ವಯ ನಡೆದುಕೊಳ್ಳಬೇಕು ಎಂದರು.
ಹ್ಯಾಪಿ ನ್ಯೂಸ್: ಶಾಲಾ ಮಕ್ಕಳ ಬ್ಯಾಗ್ ಭಾರ ಇಳಿಸಿದ ಸರ್ಕಾರ
ಇದಕ್ಕೆ ಪ್ರತಿಯಾಗಿ, ಹೆಚ್ಚುವರಿ ಮಕ್ಕಳನ್ನು ಕರೆದೊಯ್ಯಲು ಅನುವು ಮಾಡಿಕೊಡಬೇಕೆಂದು ಚಾಲಕರು ಮನವಿ ಮಾಡಿದ್ದು, ಈ ಬಗ್ಗೆ ನಿರ್ಧಾರ ಕೈಗೊಳ್ಳಲು ನನಗೆ ಅಧಿಕಾರವಿಲ್ಲ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಈ ಕಾನೂನು ಅವಶ್ಯಕ ಎಂದರು.
ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಹಣವೇ ಪ್ರಧಾನವಾದರೆ ಬೇರೆ ಅನೇಕ ವೃತ್ತಿಗಳಿವೆ. ಅವುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ವೃತ್ತಿಯಲ್ಲಿ ಎಲ್ಲ ಮಕ್ಕಳನ್ನೂ ನಮ್ಮ ಮನೆಯ ಮಕ್ಕಳೆಂಬಂತೆ ಭಾವಿಸಿ ಕಾಳಜಿಯಿಂದ ಕರೆದೊಯ್ಯಬೇಕು. ಈ ವಿಚಾರದಲ್ಲಿ ರಾಜಿಗೆ ಪೊಲೀಸ್ ಇಲಾಖೆ ತಯಾರಿಲ್ಲ ಎಂದು ತಿಳಿಸಿದರು.
ಶೀಘ್ರ ಶಾಲಾ ವಾಹನಗಳಿಗೆ ಮಹಿಳಾ ಚಾಲಕರ ನೇಮಕ
ಆಟೋಗಳಿಂದ ಹೊರಚಾಚುವಂತೆ ಬ್ಯಾಗುಗಳನ್ನು ಇಡಬಾರದು, ಆಟೋ ಕಂಬಿಗಳ ಮೇಲೆ ಮಕ್ಕಳನ್ನು ಕೂರಿಸಿಕೊಳ್ಳಬಾರದು. ಮಕ್ಕಳಿಗೆ ಸಂಚಾರ ನಿಯಮಗಳನ್ನು ಹೇಳಿಕೊಡಬೇಕು. ವಾಹನದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರಬೇಕು. 'ಆನ್ ಸ್ಕೂಲ್ ಡ್ಯೂಟಿ' ಎಂದು ವಾಹನದಲ್ಲಿ ನಮೂದಿಸಬೇಕು. ವಾಹನ ನೋಂದಣಿಯಾಗಿ 15 ವರ್ಷವಾಗಿದ್ದರೆ ಅದನ್ನು ಶಾಲಾ ಮಕ್ಕಳನ್ನು ಕರೆದೊಯ್ಯಲು ಬಳಸಬಾರದು. ಕರೆದೊಯ್ಯುವ ಮಕ್ಕಳ ಹೆಸರು, ವಿಳಾಸ, ಶಾಲೆ, ತರಗತಿ, ಮೊಬೈಲ್ ಸಂಖ್ಯೆ, ರಕ್ತದ ಗುಂಪು ಕಡ್ಡಾಯವಾಗಿ ಚಾಲಕರಿಗೆ ಗೊತ್ತಿರಬೇಕು. ಈ ನಿಯಮಗಳನ್ನು ಪಾಲಿಸದಿದ್ದರೆ ಚಾಲಕನ ಡಿಎಲ್ ರದ್ದು ಮಾಡಲಾಗುವುದು ಎಂದು ಆಯುಕ್ತರು ಖಡಕ್ ಆದೇಶ ನೀಡಿದರು.