ವಿಡಿಯೋ; ಪ್ರತಿಷ್ಠೆಗೆ ಬಲಿಯಾಯ್ತ ಮೈಸೂರಿನ 'ಮಾತೃ ಮಂಡಳಿ' ವೃತ್ತ
ಮೈಸೂರು, ಡಿಸೆಂಬರ್ 30; 'ಮಾತೃ ಮಂಡಳಿ ಸರ್ಕಲ್' ಇದು ಸಾಂಸ್ಕೃತಿಕ ನಗರಿ ಮೈಸೂರಿನ ಪ್ರತಿಯೊಬ್ಬರಿಗೂ ಚಿರಪರಿಚಿತವಾಗಿದ್ದ ತಾಣ. ದಶಕಗಳಿಂದಲೂ ಮೈಸೂರಿಗರ ಮನೆಮಾತಾಗಿದ್ದ ಈ ಜಾಗ ಇನ್ನೂ ಬರೀ ನೆನಪು ಮಾತ್ರ.
ಹೌದು...ಮೈಸೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ವಾಣಿ ವಿಲಾಸ ಮೊಹಲ್ಲಾ (ವಿವಿ ಮೊಹಲ್ಲಾ), ಪಡುವಾರಹಳ್ಳಿ ಹಾಗೂ ಕಾಳಿದಾಸ ರಸ್ತೆ ಸಂಪರ್ಕ ಕಲ್ಪಿಸುವ ವೃತ್ತವಾಗಿ ಹಲವಾರು ವರ್ಷಗಳಿಂದ ಇದ್ದ ಮಾತೃ ಮಂಡಳಿ ವೃತ್ತ ಈಗ ಬರೀ ನೆನಪು ಮಾತ್ರ.
ಸಾಂಸ್ಕೃತಿಕ ನಗರಿ ಮೈಸೂರಿನ 'ಮಾತೃ ಮಂಡಳಿ ಸರ್ಕಲ್' ಇನ್ನು ಬರೀ ನೆನಪು ಮಾತ್ರ. ಡಾ.ಅಂಬೇಡ್ಕರ್ ಹಾಗೂ ಕುವೆಂಪು ಪ್ರತಿಮೆ ಸ್ಥಾಪನೆ ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ಜಟಾಪಟಿಯಿಂದಾಗಿ ಹಲವು ವರ್ಷಗಳಿಂದ ಇದ್ದ ವೃತ್ತ ಇದೀಗ ನೆಲಸಮಗೊಂಡಿದೆ. #Mysuru #Matrumandali pic.twitter.com/S2RXUrTDth
— oneindiakannada (@OneindiaKannada) December 30, 2021
ಡಾ. ಅಂಬೇಡ್ಕರ್ ಹಾಗೂ ಕುವೆಂಪು ಪ್ರತಿಮೆ ಸ್ಥಾಪನೆ ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ಜಟಾಪಟಿಯಿಂದಾಗಿ ಹಲವು ವರ್ಷಗಳಿಂದ ಇದ್ದ ವೃತ್ತ ಇದೀಗ ನೆಲಸಮಗೊಂಡಿದೆ. ಮಾತೃ ಮಂಡಳಿ ವೃತ್ತದಲ್ಲಿ ಬುಧವಾರ ಗುಂಪೊಂದು ರಾಷ್ಟ್ರಕವಿ ಕುವೆಂಪು ಜಯಂತಿಯನ್ನು ಅಚರಿಸಲು ಮುಂದಾಗಿತ್ತು.
ಪುಷ್ಪರಾಣಿಯರ ಕಣ್ತುಂಬಿಕೊಳ್ಳಲು ಮೈಸೂರು ಅರಮನೆಗೆ ಪ್ರವಾಸಿಗರ ಲಗ್ಗೆ!
ಈ ವೇಳೆ ವೃತ್ತದ ಬಳಿ ಕುವೆಂಪು ಜಯಂತಿ ಅಚರಣೆಗೆ ಮತ್ತೊಂದು ಬಣದಿಂದ ವಿರೋಧ ವ್ಯಕ್ತವಾಗಿತ್ತು. ಇದು ಎರಡು ಗುಂಪುಗಳ ನಡುವೆ ಜಟಾಪಟಿಗೆ ಕಾರಣವಾಯಿತು. ಅಷ್ಟೇ ಅಲ್ಲದೇ ಕೆಲವೇ ಹೊತ್ತಿನಲ್ಲಿ ಎರಡೂ ಗುಂಪಿನ ಸದಸ್ಯರ ನಡುವೆ ಮಾತಿನ ಚಕಮಕಿ ಬೆಳೆದು, ಸ್ಥಳದಲ್ಲಿ ಬಿಗುವಿನ ವಾತಾವರಣವೇ ನಿರ್ಮಾಣವಾಗಿತ್ತು.
ಈ ಕಾಮಗಾರಿ ಮುಗಿದರೆ ಮೈಸೂರು-ಬೆಂಗಳೂರು ಪ್ರಯಾಣ 90 ನಿಮಿಷ!
ಈ ವೇಳೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ರಸ್ತೆಗಳನ್ನು ಬಂದ್ ಮಾಡಿ ಕುಳಿತಿದ್ದ ಎರಡು ಗುಂಪುಗಳ ಸದಸ್ಯರನ್ನು ಸಮಾಧಾಪಡಿಸಿ, ಪರಿಸ್ಥಿತಿ ತಿಳಿಗೊಳಿಸಿದ್ದರು. ಅಲ್ಲದೇ ಈ ಸಂಬಂಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು.
ವಿಡಿಯೋ; ರಸ್ತೆ ಗುಂಡಿ ಮುಚ್ಚಿದ ಪೊಲೀಸ್ ಕಾನ್ಸ್ಟೇಬಲ್
ಆದರೆ ಪರಿಸ್ಥಿತಿ ಮಾತ್ರ ಬೂದಿ ಮುಚ್ಚಿದ ಕೆಂಡದಂತಿತ್ತು. ಹೀಗಾಗಿ ಮಾತೃ ಮಂಡಳಿ ವೃತ್ತದ ಸುತ್ತಲೂ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಆ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಖಾಕಿ ಪಡೆ ಕಟ್ಟೆಚ್ಚರವಹಿಸಿತ್ತು.
ಹತ್ತಾರು ವರ್ಷಗಳಿಂದ ಮಾತೃ ಮಂಡಳಿ ವೃತ್ತವೆಂದು ಪರಿಚಿತವಾಗಿರುವ ಈ ವೃತ್ತಕ್ಕೆ ಅಂಬೇಡ್ಕರ್ ವೃತ್ತ, ಕುವೆಂಪು ವೃತ್ತ ಎಂದು ಎರಡು ಗುಂಪುಗಳು ಹಠಕ್ಕೆ ಬಿದ್ದ ಹಿನ್ನಲೆಯಲ್ಲಿ ವೃತ್ತದ ನಾಲ್ಕು ಕಡೆಯೂ ಹೆಚ್ಚಿನ ಪೊಲೀಸರ ತುಕಡಿ ನಿಯೋಜಿಸಲಾಗಿತ್ತು.
ಪರಿಸ್ಥಿತಿ ಹೀಗೆ ಮುಂದುವರಿದರೆ ಹೆಚ್ಚಿನ ಅನಾಹುತಗಳು ಸಂಭವಿಸುವ ಸಾಧ್ಯತೆ ಇರುವುದನ್ನು ಅರಿತ ಪೊಲೀಸರು ಗುರುವಾರ ಜೆಸಿಬಿ ಯಂತ್ರದ ಮೂಲಕ ಇಡೀ ವೃತ್ತವನ್ನೇ ನೆಲಸಮಗೊಳಿಸಿದ್ದಾರೆ.
ಡಿಸಿಪಿ ಪ್ರದೀಪ್ ಗುಂಟಿ ನೇತೃತ್ವದಲ್ಲಿ ಈ ತೆರವು ಕಾರ್ಯಾಚರಣೆ ನಡೆಸಲಾಗಿದ್ದು, ಈ ವೇಳೆ ಮಾತೃ ಮಂಡಳಿ ವೃತ್ತವನ್ನು ತೆರವು ಮಾಡುವುದನ್ನು ಖಂಡಿಸಿ ತಡೆಯಲು ಆಗಮಿಸಿದ ಕೆಲ ಮುಖಂಡರನ್ನು ಪೊಲೀಸರು ಬಂಧಿಸಿದರು.
ಒಟ್ಟಿನಲ್ಲಿ ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ವಿನಾಕಾರಣ ಎರಡು ಗುಂಪುಗಳ ನಡುವೆ ನಡೆದ ಜಟಾಪಟಿಯಿಂದಾಗಿ ದಶಕಗಳ ಕಾಲದಿಂದ ಇದ್ದ, ಅದೆಷ್ಟೋ ಮಂದಿಯ ಮೀಟಿಂಗ್ ಸ್ಪಾಟ್ ಆಗಿ, ಹತ್ತಾರು ಸನ್ನಿವೇಶಗಳಿಗೆ ಸಾಕ್ಷಿಯಾಗಿದ್ದ ವೃತ್ತವೊಂದು ನೆಲಸಮಗೊಂಡಿದ್ದು ನಿಜಕ್ಕೂ ಶೋಚನೀಯ ಸಂಗತಿ.
Recommended Video