ಮೈಸೂರಿನಲ್ಲಿ ಮಾರುವೇಷದಲ್ಲಿದ್ದ ಪೊಲೀಸರು ಆಟೋದವರಿಗೆ ಹಾಕಿದ ದಂಡ ಎಷ್ಟು?
ಮೈಸೂರು, ಮಾರ್ಚ್ 5: ಪ್ರಯಾಣಿಕರಿಂದ ಹೆಚ್ಚಿನ ಬಾಡಿಗೆ ವಸೂಲಿ ಮಾಡುವ ಮತ್ತು ಕರೆದ ಸ್ಥಳಕ್ಕೆ ಬಾಡಿಗೆಗೆ ಬರದೇ ಇರುವ ಆಟೋ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲು, ಪ್ರಯಾಣಿಕರಂತೆ ನಟಿಸಿ ಅರ್ಥಾತ್ ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿದ ನಗರ ಸಂಚಾರ ಪೊಲೀಸರು 35 ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ ಹದಿಮೂರು ಸಾವಿರ ರೂ.ದಂಡ ವಿಧಿಸಿದ್ದಾರೆ.
ಬಾಡಿಗೆಗೆ ಬರಲು ಒಪ್ಪದ ಎಂಟು ಚಾಲಕರಿಂದ ನಾಲ್ಕು ಸಾವಿರ ಮತ್ತು ಹೆಚ್ಚಿನ ಬಾಡಿಗೆ ಕೇಳಿದ ಹದಿನೆಂಟು ಚಾಲಕರಿಂದ ಒಂಬತ್ತು ಸಾವಿರ ರೂ.ದಂಡ ಸಂಗ್ರಹಿಸಿದ್ದಾರೆ. ದಾಖಲಾತಿ ಇಲ್ಲದ ಒಂಬತ್ತು ಆಟೋಗಳನ್ನು ವಶಪಡಿಸಿಕೊಂಡಿದ್ದು, ನ್ಯಾಯಾಲಯದಲ್ಲಿ ದಂಡ ಪಾವತಿಸುವಂತೆ ಸೂಚಿಸಿದ್ದಾರೆ.
ಆಟೋದಲ್ಲಿ ಬಿಟ್ಟಿದ್ದ ದುಬಾರಿ ಫೋನ್ ಹಿಂದಿರುಗಿಸಿದ ಚಾಲಕ
ನಿನ್ನೆ ನರಸಿಂಹರಾಜ ಸಂಚಾರ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ರೈಲ್ವೆ ನಿಲ್ದಾಣ, ಕೆ.ಆರ್.ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶ, ಬಾಬು ಜಗಜ್ಜೀವನ್ ರಾಮ್ ವೃತ್ತ, ಸರ್ ಎಂ.ವಿಶ್ವೇಶ್ವರಯ್ಯ ವೃತ್ತ, ನೆಹರು ವೃತ್ತ, ಮಿಲಾದ್ ಪಾರ್ಕ್ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ ಪ್ರಯಾಣಿಕರಂತೆ ನಟಿಸಿ ನಿಯಮ ಉಲ್ಲಂಘಿಸುವ ಚಾಲಕರನ್ನು ಪತ್ತೆ ಹಚ್ಚಿದರು. ಸಾರ್ವಜನಿಕರು ಈ ಹಿಂದೆ ಆಟೋ ಚಾಲಕರು ಹೆಚ್ಚಿನ ಬಾಡಿಗೆಗೆ ಒತ್ತಾಯಿಸುವುದು, ಕರೆದ ಸ್ಥಳಕ್ಕೆ ಬಾಡಿಗೆಗೆ ಬಾರದೇ ಇರುವ ಕುರಿತು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಡಿಸಿಪಿ ಕವಿತಾ ಮತ್ತು ಎಸಿಪಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು.