ಮೈಸೂರಿನಲ್ಲಿ ಬೆಳಗ್ಗೆ ಕದ್ದ, ಮಧ್ಯಾಹ್ನ ಸಿಕ್ಕಿಬಿದ್ದ!
ಮೈಸೂರು, ಆಗಸ್ಟ್ 22: ವೃದ್ಧೆಯ ಬಾಯಿಗೆ ಬಟ್ಟೆ ತುರುಕಿ ಅವರ ಕೈಯಲ್ಲಿದ್ದ 120 ಗ್ರಾಂ ತೂಕದ 7 ಚಿನ್ನದ ಬಳೆಗಳನ್ನು ಬೆಳಗ್ಗೆ ಕದ್ದ ಕಳ್ಳನನ್ನು ಕೇವಲ 1 ಗಂಟೆಯೊಳಗೆ ಮೈಸೂರಿನ ಲಕ್ಷ್ಮೀಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
14 ತಿಂಗಳ ನಂತರ ಕೈ ಸೇರಿತು ಕಳ್ಳತನವಾಗಿದ್ದ 90 ಗ್ರಾಂ ಚಿನ್ನವಿದ್ದ ಬ್ಯಾಗು
ಚಾಮರಾಜಪುರಂನ ಮೈಸೂರಿನ ಜಿಲ್ಲಾ ನ್ಯಾಯಾಲಯದ ಎದುರು ಇರುವ ಮನೆಯಲ್ಲಿ ಆಗಸ್ಟ್ 21ರ ಬೆಳಗ್ಗೆ ಈ ಘಟನೆ ನಡೆದಿದೆ. ಅಲೀಂ ನಗರ ನಿವಾಸಿ ರೆಹಮಾನ್ ಷರೀಫ್ (28) ಚಿನ್ನಾಭರಣ ದೋಚಿ, ಸಿಕ್ಕಿಬಿದ್ದ ಖದೀಮ.
ಮೈಸೂರಿನ 84 ವರ್ಷದ ವೃದ್ಧೆ ಆರ್.ನಾಗರತ್ನರವರು ಮನೆಯಲ್ಲಿ ಇದ್ದುದನ್ನು ಗಮನಿಸಿದ ಕಳ್ಳ ದಿಢೀರ್ ಮನೆ ಒಳಗೆ ನುಗ್ಗಿದ್ದಾನೆ. ಅವರ ಬಾಯಿಗೆ ಬಟ್ಟೆ ಅದುಮಿಟ್ಟು ಅವರ ಕೈಗಳಲ್ಲಿದ್ದ ಚಿನ್ನದ ಬಳೆಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ.
ರೆಹಮಾನ್ ಪ್ರತಿನಿತ್ಯ ಮೈಸೂರು ಕೋರ್ಟ್ ಎದುರು ಮನುವನ ಪಾರ್ಕ್ ಬಳಿ ಫುಟ್ಪಾತ್ ಮೇಲೆ ತಳ್ಳು ಗಾಡಿಯಲ್ಲಿ ಕಟ್ಫ್ರೂಟ್ಸ್ ಮಾರಾಟ ಮಾಡುತ್ತಿದ್ದ. ಸಮೀಪದಲ್ಲೇ ಇರುವ ನಾಗರತ್ನ ಅವರ ಮನೆಯ ಮಳಿಗೆಯನ್ನು ಬಾಡಿಗೆಗೆ ಪಡೆದು ಅಲ್ಲಿ ಹಣ್ಣುಗಳನ್ನು ಶೇಖರಿಸಿಡುತ್ತಿದ್ದ. ಪ್ರತೀ ದಿನ ಪ್ರಭಾವತಿ ಅವರು ವಾಕಿಂಗ್ ಹೋಗುತ್ತಿದ್ದು, ಅವರ ಪತಿಗೆ ಕಣ್ಣಿನ ಆಪರೇಷನ್ ಆಗಿರುವುದು ಹಾಗೂ ನಾಗರತ್ನ ಅವರು ಮನೆಯಲ್ಲಿರುವುದು ಈ ಎಲ್ಲಾ ಸಮಯವನ್ನೂ ನೋಡಿಕೊಂಡು ಹೊಂಚುಹಾಕಿ, ಮನೆಗೆ ನುಗ್ಗಿ ಈ ಕೃತ್ಯ ಎಸಗಿದ್ದಾನೆ.
ನಾಗರತ್ನ ಅವರೂ ಕಷ್ಟಪಟ್ಟು ಬಾಗಿಲು ತೆಗೆದು ಹೊರಗೆ ಬಂದು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಹುಡುಕಾಟ ಶುರು ಮಾಡಿದ ಪೊಲೀಸರು ಒಂದು ಗಂಟೆಯೊಳಗೇ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.